ಅತ್ತ ಭಿನ್ನ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯ ವಿರುದ್ಧ ಅಧ್ಯಕ್ಷರ ದೂರು ನೀಡಲು ಮುಂದಾಗಿದ್ದರೆ ಇತ್ತ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೆಂಬಲಿಗರು ಬೆಂಗಳೂರಲ್ಲಿ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿ ಹೋರಾಟದ ಪ್ರತಿತಂತ್ರ ಹೆಣೆಯಲು ಸಿದ್ಧತೆ ನಡೆಸಿದ್ದಾರೆ.  

ಬೆಂಗಳೂರು(ಫೆ.05): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಬಹಿರಂಗ ಸಮರವನ್ನೇ ಸಾರಿರುವ ಪಕದ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬಣದ ಮುಖಂಡರು ಮಂಗಳವಾರ ದೆಹಲಿಯಲ್ಲಿ ಬಿರುಸಿನ ಚಟುವಟಿಕೆ ನಡೆಸಿದ್ದು, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯ ದರ್ಶಿ ಬಿ.ಎಲ್.ಸಂತೋಷ್ ಸೇರಿ ಇತರರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಪಕ್ಷದ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಬುಧವಾರ ಭೇಟಿ ಮಾಡಲು ಪ್ರಯತ್ನ ನಡೆಸುತ್ತಿದ್ದು, ಸಾಧ್ಯವಾಗದಿದ್ದರೆ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಬಳಿಕ ಮತ್ತೊಮ್ಮೆ ದೆಹಲಿ ಯಾತ್ರೆ ಕೈಗೊಳ್ಳುವ ಬಗ್ಗೆಯೂ ಯತ್ನಾಳ್ ಬಣದ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಹೈಕಮಾಂಡ್ ಮುಂದೆ ಅಪ್ಪ, ಮಗನ ಕರ್ಮಕಾಂಡ ಬಿಚ್ಚಿಡುತ್ತೇವೆ: ಯಡಿಯೂರಪ್ಪ ಕುಟುಂಬದ ವಿರುದ್ಧ ಹರಿಹಾಯ್ದ ಯತ್ನಾಳ!

ಯತ್ನಾಳ್ ಬಣದ ಮುಖಂಡರಾದ ರಮೇಶ್ ಜಾರಕಿಹೊಳಿ, ಕುಮಾರ್‌ಬಂಗಾರಪ್ಪ, ಶ್ರೀಮಂತ ಪಾಟೀಲ್, ಎನ್.ರ್ಆ.ಸಂತೋಷ್ ಅವರು ರಾಜ್ಯದವರೇ ಆಗಿರುವ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಕಂಡು ರಾಜ್ಯ ಘಟಕದಲ್ಲಿನ ಬೆಳವಣಿಗೆಗಳ ಬಗ್ಗೆ ವಿವರ ನೀಡಿದರು. ಜತೆಗೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಬಾರದು, ಅವರ ಬದಲಿಗೆ ಬೇರೊಬ್ಬ ಸಮರ್ಥರನ್ನು ನೇಮಿಸಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಯತ್ನಾಳ್ ಮತ್ತಿತರ ಕೆಲ ಮುಖಂಡರು ಮಂಗಳವಾರ ರಾತ್ರಿ ದೆಹಲಿಗೆ ತಲುಪಿದರು. ಬುಧವಾರ ಪಕ್ಷದ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಲು ಯತ್ನಾಳ್ ಬಣದಮುಖಂಡರುಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅಮಿತ್ ಶಾ ಅವರು ಇನ್ನೂ ಈ ಭೇಟಿಗೆ ಹಸಿರು ನಿಶಾನೆ ತೋರಿಲ್ಲ. ಅದಕ್ಕೂ ಮೊದಲು ಎಂಬಂತೆ ಮಂಗಳವಾರ ಯತ್ನಾಳ್ ಬಣದ ಮುಖಂಡರು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ಸಂಸದರನ್ನು ಒಬ್ಬೊಬ್ಬರಾಗಿ ಭೇಟಿ ಮಾಡಿ ವಿಜಯೇಂದ್ರ ವಿರುದ್ಧ ಅಭಿಪ್ರಾಯ ರೂಪಿಸುವ ಪ್ರಯತ್ನ ನಡೆಸಿದರು. ಹೆಚ್ಚಿನ ಸಂಸದರು ವಿಜಯೇಂದ್ರ ಅವರನ್ನು ಮುಂದುವರೆಸುವ ಬಗ್ಗೆ ಯಾವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ನಿರ್ಧರಿತವಾಗ 'ಬಹುದು ಎನ್ನಲಾಗುತ್ತಿದೆ.

