ಕರ್ನಾಟಕ ಕಾಂಗ್ರೆಸ್ನದ್ದು ಜಾತಿವಾದಿ ಸರ್ಕಾರ: ಮಾಯಾವತಿ
ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ, ಕಾಂಗ್ರೆಸ್ ತನ್ನ ಆಂತರಿಕ ಭಿನ್ನಮತವನ್ನು ತಣ್ಣಗಾಗಿಸಲು ಡಿ.ಕೆ.ಶಿವಕುಮಾರ್ರನ್ನು ಡಿಸಿಎಂ ಮಾಡಿದೆ. ಆದರೆ ಕಾಂಗ್ರೆಸನ್ನು ಗೆಲ್ಲಿಸಿದ ದಲಿತರು ಮತ್ತು ಮುಸ್ಲಿಮರನ್ನು ಕಡೆಗಣಿಸಿದ್ದು ಏಕೆ?: ಮಾಯಾವತಿ
ಲಖನೌ(ಮೇ.21): ಕರ್ನಾಟಕದಲ್ಲಿ ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ಜಾತಿವಾದಿ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಕಿಡಿಕಾರಿದ್ದಾರೆ.
ಶನಿವಾರ ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಯಾವತಿ, ‘ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ, ಕಾಂಗ್ರೆಸ್ ತನ್ನ ಆಂತರಿಕ ಭಿನ್ನಮತವನ್ನು ತಣ್ಣಗಾಗಿಸಲು ಡಿ.ಕೆ.ಶಿವಕುಮಾರ್ರನ್ನು ಡಿಸಿಎಂ ಮಾಡಿದೆ. ಆದರೆ ಕಾಂಗ್ರೆಸನ್ನು ಗೆಲ್ಲಿಸಿದ ದಲಿತರು ಮತ್ತು ಮುಸ್ಲಿಮರನ್ನು ಕಡೆಗಣಿಸಿದ್ದು ಏಕೆ? ತನ್ನ ಒಬ್ಬ ನಾಯಕರು ಉಪಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದ ದಲಿತ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ. ಯಾವುದೇ ದಲಿತ ಅಥವಾ ಮುಸ್ಲಿಂ ನಾಯಕರನ್ನು ಪಕ್ಷ ಉಪ ಮುಖ್ಯಮಂತ್ರಿಯಾಗಿ ಮಾಡಿಲ್ಲ. ಇದು ಸಂಕಷ್ಟದ ಸಮಯದಲ್ಲಿ ಮಾತ್ರವೇ ಈ ಎರಡೂ ಸಮುದಾಯವನ್ನು ಪಕ್ಷ ನೆನಪಿಸಿಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ’ ಎಂದು ಕಿಡಿಕಾರಿದ್ದಾರೆ.
ಇವರೆ ನೋಡಿ ಸಿದ್ದರಾಮಯ್ಯ ಸರ್ಕಾರದ ನೂತನ ಸಚಿವರು..!
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ 113 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಆದರೆ ಎಲ್ಲಾ ಅಭ್ಯರ್ಥಿಗಳು ಸೋತಿದ್ದರು. ಪಕ್ಷ ಕೇವಲ ಶೇ.0.31ರಷ್ಟು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿತ್ತು.