ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಯುವಕರು ಮತ್ತು ಆಸ್ತಿ ಮಾಲೀಕರನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, 56,432 ಹುದ್ದೆಗಳ ಭರ್ತಿ ಸೇರಿದಂತೆ ಒಟ್ಟು 6 ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ.

ರಾಜ್ಯದಲ್ಲಿ ಯುವ ಯುಗ ಆರಂಭಿಸುವುದಾಗಿ ಘೋಷಿಸಿದ್ದ ಡಿ.ಕೆ. ಶಿವಕುಮಾರ್‌(DK Shivakumar), ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಯುವ ಕೇಂದ್ರಿತ ಸೇರಿ ಒಟ್ಟು ಪ್ರಮುಖ 6 ನಿರ್ಣಯ ತೆಗೆದುಕೊಂಡಿದ್ದಾರೆ. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, 10000 ಭಾರತ್‌ ಜೋಡೋ ಯುವ ಸಂಘ ರಚನೆ, ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, 56,432 ಹುದ್ದೆ ಭರ್ತಿ ನೇಮಕಾತಿಗೆ ಸಂಬಂಧಿಸಿದ ವೇಳಾಪಟ್ಟಿ ಪ್ರಕಟ, ಬಿ ಖಾತಾ ಆಸ್ತಿಗಳಿಗೆ ರಾಜ್ಯದೆಲ್ಲೆಡೆ ಎ ಖಾತಾ ಮತ್ತು ಒಸಿ, ಸಿಸಿ ಇಲ್ಲದಿದ್ದರೂ ಕಟ್ಟಡಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸುವ ಘೋಷಣೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1. ಶಾಲಾ ಬಾಲಕರಿಗೂ ಬಸ್ಸಲ್ಲಿ ಉಚಿತ ಪ್ರಯಾಣ

ರಾಜ್ಯದಲ್ಲಿ ಸದ್ಯ ಶಕ್ತಿ ಯೋಜನೆಯಿಂದಾಗಿ ವಿದ್ಯಾರ್ಥಿನಿಯರಿಗೆ ಬಸ್‌ ಪಾಸ್‌ ಇಲ್ಲದಿದ್ದರೂ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ. ಆದರೆ ಬಾಲಕರು ರಿಯಾಯಿತಿ ಬಸ್‌ ಪಾಸ್‌ ಖರೀದಿಸಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಉಚಿತ ಪ್ರಯಾಣದ ಯೋಜನೆಯನ್ನು ಇದೀಗ ಬಾಲಕರಿಗೂ ವಿಸ್ತರಿಸಲಾಗಿದೆ. ಇದರಿಂದ 10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. 10 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಲು ಸರ್ಕಾರ 1700 ಕೋಟಿ ರು.ಗಳನ್ನು ವ್ಯಯಿಸಲಿದೆ.

2. 10000 ಭಾರತ್‌ ಜೋಡೋ ಯುವ ಸಂಘ ರಚನೆ

ಯುವಕರನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸುವುದು, ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಸಲುವಾಗಿ ಭಾರತ್‌ ಜೋಡೋ ಯುವಕ ಸಂಘಗಳನ್ನು ರಚಿಸಲಾಗುವುದು. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 150 ರಿಂದ 200 ಯುವ ಜನರನ್ನೊಳಗೊಂಡ ಒಂದು ಸಂಘದಂತೆ ರಾಜ್ಯಾದ್ಯಂತ ಒಟ್ಟು 10 ಸಾವಿರ ಭಾರತ್‌ ಜೋಡೋ ಯುವ ಸಂಘ ರಚನೆ ಗುರಿ ಹೊಂದಲಾಗಿದೆ. ಪ್ರತಿ ಸಂಘಕ್ಕೆ ತಲಾ 10 ಲಕ್ಷ ರು. ಅನ್ನು ಸರ್ಕಾರವೇ ನೀಡಲಿದೆ. ಇದಕ್ಕಾಗಿ 1000 ಕೋಟಿ ರು. ವ್ಯಯಿಸಲಿದೆ.==

3. 56432 ಹುದ್ದೆ ನೇಮಕಾತಿ ವೇಳಾಪಟ್ಟಿ ಪ್ರಕಟ

ನಿರುದ್ಯೊಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ 56,432 ಖಾಲಿ ಹುದ್ದೆ ಭರ್ತಿಗೆ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರಕಟಿಸಲಾಗಿದ್ದ ಹುದ್ದೆಗಳ ನೇಮಕ ಸಂಬಂಧ ಮುಂದಿನ ಸಂಪುಟ ಸಭೆಯೊಳಗೆ ವೇಳಾಪಟ್ಟಿ ಸಿದ್ಧಪಡಿಸಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸಿಎಂ ಡಿಕೆಶಿ ಸೂಚಿಸಿದ್ದಾರೆ. ಜೊತೆಗೆ ಹುದ್ದೆ ಭರ್ತಿ ಮಾಡಲು ಇದ್ದ ತೊಡಲು ನಿವಾರಿಸಲಾಗಿದೆ ಎಂದು ಸಭೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಭೆಗೆ ಮಾಹಿತಿ ನೀಡಿದ್ದಾರೆ.

