ಮಹಿಳಾ ಮೀಸಲಾತಿ ಹಾಗೂ ವಾರ್ಡ್ ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ರಿಟ್ ಪಿಟೀಷನ್ ವಜಾಗೊಳಿಸಿ ಕಲಬುರಗಿ ಹೈಕೋರ್ಟ್ ಪೀಠ ಆದೇಶ ನೀಡಿದೆ. ಈ ಮೂಲಕ ಅರ್ಜಿ ಸಲ್ಲಿಸಿದ್ದ ನಾಲ್ವರಿಗೆ ಹಿನ್ನಡೆಯಾಗಿದೆ. 

ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣನ್ಯೂಸ್, ವಿಜಯಪುರ

Add Asianetnews Kannada as a Preferred SourcegooglePreferred

ವಿಜಯಪುರ (ಅ.14): ಮಹಿಳಾ ಮೀಸಲಾತಿ ಹಾಗೂ ವಾರ್ಡ್ ವಿಂಗಡಣೆ ಅವೈಜ್ಞಾನಿಕವಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ರಿಟ್ ಪಿಟೀಷನ್ ವಜಾಗೊಳಿಸಿ ಕಲಬುರಗಿ ಹೈಕೋರ್ಟ್ ಪೀಠ ಆದೇಶ ನೀಡಿದೆ. ಈ ಮೂಲಕ ಅರ್ಜಿ ಸಲ್ಲಿಸಿದ್ದ ನಾಲ್ವರಿಗೆ ಹಿನ್ನಡೆಯಾಗಿದೆ. 

ಅರ್ಜಿ ಸಲ್ಲಿಸಿದವರಿಗೆ ಮುಜುಗರ: ಚುನಾವಣೆ ಸಿದ್ಧತೆ ಮಧ್ಯೆಯೂ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸೇರಿ ನಾಲ್ವರು ಹೈಕೋರ್ಟ್ ಮೊರೆ ಹೋಗಿದ್ರು. ಹೈಕೋರ್ಟ್ ಆದೇಶದಿಂದ ಇದೀಗ ತೀವ್ರ ಮುಜುಗರ ಅನುಭವಿಸುವಂತಾಗಿದೆ. ಮಹಾನಗರ ಪಾಲಿಕೆ ಮೇಲ್ದರ್ಜೆಗೇರಿಸಿದ ಮೇಲೆ ವಾರ್ಡ್ ವಿಂಗಡಣೆ, ಮೀಸಲಾತಿ ವಿಚಾರವಾಗಿ ಮೂರುವರೆ ವರ್ಷಗಳ ಹಿಂದೆಯೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆಗ ಸುಪ್ರೀಂಕೋರ್ಟ್ ಪಾಲಿಕೆ ಎಲೆಕ್ಷನ್ ನಡೆಸುವಂತೆ ಆದೇಶಿಸಿ, ಮೀಸಲಾತಿ, ವಾರ್ಡ್ ವಿಂಗಡಣೆ ಜೊತೆಗೆ ಎರಡನೇ ಬಾರಿಗೆ ಮೀಸಲಾತಿ ಪರಿಷ್ಕೃತ ಪಟ್ಟಿ ಪ್ರಕಟಗೊಂಡು ರಾಜ್ಯ ಚುನಾವಣಾ ಆಯೋಗ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಮುಹೂರ್ತ ನಿಗದಿ ಮಾಡಿತ್ತು.

Vijayanagara: ಜಿಲ್ಲೆಯವರು ಸಿಎಂ ಆಗಲ್ಲ, ಇಲ್ಲಿಯವರು ಶಾಸಕರಾಗಲ್ಲ: ಶಿವಾನಂದ ಪಾಟೀಲ

ಯಾವ ಕಾರಣಕ್ಕೆ ಕೋರ್ಟ್ ಮೇಟ್ಟಿಲೇರಿದ್ದ ಅರ್ಜಿದಾರರು: ಇದರ ಮಧ್ಯೆಯೂ ಚುನಾವಣಾ ಸಿದ್ದತೆ ಜೊತೆಗೆ ನಾಮಪತ್ರ ಸಲ್ಲಿಕೆಯೂ ನಡೆಯುವ ಹೊತ್ತಿನಲ್ಲಿ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಸೆಪ್ಟೆಂಬರ್ 27 ರಂದು ವಿಜಯಪುರ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಹಾಗೂ ಕಾಂಗ್ರೆಸ್ ಪಕ್ಷದ ದೀಪಾ ಕುಂಬಾರ ಮಾಜಿ ಪಾಲಿಕೆ ಸದಸ್ಯರಾದ ಮೈನುದ್ದೀನ್ ಬೀಳಗಿ, ಇದ್ರೂಸ್ ಭಕ್ಷಿ ಸದ್ಯ ಪ್ರಕಟಿಸಿರೋ ವಾರ್ಡ್ ಮೀಸಲಾತಿ ಪಟ್ಟಿಯಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಿಟ್ಟಿಲ್ಲ. ವಿಜಯಪುರದ 35ವಾರ್ಡ್‌ಗಳಲ್ಲಿ 16ಸ್ಥಾನ ಮಾತ್ರ ಮಹಿಳೆಯರಿಗಿದ್ದು 17ಹಾಗೂ 18ಸ್ಥಾನ ಸಿಗಬೇಕಾಗಿದೆ ಎಂದು ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು. 

