Asianet Suvarna News Asianet Suvarna News

ಮೈತ್ರಿ ಸರ್ಕಾರದಲ್ಲೂ ಕಮಿಷನ್‌ ವ್ಯವಹಾರ ನಡೆದಿದೆ: ಎಚ್‌.ಡಿ.ಕುಮಾರಸ್ವಾಮಿ

ಮೊದಲು ಉಡುಗೊರೆ ರೂಪದಲ್ಲಿದ್ದ, ಸಣ್ಣ-ಪುಟ್ಟ ಮಟ್ಟದಲ್ಲಿ ಸರ್ಕಾರದಲ್ಲಿ ನಡೆಯುತ್ತಿದ್ದ ಕಮಿಷನ್‌ ವ್ಯವಹಾರ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸ್ವೇಚ್ಛಾಚಾರದಂತೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

jds leader hd kumaraswamy slams to bjp government at tumakuru gvd
Author
First Published Aug 27, 2022, 1:26 PM IST

ತುಮಕೂರು (ಆ.27): ಮೊದಲು ಉಡುಗೊರೆ ರೂಪದಲ್ಲಿದ್ದ, ಸಣ್ಣ-ಪುಟ್ಟ ಮಟ್ಟದಲ್ಲಿ ಸರ್ಕಾರದಲ್ಲಿ ನಡೆಯುತ್ತಿದ್ದ ಕಮಿಷನ್‌ ವ್ಯವಹಾರ 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸ್ವೇಚ್ಛಾಚಾರದಂತೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು. ತುಮಕೂರಿನಲ್ಲಿ ಏರ್ಪಾಟಾಗಿದ್ದ ಅಗ್ನಿವಂಶ ಕ್ಷತ್ರಿಯ ತಿಗಳರ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ತುಮಕೂರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

40 ಪರ್ಸೆಂಟ್‌ ಕಮಿಷನ್‌ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಎಚ್‌ಡಿಕೆ, ಸ್ವಾತಂತ್ರ್ಯ ಪೂರ್ವದಲ್ಲೂ ಇದು ಇದೆ. ಆಗ ಉಡುಗೊರೆ ಕೊಡೋದನ್ನು ಇಟ್ಟುಕೊಂಡಿದ್ದರು. ಸ್ವಾತಂತ್ರ್ಯ ಬಂದ ಬಳಿಕ ಸಣ್ಣ ಪುಟ್ಟ ಮಟ್ಟದಲ್ಲಿ ಸರ್ಕಾರದೊಂದಿಗೆ ವ್ಯವಹಾರ ನಡೆಯುತ್ತಿತ್ತು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸ್ವೇಚ್ಛಾಚಾರದಂತೆ ನಡೆಯುತ್ತಿದೆ. ಶೇ.40ರಷ್ಟು ಕಮಿಷನ್‌ ವಿಷಯ ಜನ ಸಾಮಾನ್ಯರಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನು ನಿಲ್ಲಿಸುವುದು ಹೇಗೆ ಎಂದು ಚರ್ಚೆ ಮಾಡಬೇಕು. ಇದಕ್ಕೆ ಜನರು ಕೂಡ ರೆಡಿಯಾಗಬೇಕು. 

ಮದರಸ ಶಾಲೆ ಮಕ್ಕಳನ್ನು ಬುದ್ದಿವಂತರಾಗಿಸುವ ಆಸೆ: ಸಚಿವ ನಾಗೇಶ್‌

ಒಬ್ಬರಿಬ್ಬರು ಮಾಡುವಂತಹ ಕೆಲಸ ಅಲ್ಲ ಇದು. ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ಪರ್ಸೆಂಟೇಜ್‌ ನಿಲ್ಲಿಸಬೇಕೆಂದು ವೈಯಕ್ತಿಕವಾಗಿ ತೀರ್ಮಾನಿಸಿದೆ. ನನ್ನ ಮೈತ್ರಿ ಸರ್ಕಾರದಲ್ಲೂ ಕಮಿಷನ್‌ ನಡೆದಿದೆ. ಇದನ್ನೆಲ್ಲಾ ಸರಿಪಡಿಸಲು ಕಠಿಣ ನಿರ್ಧಾರ ಮಾಡಬೇಕಾದರೆ, ಒಂದು ಸ್ವತಂತ್ರ ಸರ್ಕಾರ ಅಧಿಕಾರಕ್ಕೆ ಬರಬೇಕು. ನನ್ನ ಕಾಲದಲ್ಲೂ ಪರ್ಸಂಟೇಜ್‌ ನಡೆದುಕೊಂಡು ಬಂದಿದೆ. ಎಲ್ಲವೂ ನನಗೆ ಗೊತ್ತಿದೆ. ಆದರೆ ನನ್ನ ಕಚೇರಿಯೊಳಗೆ ರೇವಣ್ಣನವರು ಇದ್ದರು. ಆ ಒಂದು ವಿಷಯದಲ್ಲಿ ನಾವು ದೂರ. 