4. ಸರ್ಕಾರದಿಂದ ಉದ್ಯೋಗ ವಿನಿಮಯ ಕೇಂದ್ರ

ನಿರುದ್ಯೋಗ ಸಮಸ್ಯೆ ನಿವಾರಣೆ, ಕೌಶಲ್ಯಭರಿತ ಉದ್ಯೋಗಿಗಳ ಸಮಸ್ಯೆ ಪರಿಹರಿಸಲು, ಸರ್ಕಾರದ ಪ್ರಾಯೋಜಿತ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಗೆ ನಿರ್ಧರಿಸಲಾಗಿದೆ. ಈ ಕೇಂದ್ರವು ಖಾಸಗಿ ಸಂಸ್ಥೆಗಳ ಬೇಡಿಕೆಗೆ ಅನುಗುಣವಾಗಿ ನಿರುದ್ಯೋಗಿಗಳಿಗೆ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಡಲಿದೆ. ಯೋಜನೆ ಜಾರಿಗೆ 3 ಸಚಿವರ ನೇಮಿಸಲಾಗುವುದು. ಅವರು ಉದ್ಯಮ, ಕಾಲೇಜು, ತಜ್ಞರೊಂದಿಗೆ ಸಭೆ ನಡೆಸಿ ಉದ್ಯೋಗ ವಿನಿಮಯ ಕೇಂದ್ರದ ರೂಪುರೇಷೆ ಸಿದ್ಧಪಡಿಸಲಿದ್ದಾರೆ.

5. ನೀರು, ವಿದ್ಯುತ್‌ ಸಂಪರ್ಕಕ್ಕೆ ಒಸಿ-ಸಿಸಿ ವಿನಾಯ್ತಿ

ಬೆಂಗಳೂರಿನಲ್ಲಿ ಸ್ವಾಧೀನಾನುಭವ ಪ್ರಮಾಣ ಪತ್ರ ಮತ್ತು ಪೂರ್ಣಗೊಳಿಸುವಿಕೆಯ ಪ್ರಮಾಣಪತ್ರ (ಒಸಿ-ಸಿಸಿ) ಇಲ್ಲದ 1200 ಚದರ ಅಡಿ ವಿಸ್ತೀರ್ಣದ ಕಟ್ಟಡಗಳಿಗೆ ನೀರು, ವಿದ್ಯುತ್‌ ಸಂಪರ್ಕ ಕಲ್ಪಿಸಲು ಜಾರಿಗೊಳಿಸಲಾಗಿದ್ದ ಯೋಜನೆ ರಾಜ್ಯವ್ಯಾಪಿ ವಿಸ್ತರಣೆ. ರಾಜ್ಯದೆಲ್ಲೆಡೆ 2026ರ ಮೇ 31ರವರೆಗೆ 2500 ಚದರ ಅಡಿ ವಿಸ್ತೀರ್ಣದ ನಿವೇಶನದಲ್ಲಿ ನಿರ್ಮಾಣವಾದ 3 ಅಂತಸ್ತಿನವರೆಗಿನ ಕಟ್ಟಡಗಳಿಗೆ ವಿದ್ಯುತ್‌ ಮತ್ತು ನೀರಿನ ಸಂಪರ್ಕ ನೀಡಲು ಒಸಿ-ಸಿಸಿಯಲ್ಲಿ ವಿನಾಯ್ತಿ.

6. ರಾಜ್ಯವ್ಯಾಪಿ ಬಿ ಖಾತಾ ಆಸ್ತಿಗಳಿಗೆ ಎ ಖಾತಾ

ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ ಅನ್ವಯವಾಗಿರುವ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಕ್ರಮವನ್ನು ರಾಜ್ಯಕ್ಕೂ ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಅದರ ಪ್ರಕಾರ ರಾಜ್ಯದ ಗ್ರಾಪಂನಿಂದ ಜಿಬಿಎವರೆಗಿನ ಎಲ್ಲ ಬಿ ಖಾತಾ ಆಸ್ತಿಗಳಿಗೆ ಸೂಕ್ತ ದಾಖಲೆಗಳಿದ್ದ ಎ ಖಾತಾ ನೀಡಲು ನಿರ್ಣಯಿಸಲಾಯಿತು. ಆ ಮೂಲಕ ದಾಖಲೆ ಸರಿಯಿಲ್ಲದ ಆಸ್ತಿಗಳಿಗೆ ಎದುರಾಗುತ್ತಿರುವ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಲಕ್ಷಾಂತರ ಭೂಮಾಲೀಕರಿಗೆ ಲಾಭ