ಅಧಿವೇಶನ ಮೂರೇ ದಿನ, ವಿಸ್ತರಣೆಗೆ ಸರ್ಕಾರ ನಕಾರ| ಕಲಾಪ 10 ದಿನಕ್ಕೆ ವಿಸ್ತರಿಸಲು ಕಾಂಗ್ರೆಸ್‌, ಜೆಡಿಎಸ್‌ ಪಟ್ಟು| ಕಲಾಪ ಸಲಹಾ ಸಮಿತಿ ಸಭೆ ಬಹಿಷ್ಕರಿಸಿದ ಸಿದ್ದರಾಮಯ್ಯ

ಬೆಂಗಳೂರು[ಅ.11]: ವಿಧಾನಮಂಡಲದ ಉಭಯ ಸದನಗಳ ಅಧಿವೇಶನದ ವಿಸ್ತರಣೆಗೆ ರಾಜ್ಯ ಸರ್ಕಾರ ನಿರಾಕರಿಸಿದ್ದು, ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಪಟ್ಟು ಮುಂದುವರೆಸಿವೆ.

Add Asianetnews Kannada as a Preferred SourcegooglePreferred

ಗುರುವಾರ ಮಧ್ಯಾಹ್ನದ ಭೋಜನ ವಿರಾಮದ ವೇಳೆ ಕಲಾಪ ಸಲಹಾ ಸಮಿತಿ ಸಭೆ ಕರೆದ ವಿಧಾನಸಭೆಯ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಾಯಕರ ಸಮ್ಮುಖದಲ್ಲೇ ಚರ್ಚೆ ನಡೆಸಿದರು. ಈ ಸಭೆಗೆ ಜೆಡಿಎಸ್‌ ನಾಯಕರು ಗೈರು ಹಾಜರಾಗಿದ್ದರು.

ಕಲಾಪಕ್ಕೆ ನಿರ್ಬಂಧ, ಪ್ರತಿಭಟನೆಗೆ ಇಳಿಯಲಿದ್ದಾರೆ ಪತ್ರಕರ್ತರು

ಸಭೆಯಲ್ಲಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಧಿವೇಶನದ ಅವಧಿಯನ್ನು ಈ ಮೊದಲು 10 ದಿನಗಳ ಕಾಲ ನಡೆಸಲು ನಿರ್ಧರಿಸಲಾಗಿತ್ತು. ಉಪಚುನಾವಣೆ ಘೋಷಣೆಯಾಗಿದ್ದರಿಂದ ಮೂರು ದಿನಗಳಿಗೆ ಮೊಟಕುಗೊಳಿಸಲಾಯಿತು. ಆದರೆ, ಈಗ ಉಪಚುನಾವಣೆ ಮುಂದೂಡಿದ್ದರಿಂದ ಅಧಿವೇಶನವನ್ನು ಮತ್ತೆ ಹಿಂದಿನ ನಿರ್ಧಾರದಂತೆ 10 ದಿನಗಳ ಕಾಲ ನಡೆಸಬೇಕು ಎಂದು ಒತ್ತಾಯಿಸಿದರು.

ನೆರೆ ಪರಿಹಾರ ಮತ್ತು ಬಜೆಟ್‌ ಮೇಲಿನ ಚರ್ಚೆ ನಡೆಸಬೇಕಾಗಿದೆ. ಕೇವಲ ಮೂರು ದಿನಗಳಲ್ಲಿ ಚರ್ಚೆ ನಡೆಸಿ ಸರ್ಕಾರದಿಂದ ಉತ್ತರ ಪಡೆಯಲು ಸಾಧ್ಯವಿಲ್ಲ. ಸರ್ಕಾರ ತನ್ನ ನಿಲುವನ್ನು ಪುನರ್‌ಪರಿಶೀಲಿಸಿ ಅಧಿವೇಶನದ ಅವಧಿಯನ್ನು ವಿಸ್ತರಿಸಬೇಕು ಎಂದು ಪ್ರತಿಪಾದಿಸಿದರು. ಆದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿವೇಶನದ ಅವಧಿ ವಿಸ್ತರಿಸಲು ನಿರಾಕರಿಸಿದರು. ಇದರಿಂದ ಕೋಪಗೊಂಡ ಸಿದ್ದರಾಮಯ್ಯ ಅವರು ಕಲಾಪ ಸಲಹಾ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಕಲಾಪಕ್ಕೆ ನಿರ್ಬಂಧ, ಪ್ರತಿಭಟನೆಗೆ ಇಳಿಯಲಿದ್ದಾರೆ ಪತ್ರಕರ್ತರು