Karnataka Bypolls ಉಪಚುನಾವಣೆಯ ಫಲಿತಾಂಶಕ್ಕೂ ಮುಖ್ಯಮಂತ್ರಿ ಕುರ್ಚಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಮೈಸೂರು (ಮಾ.29): ಉಪಚುನಾವಣೆಯ ಫಲಿತಾಂಶಕ್ಕೂ, ಸಿಎಂ ಕುರ್ಚಿ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಹೇಳಿದರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಅಧಿವೇಶನದಲ್ಲೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ಉಪಚುನಾವಣಾ ಫಲಿತಾಂಶಕ್ಕೂ, ಸಿಎಂ ಕುರ್ಚಿ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ‌. ದಾವಣಗೆರೆ ದಕ್ಷಿಣದಲ್ಲಿ ಯಾವ ಗೊಂದಲವೂ ಇಲ್ಲ. ಕಳೆದ ಮೂರು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿಯೂ ನಾವೇ ಗೆದ್ದಿದ್ದೇವೆ‌. ಅದು ರಾಜ್ಯದ ಜನ ನಮ್ಮ ಸರ್ಕಾರಕ್ಕೆ ಮಾಡಿದ ಆಶೀರ್ವಾದ. ಈ ಫಲಿತಾಂಶ ಕೂಡ ನಮ್ಮ ಸರ್ಕಾರಕ್ಕೆ ಜನ ಮಾಡುವ ಆಶೀರ್ವಾದ. ಇದನ್ನು ದಿಕ್ಸೂಚಿ, ಅದು, ಇದು ಎಂದು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ನಾನು ಏಪ್ರಿಲ್ 1 ರಿಂದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಏಪ್ರಿಲ್ 5ರಂದು ಕೇರಳಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ’ ಎಂದು ಅವರು ತಿಳಿಸಿದರು.

ಚುನಾವಣಾ ಪ್ರಚಾರ

ಏ.1ರಿಂದ ರಾಜ್ಯದ ಎರಡು ಕ್ಷೇತ್ರಗಳ ಪ್ರಚಾರಕ್ಕೆ ತೆರಳುವೆ. ಏ.5ರಂದು ಕೇರಳಕ್ಕೆ ತೆರಳುವೆ. ಈ ಬಾರಿ ತಮಿಳುನಾಡಿನಲ್ಲಿ ಪ್ರಚಾರಕ್ಕೆ ನಾನು ಹೋಗುತ್ತಿಲ್ಲ.

ಸಿದ್ದರಾಮಯ್ಯ, ಮುಖ್ಯಮಂತ್ರಿ