ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕುಮಟಾ ಕ್ಷೇತ್ರದಲ್ಲಿ ಅತಿ ಹೆಚ್ಚು ಟಿಕೆಟ್‌ ಆಕಾಂಕ್ಷಿಗಳಿದ್ದು, ಕುಮಟಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿಯೇ ಭಾರಿ ಪೈಪೋಟಿ ನಡೆಯಲಿದೆ.

ವಸಂತಕುಮಾರ ಕತಗಾಲ

ಕಾರವಾರ (ನ.27) : ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕುಮಟಾ ಕ್ಷೇತ್ರದಲ್ಲಿ ಅತಿ ಹೆಚ್ಚು ಟಿಕೆಟ್‌ ಆಕಾಂಕ್ಷಿಗಳಿದ್ದು, ಕುಮಟಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿಯೇ ಭಾರಿ ಪೈಪೋಟಿ ನಡೆಯಲಿದೆ. ಹಾಲಿ ಶಾಸಕ ದಿನಕರ ಶೆಟ್ಟಿಹಣಿಯಲು ಇಷ್ಟೊಂದು ಪೈಪೋಟಿ ನಡೆಯುತ್ತಿದೆಯೇ ಅಥವಾ ಇಷ್ಟೊಂದು ಆಕಾಂಕ್ಷಿಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿಯೇ ಗೊಂದಲಕ್ಕೆ ಕಾರಣವಾಗಲಿದೆಯೇ ಎನ್ನುವ ಕುತೂಹಲ ಉಂಟಾಗಿದೆ.

ಕುಮಟಾ ಕ್ಷೇತ್ರದಲ್ಲಿ ಇತ್ತೀಚೆಗೆ ಚುನಾವಣೆ ಕೇವಲ ಶೆಟ್ಟರ ಕುಟುಂಬದ ನಡುವೆಯೇ ಸುತ್ತುತ್ತಿದೆ. ಮೊದಲು ಕಾಂಗ್ರೆಸ್‌ನ ಮೋಹನ ಶೆಟ್ಟಿಗೆದ್ದರು. ನಂತರ ಜನತಾ ದಳದ ದಿನಕರ ಶೆಟ್ಟಿ, ಮೋಹನ ಶೆಟ್ಟಿಅವರ ಪತ್ನಿ ಶಾರದಾ ಶೆಟ್ಟಿ, ಈಗ ಬಿಜೆಪಿಯಿಂದ ದಿನಕರ ಶೆಟ್ಟಿಶಾಸಕರಾಗಿದ್ದಾರೆ.

Karnataka Assembly Election: ಬಂಡಾಯದ ನೆಲದಲ್ಲಿ ಚುನಾವಣೆ ರಂಗು

ಈ ಬಾರಿ ಶೆಟ್ಟಿಅವರ ಕುಟುಂಬಕ್ಕೆ ಹೊರತಾಗಿ ಟಿಕೆಟ್‌ ನೀಡಬೇಕು ಎಂದು ಕೆಲವು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ವಾದ ಮಂಡಿಸುತ್ತಿದ್ದಾರೆ. ಇತ್ತ ಬಿಜೆಪಿಯಲ್ಲೂ ತಣ್ಣಗೆ ಈ ಸ್ವರ ಕೇಳಿಬರುತ್ತಿದೆ. ಹಾಗಿದ್ದರೆ ಕುಮಟಾ ಕ್ಷೇತ್ರ ಈ ಬಾರಿ ಹೊಸ ಮುಖಗಳನ್ನು ಕಾಣಲಿದೆಯೇ ಅಥವಾ ಶೆಟ್ಟಿಅವರ ಕುಟುಂಬದ ಸುತ್ತಲೇ ಗಿರಕಿ ಹೊಡೆಯಲಿದೆಯೇ ಎನ್ನುವುದೂ ವ್ಯಾಪಕ ಕುತೂಹಲ ಮೂಡಿಸಿದೆ.

