Asianet Suvarna News Asianet Suvarna News

Karnataka election 2023: ಬೆಳಗಾವಿ ಬಿಜೆಪಿ ಸೋಲಿಗೆ ಹೊಣೆ ಯಾರು?

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೀನಾಯ ಸೋಲನುಭವಿಸಿ, ಛಿದ್ರಗೊಂಡಿರುವ ಭಾರತೀಯ ಜನತಾ ಪಾರ್ಟಿ ಈಗ ಅಲರ್ಚ್‌ ಆಗಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿನ ಕುರಿತು ಪರಾಮರ್ಶೆ ನಡೆಯುತ್ತಿದ್ದು, ಇದರ ಜೊತೆಗೆ ಪಕ್ಷದ ಸೋಲಿಗೆ ಹೊಣೆ ಯಾರು ಎಂಬ ಪ್ರಶ್ನೆಯೂ ಉದ್ಭವಿಸಿದೆ.

Karnataka assembly election results who responsible for BJP's defeat in Belgaum constituency rav
Author
First Published May 27, 2023, 4:42 AM IST

ಶ್ರೀಶೈಲ ಮಠದ

 ಬೆಳಗಾವಿ (ಮೇ.27) : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೀನಾಯ ಸೋಲನುಭವಿಸಿ, ಛಿದ್ರಗೊಂಡಿರುವ ಭಾರತೀಯ ಜನತಾ ಪಾರ್ಟಿ ಈಗ ಅಲರ್ಚ್‌ ಆಗಿದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿನ ಕುರಿತು ಪರಾಮರ್ಶೆ ನಡೆಯುತ್ತಿದ್ದು, ಇದರ ಜೊತೆಗೆ ಪಕ್ಷದ ಸೋಲಿಗೆ ಹೊಣೆ ಯಾರು ಎಂಬ ಪ್ರಶ್ನೆಯೂ ಉದ್ಭವಿಸಿದೆ.

ರಾಜ್ಯದಲ್ಲೇ ಬೆಂಗಳೂರು ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆಯಲ್ಲೆ ಹೆಚ್ಚು ಅಂದರೆ 18 ಕ್ಷೇತ್ರಗಳಿವೆ. ಈ ಪೈಕಿ 11 ಕ್ಷೇತ್ರ ಕಾಂಗ್ರೆಸ್‌ ಪಾಲಾಗಿದ್ದರೆ, 7 ಕ್ಷೇತ್ರ ಬಿಜೆಪಿ ಪಾಲಾಗಿವೆ. ಕಳೆದ ಚುನಾವಣೆಯಲ್ಲಿ (ಉಪಚುನಾವಣೆ ಸೇರಿ) 13 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ 5 ಸ್ಥಾನಗಳಲ್ಲಿ ಹಿಡಿತ ಸಾಧಿಸಿತ್ತು. ಆದರೆ, ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿದೆ. ಈ ಸೋಲಿನ ಹೊಣೆಯನ್ನು ಗೋಕಾಕದ ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh jarkiholi) ಅವರ ತಲೆಗೆ ಕಟ್ಟಿರುವ ಸ್ಥಳೀಯ ಬಿಜೆಪಿ ನಾಯಕರು, ಪಕ್ಷದಲ್ಲಿ ರಮೇಶ ಜಾರಕಿಹೊಳಿ ಅವರ ಪಾರುಪತ್ಯಕ್ಕೆ ಬ್ರೇಕ್‌ ಹಾಕುವಂತೆ ಪಕ್ಷದ ಹೈಕಮಾಂಡ್‌ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

 