ಇಂದು ಅರ್ಜಿ ತಿರಸ್ಕರಿಸಿ ತೀರ್ಪು ಹೊರಡಿಸಿದ ನ್ಯಾಯಾಲಯ: ಇನ್ನು ಈ ಸಂಬಂಧ ಅಕ್ಟೋಬರ್ 13ರಂದು ವಿಚಾರಣೆ ನಡೆದು ತೀರ್ಪು ಕಾಯ್ದಿರಿಸಲಾಗಿತ್ತು. ಅಕ್ಟೋಬರ್ 14ರಂದು ಕಲಬುರ್ಗಿ ಹೈಕೋರ್ಟ್ ಪೀಠ ವಿಜಯಪುರ ಮಹಾನಗರ ಪಾಲಿಕೆ ಸಂಬಂಧ ಮಹತ್ವದ ಆದೇಶ ಹೊರಡಿಸಿದೆ. ಸುಪ್ರೀಂಕೋರ್ಟ್ ಪಾಲಿಕೆ ಚುನಾವಣೆ ನಡೆಸಲು ಆದೇಶ ನೀಡಿದೆ. ಹಾಗೂ ಪಾಲಿಕೆ ಎಲೆಕ್ಷನ್ ಸಂಬಂಧ ಈಗಾಗಲೇ ಪೂರ್ವಸಿದ್ಧತೆ, ಚುನಾವಣೆ ಪ್ರಕ್ರಿಯೆ ನಡೆದಿರುವುದರಿಂದ ಈ ಹಂತದಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಲ್ಲ ಎಂದು ಆದೇಶಿಸಿದ್ದು ಇದೀಗ ಮತ್ತೊಮ್ಮೆ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. 

28ರಂದು ಪಾಲಿಕೆ ಚುನಾವಣೆ ಫಿಕ್ಸ್: ಅಕ್ಟೋಬರ್ 28ರಂದು ಪಾಲಿಕೆಗೆ ಮತದಾನ ನಡೆಯಲಿದೆ. ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಬೆಂಗಳೂರಿನ ಹಿರಿಯ ನ್ಯಾಯವಾದಿ ಕೆ ದಿವಾಕರ್ ನ್ಯಾಯವಾದಿಗಳಾದ ಎಂ ಎ ದಖನಿ ಹಾಗೂ ಎಸ್ ಎಸ್ ಮಮದಾಪೂರ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದರು. ಚುನಾವಣಾ ಆಯೋಗ ಹಾಗೂ ವಿಜಯಪುರ ಮಹಾನಗರ ಪಾಲಿಕೆಯ ಪರವಾಗಿ ನ್ಯಾಯವಾದಿ ಅಮರೇಶ್ ರೋಝಾ ವಾದ ಮಂಡಿಸಿದ್ರು. ಇದೀಗ ಕಲಬುರ್ಗಿ ಹೈಕೋರ್ಟ್ ಪೀಠದ ಆದೇಶದಿಂದ ಬಿಜೆಪಿ ಪಕ್ಷದ ಆಕಾಂಕ್ಷಿಗಳಲ್ಲಿ ಸಂಭ್ರಮ ಮನೆಮಾಡಿದ್ರೆ, ಕಲಬುರ್ಗಿ ಹೈಕೋರ್ಟ್ ಮೊರೆ ಹೋಗಿದ್ದ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸೇರಿದಂತೆ ನಾಲ್ವರಿಗೆ ಹಿನ್ನಡೆಯಾಗಿದೆ.

ಕೋರ್ಟ್ ತೀರ್ಪಿಗೆ ತಲೆಬಾಗುತ್ತೇವೆ: ಇತ್ತ ಹೈಕೋರ್ಟ್ ತೀರ್ಪಿಗೆ ತಲೆಬಾಗುತ್ತೇವೆ, ಚುನಾವಣೆಯಲ್ಲಿ ಜನತಾ ನ್ಯಾಯಾಲಯದ ಮುಂದೆ ಹೋಗ್ತೇವೆ. ಅರ್ಜಿದಾರರಾಗಿರುವ ವಿದ್ಯಾರಾಣಿ ತುಂಗಳ ಹೇಳಿದ್ದಾರೆ. ತೀರ್ಪಿ ಬಂದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಹೈಕೋರ್ಟ್ ನೀಡಿದ ಆದೇಶವನ್ನ ನಾವು ಸ್ವಾಗತಿಸುತ್ತೇವೆ. ಇದು ನಮಗೆ ಸೋಲಲ್ಲ, ಜನತಾ ನ್ಯಾಯಾಲಯದಲ್ಲಿ ಮತದಾರರು ವಿರೋಧಿಗಳಿಗೆ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.

Vijayapura: ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ!

ಈವರೆಗೆ 36 ನಾಮಪತ್ರ ಸಲ್ಲಿಕೆ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಬರುವ ಸೋಮವಾರ ಕೊನೆ ದಿನವಾಗಿದೆ. ಮೊದಲು‌‌ ನಾಲ್ಕು ದಿನ ಕೇವಲ ಎರಡು ನಾಮಪತ್ರ ಸಲ್ಲಿಕೆಯಾಗಿದ್ದವು. ಇಂದು ಶುಕ್ರವಾರ ಶುಭದಿನ ಹಿನ್ನೆಲೆಯಲ್ಲಿ ಒಂದೇ ದಿನ 34 ಸೇರಿ ಇಲ್ಲಿಯವರೆಗೆ 36 ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿಯಿಂದ 14, ಕಾಂಗ್ರೆಸ್ 8, ಜೆಡಿಎಸ್ 1 ಹಾಗೂ ಪಕ್ಷೇತರ 13 ಸೇರಿ ಒಟ್ಟು 36 ನಾಮಪತ್ರ ಸಲ್ಲಿಕೆಯಾಗಿವೆ. ಒಟ್ಟು 35 ವಾರ್ಡ್‌ಗಳ ಪೈಕಿ 14 ವಾರ್ಡ್‌ಗಳಲ್ಲಿ ಇಲ್ಲಿಯವರೆಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಅ.17ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.