Asianet Suvarna News Asianet Suvarna News

ತೀವ್ರ ಸ್ವರೂಪ ಪಡೆದುಕೊಂಡ ಈಶ್ವರಪ್ಪ ಮಾತು,ಅತ್ತ ಹೋರಾಟಕ್ಕೆ ಕಾಂಗ್ರೆಸ್ ಕರೆ, ಇತ್ತ ಬಿಜೆಪಿ ತುರ್ತು ಸಭೆ

* ತೀವ್ರ ಸ್ವರೂಪ ಪಡೆದುಕೊಂಡ ಈಶ್ವರಪ್ಪ ಹೇಳಿಕೆ
* ವಿಧಾನಸೌಧದ ಹೊರಗೂ ಹೋರಾಟಕ್ಕೆ ಕಾಂಗ್ರೆಸ್ ನಾಯಕರ ಕರೆ
* ತುರ್ತು ಸಭೆ ಕರೆ ಕರ್ನಾಟಕ ಬಿಜೆಪಿ

Karnataka BJP Call For Meeting On Feb 22 Over Congress Protest against Eshwarappa rbj
Author
Bengaluru, First Published Feb 20, 2022, 12:35 PM IST | Last Updated Feb 20, 2022, 12:35 PM IST

ಬೆಂಗಳೂರು, (ಫೆ.20): ರಾಷ್ಟ್ರಧ್ವಜದ ವಿಚಾರವಾಗಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಕೊಟ್ಟ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈಶ್ವರಪ್ಪನವರ ಹೇಳಿಕೆ ಖಂಡಿಸಿ ಕಾಂಗ್ರೆಸ್ (Congress) ನಾಯಕರು ನಡೆಸುತ್ತಿರುವ ಅಹೋರಾತ್ರಿ ಧರಣಿ 4ನೇ ದಿನಕ್ಕೆ ಕಾಲಿಟ್ಟಿದೆ.  ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಅತ್ತ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಧರಣಿ ವಿಚಾರಕ್ಕೆ ಸಂಬಂಧಿಸಿ ಬೆಳವಣಿಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ನಾಳೆ(ಫೆ.22) ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಲ್ಲಿ ಬಿಜೆಪಿ ತುರ್ತು ಸಭೆ ನಡೆಸಲು ತೀರ್ಮಾನಿಸಿದೆ. 

Karnataka Politics: ಪ್ರಮುಖ ನಾಯಕರ ಜೊತೆ ದೆಹಲಿಗೆ ಹೋಗ್ತೀವಿ: ಡಿಕೆಶಿ

ಹೈಕಮಾಂಡ್ ನಿರ್ದೇಶನದ ಮೇರೆಗೆ ಸಭೆ ನಿಗದಿಯಾಗಿದೆ. ರಾಜ್ಯವ್ಯಾಪಿ ಹೋರಾಟಕ್ಕೆ ಕಾಂಗ್ರೆಸ್ ಪ್ಲ್ಯಾನ್ ಮಾಡಿರುವ ಹಿನ್ನೆಲೆ ಮುಂದಿನ‌ ಕಾರ್ಯತಂತ್ರದ ಬಗ್ಗೆ ಬಿಜೆಪಿ ನಾಯಕರು ಚರ್ಚಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಸಿಎಂ ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಿಎಸ್ವೈ, ಸಚಿವ ಈಶ್ವರಪ್ಪ ಸೇರಿದಂತೆ ರಾಜ್ಯದ ಬಿಜೆಪಿ ಪ್ರಮುಖರು ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನಿಂದ ಪ್ರತಿಭಟನೆಗೆ ಕರೆ
ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್​ ಧರಣಿ ನಡೆಸುತ್ತಿದೆ. ವಿಧಾನಸೌಧ ಹಾಗೂ ವಿಧಾನ ಪರಿಷತ್​ನಲ್ಲಿ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಮಧ್ಯೆ, ವಿಧಾನಸೌಧದ ಹೊರಗೂ ಹೋರಾಟಕ್ಕೆ ಕಾಂಗ್ರೆಸ್ ನಾಯಕರು (Congress Peotest) ಕರೆ ನೀಡಿದ್ದಾರೆ. ನಾಳೆ (ಫೆ.21) ರಾಜ್ಯಾದ್ಯಂತ ಈಶ್ವರಪ್ಪ (KS Eshwarappa) ವಿರುದ್ಧ ಪ್ರತಿಭಟನೆಗೆ (Protest) ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ಕೇಂದ್ರ, ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಯಲಿದೆ.

 ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಕೈ ಪಾಳಯ ಮುಂದಾಗಿದೆ. ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸಲಾಗುತ್ತಿದೆ. ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

‘ರಾಷ್ಟ್ರಧ್ವಜ ಕುರಿತ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ವಿಪಕ್ಷದವರು ಪ್ರತಿಭಟನೆ ಮಾಡುವುದು ಅವರ ಕೆಲಸ ಈ ವಿವಾದದ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ. 

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನನ್ನ ಸ್ನೇಹಿತರೇ. ಮತ್ತೆ ಹೇಳಿಕೆ ನೀಡಿ ವಿವಾದ ಬೆಳೆಸುವುದು ನನಗಿಷ್ಟವಿಲ್ಲ. ನಾನೊಂದು ಹೇಳಿಕೆ ಕೊಟ್ಟರೆ ಅವರೊಂದು ಹೇಳುತ್ತಾರೆ. ಹೀಗಾಗಿ ಈ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ರಾಜ್ಯದಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಸದನದಲ್ಲಿ ಚರ್ಚಿಸಲು ವಿಪಕ್ಷಗಳು ಅವಕಾಶ ನೀಡಬೇಕು ಎಂದು ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರತಿಕ್ರಿಯೆ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಅಂತಾರೆ. ಇಂತಹ ದೇಶದ್ರೋಹಿ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ ಒಬ್ಬ ದೇಶದ್ರೋಹಿ ಸಚಿವರನ್ನ ಸಮರ್ಥಿಸಿಕೊಳ್ಳುತ್ತಿದ್ದಾರೆ. ಈಶ್ವರಪ್ಪ ಬಿಡಿ ಬಚ್ಚಲು ಬಾಯಿ ಮಾತಾಡಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪರನ್ನ ವಜಾ ಮಾಡಬೇಕು. ಸಿಎಂಗೆ ಸ್ವಾಭಿಮಾನ ಇದ್ದಿದ್ರೆ ಅಂದೇ ವಜಾ ಮಾಡಬೇಕಿತ್ತು. ಸರ್ಕಾರದಲ್ಲಿ ಈಶ್ವರಪ್ಪಗೆ ಯಾರ ಬಗ್ಗೆಯೂ ನಿಷ್ಠೆ ಇಲ್ಲ ಎಂದು ಕಿಡಿಕಾರಿದ್ದಾರೆ.

ಈಶ್ವರಪ್ಪರನ್ನ ವಜಾ ಮಾಡದಿದ್ದರೆ ಹೋರಾಟ ಮಾಡ್ತೇವೆ. ಜಿಲ್ಲಾ, ತಾಲೂಕು ಮಟ್ಟದಲ್ಲೂ ಹೋರಾಟ ಮಾಡ್ತಿದ್ದೇವೆ. ನಿಮ್ಮ ದುರಾಡಳಿತದಲ್ಲಿ ಏನೆಲ್ಲಾ ನಡೆಯುತ್ತಿದ್ದೆ ಇದೆಲ್ಲ ಸಾಕ್ಷಿ. ಸಚಿವ ಈಶ್ವರಪ್ಪರನ್ನ ಸಮರ್ಥಿಸುತ್ತಿರುವುದಕ್ಕೆ ನಮ್ಮ ಖಂಡನೆ ಇದೆ. ವಿದ್ಯಾರ್ಥಿಗಳು ಏನು ತಪ್ಪು ಮಾಡಿದ್ರು, ಏಕೆ ಕೇಸ್ ಹಾಕಿದ್ರಿ? ಪೋಷಕರಿದ್ದಾರೆ, ಶಿಕ್ಷಕರಿದ್ದಾರೆ ಅವೆಲ್ಲಾ ನಿಮಗೇಕೆ? ರಾಜ್ಯದಲ್ಲಿ ಅಶಾಂತಿ ಮೂಡಿಸುವುದಕ್ಕೆ ಪ್ರಯತ್ನಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. 

Latest Videos
Follow Us:
Download App:
  • android
  • ios