‘ಉರಿಗೌಡ-ನಂಜೇಗೌಡ’ರಿಂದ ಬಿಜೆಪಿಗೆ ಲಾಭ?
ಟಿಪ್ಪು ಸುಲ್ತಾನ್ನನ್ನು ಕೊಂದಿದ್ದಾರೆ ಎಂದು ಬಿಂಬಿಸಲಾಗುತ್ತಿರುವ ಉರಿಗೌಡ, ನಂಜೇಗೌಡರ ಕುರಿತು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಅದರಲ್ಲಿ ಇವರೇ ಟಿಪ್ಪುವನ್ನು ಹತ್ಯೆ ಮಾಡಿದ್ದಾರೆ ಎಂಬುದರ ಉಲ್ಲೇಖವಿಲ್ಲ.
ಬೆಂಗಳೂರು(ಮಾ.19): ಹಳೆ ಮೈಸೂರು ಭಾಗದಲ್ಲಿ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನಿಸುತ್ತಿದ್ದ ಆಡಳಿತಾರೂಢ ಬಿಜೆಪಿಗೆ ಉರಿಗೌಡ ಮತ್ತು ನಂಜೇಗೌಡ ಬೆಳವಣಿಗೆ ಲಾಭ ತಂದು ಕೊಡುವ ನಿರೀಕ್ಷೆ ಹುಟ್ಟು ಹಾಕಿದೆ. ಟಿಪ್ಪು ಸುಲ್ತಾನ್ ವಿರುದ್ಧ ಕಿಡಿಕಾರುತ್ತಿದ್ದ ಬಿಜೆಪಿ ನಾಯಕರು ಇದೀಗ, ‘ಒಕ್ಕಲಿಗ ಸಮುದಾಯಕ್ಕೆ ಸೇರಿದ ಉರಿಗೌಡ ಮತ್ತು ನಂಜೇಗೌಡ ಅವರೇ ಧಾರ್ಮಿಕ ಮತ್ತು ಭಾಷಾ ನೀತಿ ವಿರುದ್ಧ ಸೆಟೆದು ನಿಂತು ಟಿಪ್ಪುವನ್ನು ಕೊಂದಿದ್ದಾರೆ’ ಎಂದು ಹೇಳುವ ಮೂಲಕ ಒಕ್ಕಲಿಗರ ಒಲವು ಗಳಿಸಲು ಮುಂದಾಗಿದ್ದಾರೆ.
ಆದರೆ, ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಯಾಗಿ ಉರಿಗೌಡ ಮತ್ತು ನಂಜೇಗೌಡ ಎಂಬಿಬ್ಬರ ಬಗ್ಗೆ ಇತಿಹಾಸದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ ಎಂದು ಪ್ರತಿಪಕ್ಷಗಳ ನಾಯಕರು ತಿರುಗೇಟು ನೀಡಿದ್ದರು. ಇದೀಗ ವೇಳೆ ಟಿಪ್ಪು ಸುಲ್ತಾನ್ನನ್ನು ಕೊಂದಿದ್ದಾರೆ ಎಂದು ಬಿಂಬಿಸಲಾಗುತ್ತಿರುವ ಉರಿಗೌಡ, ನಂಜೇಗೌಡರ ಕುರಿತು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉಲ್ಲೇಖವಾಗಿರುವುದು ಬೆಳಕಿಗೆ ಬಂದಿದೆ. ಆದರೆ, ಅದರಲ್ಲಿ ಇವರೇ ಟಿಪ್ಪುವನ್ನು ಹತ್ಯೆ ಮಾಡಿದ್ದಾರೆ ಎಂಬುದರ ಉಲ್ಲೇಖವಿಲ್ಲ.