ಕಾಂಗ್ರೆಸ್ಸಿನ ‘ಸುಳ್ಳು ಗ್ಯಾರಂಟಿ’ಯಿಂದ ಬಿಜೆಪಿಗೆ ಸೋಲು: ಹಾಲಪ್ಪ ಆಚಾರ್‌

ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡಿರುವ ಬಿಜೆಪಿ ನಾಯಕರು ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಈ ಹಿಂದಿನ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಉರುಳಿಸಿ, 17 ಶಾಸಕರನ್ನು ರಾಜೀನಾಮೆ ಕೊಡಿಸಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ ಜಾರಕಿಹೊಳಿ ಅವರು ಕೂಡ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಕಂಡಿದ್ದಾರೆ. ಹಠಕ್ಕೆ ಬಿದ್ದು ಅಥಣಿಯಿಂದ ಮಹೇಶ ಕುಮಟಳ್ಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ ಮತ್ತು ಬೆಳಗಾವಿ ಗ್ರಾಮೀಣದಿಂದ ನಾಗೇಶ ಮನ್ನೋಳಕರ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ರಮೇಶ ಜಾರಕಿಹೊಳಿ ತಮ್ಮ ಆಪ್ತರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಆಗಲಿಲ್ಲ. ರಮೇಶ ಜಾರಕಿಹೊಳಿ ಅವರ ನಡೆ ಬಿಜೆಪಿ ಪಾಲಿಗೆ ಮುಳುವಾಗುವಂತಾಯಿತು ಎಂದು ಬಿಜೆಪಿ ನಾಯಕರೇ ಆಡಿಕೊಳ್ಳುವಂತಾಗಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನಿಂದ ಗೆದ್ದು ಬಂದಿದ್ದ ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ ಅವರು ರಮೇಶ ಜಾರಕಿಹೊಳಿ ಅವರನ್ನೇ ನಂಬಿಕೊಂಡು ಆಪರೇಷನ್‌ ಕಮಲಕ್ಕೆ ಒಳಗಾದರು. ಆದರೆ, ಈ ಚುನಾವಣೆಯಲ್ಲಿ ಪಕ್ಷಾಂತರಿಗಳನ್ನು ಮತದಾರರು ತಕ್ಕ ಪಾಠ ಕಲಿಸಿದರು. ಇನ್ನೊಂದು ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡರೇ ಏನೆಲ್ಲಾ ಅನುಭವಿಸಬೇಕು ಎಂಬ ಪಾಠ ಕಲಿಸುವ ಮೂಲಕ ಮತದಾರರು ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ ಎಂಬುದು ಈ ಫಲಿತಾಂಶದಿಂದ ವೇದ್ಯವಾಗುತ್ತದೆ ಎಂದು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ.

ಪ್ರಧಾನಿ ಬಂದರೂ ಸೋತ ಬಿಜೆಪಿ!

ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi) ಅವರೇ ಸ್ವತಃ ಬೆಳಗಾವಿ ಜಿಲ್ಲೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಂಪುಟದ ಸಚಿವರ ದಂಡೇ ಜಿಲ್ಲೆಗೆ ಬೀಡುಬಿಟ್ಟು ಅಬ್ಬರದ ಪ್ರಚಾರ ಕಾರ್ಯ ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಬಿಜೆಪಿ ನಾಯಕರನ್ನು ಗಣನೆಗೆ ತೆಗೆದುಕೊಳ್ಳುವುದಾಗಲಿ, ವಿಶ್ವಾಸಕ್ಕೆ ತೆಗೆದುಕೊಳ್ಳುವುದಾಗಲಿ ಮಾಡಲೇ ಇಲ್ಲ. ಅಥಣಿಯಿಂದ ಮಹೇಶ ಕುಮಟಳ್ಳಿ ಅವರಿಗೆ ಟಿಕೆಟ್‌ ನೀಡದಿದ್ದರೇ ನಾನು ಕೂಡ ಗೋಕಾಕ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ರಮೇಶ ಜಾರಕಿಹೊಳಿ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದರು.

ಬಿಜೆಪಿ ಸೋಲಿಗೆ ಎಲ್ಲರೂ ಸಮಾನ ಹೊಣೆ; ಸಂತೋಷ್‌ಜೀ ಮೇಲಷ್ಟೇ ಏಕೆ ದೂಷಣೆ?: ಮುನಿರಾಜುಗೌಡರ ಗರಂ

ಬಿಜೆಪಿ(Karnataka BJP) ಆರಂಭದಿಂದಲೂ ಆಡಳಿತ ವಿರೋಧಿ ಅಲೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು, ಸಿಡಿ ಪ್ರಕರಣದಲ್ಲಿ ರಮೇಶ ಜಾರಕಿಹೊಳಿ ರಕ್ಷಣೆಗೆ ನಿಂತಿದ್ದು, ಕಾಂಗ್ರೆಸ್‌ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ವಿರುದ್ಧ ಹಗುರವಾಗಿ ಮಾತನಾಡಿದ್ದು, ಕೂಡ ಈಗ ನಾಯಕರು ಪ್ರಶ್ನೆ ಮಾಡುವಂತಾಗಿದೆ. ಇದೆಲ್ಲವೂ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿತು.

Follow Us:
Download App:
  • android
  • ios