ಆಕಾಂಕ್ಷಿಗಳು ಯಾರು?:

ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಅತಿ ಹೆಚ್ಚು ಅಂದರೆ 14ರಷ್ಟುಆಕಾಂಕ್ಷಿಗಳು ಸ್ಪರ್ಧಿಸಲು ಬಯಸಿ ಅರ್ಜಿ ತುಂಬಿದ್ದಾರೆ. ಮಾಜಿ ಶಾಸಕಿ ಶಾರದಾ ಶೆಟ್ಟಿ, ಶಿವಾನಂದ ಹೆಗಡೆ ಕಡತೋಕಾ, ಹೊನ್ನಪ್ಪ ನಾಯ್ಕ, ಆರ್‌.ಎಚ್‌. ನಾಯ್ಕ, ರವಿ ಶೆಟ್ಟಿಕವಲಕ್ಕಿ, ಕೃಷ್ಣ ಗೌಡ, ಭುವನ್‌ ಭಾಗ್ವತ, ರತ್ನಾಕರ ನಾಯ್ಕ, ಪ್ರದೀಪ ನಾಯಕ, ಭಾಸ್ಕರ ಪಟಗಾರ, ಗಾಯತ್ರಿ ಗೌಡ, ಮಂಜುನಾಥ ನಾಯ್ಕ, ಯಶೋಧರ ನಾಯ್ಕ ಹಾಗೂ ಸಾಯಿ ಗಾಂವಕರ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಬಯಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ಗಾಗಿ ಜಿದ್ದಾಜಿದ್ದಿ ಫೈಟ್‌ ನಡೆಯುವ ಸಾಧ್ಯತೆಗಳು ಈಗಾಗಲೇ ಗೋಚರಿಸುತ್ತಿವೆ. ಟಿಕೆಟ್‌ಗಾಗಿ ಇಷ್ಟೊಂದು ಜನರು ಅರ್ಜಿ ಸಲ್ಲಿಸಿರುವುದು ಪಕ್ಷದ ಮುಖಂಡರಿಗೂ ತಲೆನೋವಾಗಿ ಪರಿಣಮಿಸಿದೆ. ಇನ್ನು ಬಿಜೆಪಿಯಿಂದ ಹಾಲಿ ಶಾಸಕ ದಿನಕರ ಶೆಟ್ಟಿ, ಎಂ.ಜಿ. ಭಟ್‌, ಸುಬ್ರಾಯ ವಾಳ್ಕೆ, ನಾಗರಾಜ ನಾಯಕ ತೊರ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ಮತದಾರರ ಪಟ್ಟಿಅಕ್ರಮ ಕಾಂಗ್ರೆಸ್‌ ಸಂಸ್ಕೃತಿ: ಸಚಿವ ಅಶ್ವತ್ಥನಾರಾಯಣ

ಜೆಡಿಎಸ್‌ನಿಂದ ಸೂರಜ್‌ ನಾಯ್ಕ ಸೋನಿ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಈಗಾಗಲೇ ಅವರು ಸಂಘಟನೆಯಲ್ಲಿ ನಿರತರಾಗಿದ್ದಾರೆ. ಕುಮಟಾ ಕ್ಷೇತ್ರ ಈ ಬಾರಿ ತ್ರಿಕೋನ ಸ್ಪರ್ಧೆ ಕಾಣಲಿರುವುದು ನಿಶ್ಚಿತ.\ ಚುನಾವಣಾ ಕದನಕ್ಕಿಂತ ಮುನ್ನ ಟಿಕೆಟ್‌ ಫೈಟ್‌ ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ತೆರೆಯ ಮರೆಯಲ್ಲಿ ಟಿಕೆಟ್‌ಗಾಗಿ ಭಾರಿ ಕಸರತ್ತು ನಡೆಯುತ್ತಿದೆ.