ಉರಿಗೌಡ, ನಂಜೇಗೌಡರ ವಿಚಾರದಲ್ಲಿ ಒಕ್ಕಲಿಗರ ಸಂಘ ಮೌನ ಸರಿಯಲ್ಲ
ಕಿಡಿಕಾರಿದ್ದ ಎಚ್ಡಿಕೆ:
ಇತಿಹಾಸದಲ್ಲಿ ಇಲ್ಲದ ಉರಿಗೌಡ, ನಂಜೇಗೌಡ ಹೆಸರುಗಳನ್ನು ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ, ಜೀವಂತ ಇರುವ ಉರಿಗೌಡ, ನಂಜೇಗೌಡ ಅವರನ್ನು ಕೋಮು ದಳ್ಳುರಿಯಲ್ಲಿ ಬೇಯಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಪ್ರತಿಪಕ್ಷಗಳ ನಾಯಕರ ಆರೋಪಗಳಿಗೆ ತೀಕ್ಷ$್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಉರಿಗೌಡ ಮತ್ತು ನಂಜೇಗೌಡರು ಇರಲೇ ಇಲ್ಲ ಎಂಬ ವಾದ ಮಂಡಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಇತ್ತೀಚೆಗೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ವೇಳೆ ಮಂಡ್ಯ ನಗರದಲ್ಲಿ ಉರಿಗೌಡ ಮತ್ತು ನಂಜೇಗೌಡ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಿದ್ದು ವಿವಾದ ಸೃಷ್ಟಿಮಾಡಿತ್ತು. ಟೀಕೆಗಳು ತೀವ್ರಗೊಳ್ಳುತ್ತಿದ್ದಂತೆಯೇ ಜಿಲ್ಲಾಡಳಿತ ಆ ಮಹಾದ್ವಾರ ತೆರವುಗೊಳಿಸಿತ್ತು. ಅಲ್ಲಿಂದ ಈ ಉರಿಗೌಡ ಮತ್ತು ನಂಜೇಗೌಡರಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ವಾಕ್ಸಮರ ತೀವ್ರವಾಯಿತು.
‘ಉರಿಗೌಡ, ನಂಜೇಗೌಡ’ ಸಿನಿಮಾಕ್ಕೆ ಕುಮಾರಸ್ವಾಮಿ ಕೆಂಡ..!
ರಾಜ್ಯದ ಇತರ ಭಾಗಗಳಲ್ಲಿ ಬಿಜೆಪಿಗೆ ಬಲ ಇದ್ದರೂ ತನ್ನ ಕಳೆದ ಎರಡು ಬಾರಿಯೂ ಪೂರ್ಣ ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನು ಗಳಿಸಲು ಸಾಧ್ಯವಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಗಟ್ಟಿಯಾಗದಿರುವುದೇ ಇದಕ್ಕೆ ಕಾರಣ. ಹೀಗಾಗಿ ಅಲ್ಲಿ ಪಕ್ಷ ಸಂಘಟನೆ ಬಲಗೊಳಿಸಲು ಕಾರ್ಯತಂತ್ರ ರೂಪಿಸಿ ಎಂಬ ಸೂಚನೆಯನ್ನು ಪಕ್ಷದ ಪ್ರಭಾವಿ ರಾಷ್ಟ್ರೀಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ನಾಯಕರಿಗೆ ಸುಮಾರು ಆರು ತಿಂಗಳ ಹಿಂದೆಯೇ ನೀಡಿದ್ದರು.
ಹಳೆ ಮೈಸೂರು ಭಾಗ ಎಂದರೆ ಒಕ್ಕಲಿಗರ ಪ್ರಾಬಲ್ಯ ಇರುವ ಪ್ರಾಂತ್ಯ. ಪಕ್ಷದಲ್ಲಿ ಒಕ್ಕಲಿಗ ನಾಯಕರಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ನಷ್ಟುಪ್ರಭಾವಿಗಳಲ್ಲ. ಮೇಲಾಗಿ, ಒಕ್ಕಲಿಗರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಬೆಂಬಲಿಸಿದಷ್ಟುಬಿಜೆಪಿಯನ್ನು ಬೆಂಬಲಿಸಲು ಸಿದ್ಧರಿಲ್ಲ. ಇದೀಗ ಈ ಉರಿಗೌಡ ಮತ್ತು ನಂಜೇಗೌಡರ ಪ್ರಸ್ತಾಪದಿಂದ ಒಕ್ಕಲಿಗ ಸಮುದಾಯದ ಒಲವನ್ನು ತಮ್ಮತ್ತ ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ ಎನ್ನಲಾಗಿದೆ. ಇದಕ್ಕೆ ಚುನಾವಣೆಯ ಫಲಿತಾಂಶ ಹೊರಬೀಳುವವರೆಗೆ ಕಾದು ನೋಡಬೇಕಿದೆ.