ನಾವು ಅಧಿಕಾರ ನಡೆಸಬೇಕಾದರೆ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ನಾವು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದೆವು. ರೈತರ ಸಾಲ ಮನ್ನಾ ಮಾಡಿದೆ. ಅದರಲ್ಲಿ ಕಮಿಷನ್‌ ತೆಗೆದುಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದ ಅವರು, ರೈತರಿಂದ ಪ್ರೀತಿ ಗಳಿಸಬಹುದು. ಅದೇ ನನಗೆ ಕಮಿಷನ್‌. ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣವನರೇ ನನ್ನ ಮೇಲೆ ಯಾರಾದರೂ ಕೋರ್ಟ್‌ಗೆ ಹೋಗುವುದಾದರೆ ಹೋಗಿ ಅಂತ ಆಫರ್‌ ಕೊಟ್ಟಿದ್ದಾರೆ. ಅವರ ಹೇಳಿಕೆ ವಿರುದ್ಧ ಕೋರ್ಟ್‌ಗೆ ಹೋಗಿ ಮಾನನಷ್ಟ ಮೊಕದ್ದಮೆ ಹೂಡಿದರೆ ಸಂತೋಷ. ಸ್ವಾಗತ ಎಂದು ಅವರೇ ಹೇಳಿಕೊಂಡಿದ್ದಾರೆ. 

ಒಬ್ಬರೋ, ಇಬ್ಬರೋ ಬಿಟ್ಟರೆ, ಈ ಸರ್ಕಾರದಲ್ಲಿ ಬೇರೆ ಸಚಿವರ ಬಗ್ಗೆ ಚರ್ಚೆ ಮಾಡುವುದರಲ್ಲಿ ಪ್ರಯೋಜನವಿಲ್ಲ. ನಮ್ಮ ಮೈತ್ರಿ ಸರ್ಕಾರದ ವೇಳೆ ಕೆಲ ಇಲಾಖೆಯಲ್ಲಿ ಕಮಿಷನ್‌ ನಡೆದಿದೆ. ಜೆಡಿಎಸ್‌ ಮಂತ್ರಿಗಳಿಗೆ ಕಮಿಷನ್‌ ಇಟ್ಟುಕೊಳ್ಳಿ ಅಂತ ನಾನು ಸೂಚನೆ ಕೊಟ್ಟಿರಲಿಲ್ಲ. ಯಾರಿಗೂ ಆ ಕೆಲಸ ಮಾಡಲು ಬಿಟ್ಟಿಲ್ಲ. ಶಾಸಕ ಜಿ.ಟಿ. ದೇವೇಗೌಡರು ಪಾರ್ಟಿ ಬಿಟ್ಟು ಹೋಗಿಲ್ಲ, ಜೆಡಿಎಸ್‌ನಲ್ಲೇ ಇದ್ದಾರೆ ಎಂದರು.

ಅಗ್ನಿಬನ್ನಿರಾಯ ಸ್ವಾಮಿ ಜಯಂತಿ ಸರ್ಕಾರದಿಂದಲೇ ಆಚರಣೆ: ಸಿಎಂ ಬೊಮ್ಮಾಯಿ

ಒಂದೆರಡು ಟಿಕೆಟ್‌ ಕೊಡಲು ಸಿದ್ಧ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಿಗಳ ಸಮುದಾಯಕ್ಕೆ ಒಂದೆರಡು ಟಿಕೆಟ್‌ ಕೊಡಲು ನಾನು ಸಿದ್ದ ಎಂದು ತಿಳಿಸಿದ ಕುಮಾರಸ್ವಾಮಿ, ಸಣ್ಣ-ಸಣ್ಣ ಸಮುದಾಯಕ್ಕೂ ಅವಕಾಶ ಕೊಡಬೇಕೆಂಬುದು ನಮ್ಮ ಆಸೆ ಎಂದರು.

Follow Us:
Download App:
  • android
  • ios