ವಿಜಯೇಂದ್ರ ಅವರನ್ನು ಬದಲಿಸುವ ಏಕೈಕ ಉದ್ದೇಶ ಹೊಂದಿರುವ ಈ ಯತ್ನಾಳ್ ಬಣದ ಮುಖಂಡರು ಪಕ್ಷದ ರಾಷ್ಟ್ರೀಯ ಘಟಕದ ಮೇಲೆ ಪ್ರಭಾವ ಬೀರುವಂಥ ಇತರ ನಾಯಕರನ್ನೂ ಭೇಟಿ ಮಾಡಿ ಮನವರಿಕೆ ಮಾಡಿಕೊಡುವುದರಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಬಿಜೆಪಿ ವರಿಷ್ಠರ ನಡೆ ಬಗ್ಗೆ ಈಗ ಪಕ್ಷದಲ್ಲಿ ಕುತೂಹಲ

ಬೆಂಗಳೂರು: ದೆಹಲಿಯಲ್ಲಿ ಬಿಜೆಪಿ ಭಿನ್ನರ ಚಟುವಟಿಕೆ ತೀವ್ರಗೊಂಡ ಬೆನ್ನಲ್ಲೇ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಬಿ.ವೈ.ವಿಜಯೇಂದ್ರ ಅವರೇ ಮುಂದುವರೆ ಯುತ್ತಾರಾ ಎಂಬ ಪ್ರಶ್ನೆ ಪಕ್ಷದಲ್ಲಿ ಕೇಳಿಬರತೊಡಗಿದೆ. 

ನಮ್ಮ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: 

ಈ ಬಾರಿ ಮಾಡು ಇಲ್ಲವೇ ಮಡಿ ಹೋರಾಟ ನಮ್ಮದು ಎಂದು ಭಿನ್ನರ ಗುಂಪಿನ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಘೋಷಣೆ ಮಾಡಿ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಚುನಾವಣೆ ಮಾಡದೆ ವಿಜಯೇಂದ್ರ ಅವರನ್ನು ಮುಂದುವರೆಸುವ ನಿರ್ಧಾರ ಕೈಗೊಂಡಲ್ಲಿ ಮುಂದೆ ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ ಎಂದಿರುವ ಯತ್ನಾಳ್ ಅವರ ಹೇಳಿಕೆ ಬಿಸಿತುಪವಾಗಿ ಪರಿಣಮಿಸಿದೆ. ಇತ್ತ ವಿಜಯೇಂದ್ರ ಅವರು ತಾವೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ವಿಶ್ವಾಸವನ್ನು ಪದೇ ಪದೇ ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಯತ್ನಾಳ್ ಬಣದ ಮುಖಂಡರು ವಿರೋಧ ಸೂಚಿಸುತ್ತಿದ್ದಾರೆ.

ಯತ್ನಾಳ್ ಬಣದ ಸಂಖ್ಯೆ ಈಗ ಮೊದಲಿನಂತೆ ಸಣ್ಣದಾಗಿ ಉಳಿದಿಲ್ಲ

ಆ ಬಣದ ನಡೆಯನ್ನು ಅನೇಕ ಹಿರಿಯ ನಾಯಕರು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ. ಹೀಗಾಗಿ ಒಂದೋ ಯತ್ನಾಳ್ ಬಣವನ್ನು ಸಮಾಧಾನಗೊಳಿಸಬೇಕು ಅಥವಾ ವಿಜಯೇಂದ್ರ ಅವರ ಮನವೊಲಿಸಬೇಕು. ಈ ಎರಡರ ಮಧ್ಯೆ ಒಂದು ದಾರಿ ಹುಡುಕುವ ಬಗ್ಗೆಯೂ ವರಿಷ್ಠರು ಚಿಂತನ-ಮಂಥನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಲ್ಲ ಗೊಂದಲಗಳಿಗೂ ವಾರದಲ್ಲಿ ತೆರೆ, ಪಕ್ಷಕ್ಕೆ ಎಷ್ಟು ಡ್ಯಾಮೇಜ್‌ ಆಗಬೇಕೋ ಅಷ್ಟೂ ಆಗಿದೆ: ವಿಜಯೇಂದ್ರ

ಬುಧವಾರ ದೆಹಲಿ ವಿಧಾನಸಭಾ ಚುನಾವಣೆ ಮತದಾನ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರು ಕರ್ನಾಟಕ ಬಿಜೆಪಿಯ ಆಂತರಿಕ ಗುದಾಟದ ಬಗ್ಗೆ ಗಮನಹರಿಸುವ ನಿರೀಕ್ಷೆಯಿದೆ. ಹೆಚ್ಚ ಕಡಿಮೆ ಇನ್ನೊಂದು ವಾರದೊಪ್ಪತ್ತಿಗೆ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಈಗ ಉದ್ಭವಿಸಿರುವ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ, ನಿರ್ಧಾರ ಏನಾಗಿರಬಹುದು ಎಂಬುದೇ ಈಗ ಬಿಜೆಪಿ ಕಾರ್ಯಕರ್ತರ ಪಾಲಿಗೆ ಮಿಲಿಯನ್ ಡಾಲರ್‌ಪ್ರಶ್ನೆ

ಇಂದು ಬಿವೈವಿ ಬೆಂಬಲಿಗರ ಸಭೆ 

ದಾವಣಗೆರೆ: ಅತ್ತ ಭಿನ್ನ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟು ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯ ವಿರುದ್ಧ ಅಧ್ಯಕ್ಷರ ದೂರು ನೀಡಲು ಮುಂದಾಗಿದ್ದರೆ ಇತ್ತ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬೆಂಬಲಿಗರು ಬುಧವಾರ ಬೆಂಗಳೂರಲ್ಲಿ ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿ ಹೋರಾಟದ ಪ್ರತಿತಂತ್ರ ಹೆಣೆಯಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಮಾಜಿ ಸಚಿವ ರೇಣುಕಾಚಾರ್ಯ ಮಾಹಿತಿ ನೀಡಿದ್ದಾರೆ.