ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪಕ್ಷ ಎಲ್ಲ ಸ್ಥಾನಮಾನ ನೀಡಿದೆ. ಆದರೂ ಅವರು ಈ ರೀತಿಯ ತೀರ್ಮಾನ ಮಾಡಿರುವ ಬಗ್ಗೆ ಅವರೇ ಯೋಚಿಸಬೇಕು: ಬಿ.ಎಸ್‌.ಯಡಿಯೂರಪ್ಪ 

ಬೆಂಗಳೂರು(ಏ.13): ಜಗದೀಶ್‌ ಶೆಟ್ಟರ್‌ ಅವರಿಗೆ ಪಕ್ಷ ಟಿಕೆಟ್‌ ಕೊಟ್ಟೇ ಕೊಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್‌ಗೆ ಟಿಕೆಟ್‌ ಕೊಡುವಂತೆ ನಾನೂ ಸಹ ವರಿಷ್ಠರಿಗೆ ಹೇಳಿದ್ದೇನೆ ಎಂದರು.

Add Asianetnews Kannada as a Preferred SourcegooglePreferred

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಟಿಕೆಟ್‌ ಸಿಗದೆ ಎಲ್ಲೆಲ್ಲಿ ಬೇಸರವಾಗಿದೆಯೋ ಅವರನ್ನು ಕರೆದು ಮಾತನಾಡುತ್ತಿದ್ದೇವೆ. ಇವತ್ತು ನಾಳೆ ಎಲ್ಲವೂ ಸರಿಹೋಗಲಿದೆ. ಇನ್ನು ಕೆ.ಎಸ್‌.ಈಶ್ವರಪ್ಪ ಅವರು ಕೂಡ ನನ್ನಂತೆ ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಯಾರಿಗೆ ಟಿಕೆಟ್‌ ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಅಧಿಕಾರಕ್ಕೆ ಬರಲು ನಮಗೆ ಯಾವುದೇ ತೊಂದರೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಲಿ ಶಾಸಕರಿಗೆ ಕೊಕ್‌, ಹೊಸಬರಿಗೆ ಮಣೆ: ಉಡುಪಿ ಮಂಗಳೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಪಕ್ಷ ಎಲ್ಲ ಸ್ಥಾನಮಾನ ನೀಡಿದೆ. ಆದರೂ ಅವರು ಈ ರೀತಿಯ ತೀರ್ಮಾನ ಮಾಡಿರುವ ಬಗ್ಗೆ ಅವರೇ ಯೋಚಿಸಬೇಕು ಎಂದು ಹೇಳಿದರು.

ನಡ್ಡಾ ಭೇಟಿಯಾದ ಶೆಟ್ಟರ್‌: 2 ದಿನದಲ್ಲಿ ಟಿಕೆಟ್‌ ವಿಚಾರ ನಿರ್ಧಾರ

ನವದೆಹಲಿ: ಬಿಜೆಪಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸುಮಾರು ಒಂದು ಗಂಟೆ ಚರ್ಚೆ ನಡೆಸಿದ್ದಾರೆ. ಶೆಟ್ಟರ್‌ ಅವರಿಗೆ ಟಿಕೆಟ್‌ ಬೇಡಿಕೆ ಕುರಿತು ಇನ್ನೆರಡು ದಿನಗಳಲ್ಲಿ ನಿಲುವು ಪ್ರಕಟಿಸುವ ಭರವಸೆ ನಡ್ಡಾ ಅವರಿಂದ ಸಿಕ್ಕಿದೆ.

ನಡ್ಡಾ ಅವರ ಭೇಟಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನಾನು ನನ್ನ ಮನಸ್ಸಲ್ಲಿದ್ದ ಎಲ್ಲ ಅಭಿಪ್ರಾಯ ಹೇಳಿದ್ದೇನೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಈ ಬಾರಿಯೂ ಸ್ಪರ್ಧಿಸಬೇಕು ಎಂದು ಅಂದುಕೊಂಡಿದ್ದೇನೆ. ನನ್ನ ಭಾವನೆ ಹಂಚಿಕೊಂಡಿದ್ದೇನೆ. ಸ್ಥಳೀಯ ರಾಜಕೀಯ ಪರಿಸ್ಥಿತಿ ಬಗ್ಗೆ ತಿಳಿಸಿದ್ದೇನೆ. ಅಕ್ಕಪಕ್ಕದ ಜಿಲ್ಲೆಗಳ ಪರಿಸ್ಥಿತಿಯನ್ನೂ ವಿವರಿಸಿದ್ದೇನೆ. ಅವರು ಎಲ್ಲವನ್ನೂ ಆಲಿಸಿದ್ದಾರೆ. ಹಿರಿಯ ನಾಯಕರ ಜೊತೆಗೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ನಡ್ಡಾ ಹೇಳಿದ್ದಾರೆ.

ಬಿಜೆಪಿ 2ನೇ ಪಟ್ಟಿ ಬಿಡುಗಡೆಯಾದ್ರೂ ಇನ್ನೂ 12 ಕ್ಷೇತ್ರಗಳ ಟಿಕೆಟ್‌ ನಿಗೂಢ..!

ಮತ್ತೆ ಯಾರನ್ನೂ ದೆಹಲಿಗೆ ಬಂದು ಭೇಟಿಯಾಗುವುದಿಲ್ಲ. ಎರಡು ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ. ಎಲ್ಲೂ ನಾನು ಸಿಟ್ಟು ಮಾಡಿಕೊಂಡಿಲ್ಲ. ಟಿಕೆಟ್‌ ನೀಡುತ್ತಾರೋ ಬಿಡುತ್ತಾರೋ ಅದನ್ನು ನಾನು ಹೇಳುವುದಿಲ್ಲ. ನಡ್ಡಾ ಅವರ ಭೇಟಿಯಿಂದ ಸಮಾಧಾನವಾಗಿದೆ ಎಂದರು. ನಡ್ಡಾ ಭೇಟಿ ವೇಳೆ ಶೆಟ್ಟರ್‌ ಅವರ ಜತೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಕೂಡ ಇದ್ದರು.

ಮಾಜಿ ಸಚಿವ ಈಶ್ವರಪ್ಪ ಗೈರು

ಜಗದೀಶ್‌ ಶೆಟ್ಟರ್‌ ಅವರ ಜತೆಗೆ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ದೆಹಲಿಗೆ ಬರುವಂತೆ ಹೈಕಮಾಂಡ್‌ನಿಂದ ಬುಲಾವ್‌ ಬಂದಿತ್ತು. ಆದರೆ, ಈಶ್ವರಪ್ಪ ಅವರು ತಮ್ಮ ಪತ್ನಿಯ ಅನಾರೋಗ್ಯದ ನೆಪವೊಡ್ಡಿ ಶಿವಮೊಗ್ಗದಲ್ಲೇ ಉಳಿದಿದ್ದಾರೆ.