ಕಾಂಗ್ರೆಸ್‌ ಸರ್ಕಾರ ಬಂದ ತಕ್ಷಣ ವಿದ್ಯುತ್‌ ಬೆಲೆ ಏರಿಕೆ ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಿದ್ಯುತ್‌ ಬೆಲೆ ಏರಿಕೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟಪಡಿಸಿದರು.

ಬಾಳೆಹೊನ್ನೂರು (ಜೂ.19): ಕಾಂಗ್ರೆಸ್‌ ಸರ್ಕಾರ ಬಂದ ತಕ್ಷಣ ವಿದ್ಯುತ್‌ ಬೆಲೆ ಏರಿಕೆ ಮಾಡಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ವಿದ್ಯುತ್‌ ಬೆಲೆ ಏರಿಕೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟಪಡಿಸಿದರು. ರಂಭಾಪುರಿ ಪೀಠದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಮಾಡುವ ಪ್ರಕ್ರಿಯೆ 2022ರ ನವೆಂಬರ್‌ ತಿಂಗಳಿನಿಂದಲೇ ನಡೆದಿದ್ದು, ಮಾಚ್‌ರ್‍ನಲ್ಲಿ ಏರಿಕೆ ಆಗಬೇಕಿತ್ತು. ಆದರೆ ಆಗ ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಏರಿಕೆ ಮಾಡಿರಲಿಲ್ಲ. ನಂತರ ಮೇ 12ರಂದು ದರ ಏರಿಕೆ ಮಾಡಲಾಗಿದೆ. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. 

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಮೇ 20ಕ್ಕೆ ಎಂದರು. ಕೆಇಆರ್‌ಸಿ ಕೇಂದ್ರ ಕಾಯ್ದೆಯಡಿ ದರ ಏರಿಕೆಯಾಗಿದ್ದು, ಇದರಡಿ ದರ ಏರಿಕೆಯಾದರೆ ನಾವು ಕಡಿಮೆ ಮಾಡಲು ಸಾಧ್ಯವಿಲ್ಲ. ಸೆಸ್ಕಾಂನವರು ಯುನಿಟ್‌ಗೆ ರು.1.50 ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಕೆಇಆರ್‌ಸಿ ಎಲ್ಲಾ ಸಂಘ ಸಂಸ್ಥೆ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಯೂನಿಟ್‌ಗೆ ಕೇವಲ 70 ಪೈಸೆ ಏರಿಕೆ ಮಾಡಿದೆ. ಅದನ್ನು ನಾವು ಹಿಂಪಡೆಯಲು ಆಗಲ್ಲ. ಅದಕ್ಕೆ ನಾವು ಬದ್ಧರಾಗಿ ಇರಬೇಕಿದೆ. ಬೆಲೆ ಏರಿಕೆ ಈಗಾಗಲೇ ಆಗಿದೆ. ಇದನ್ನು ತಡೆಯಲು ಸಾಧ್ಯವಿಲ್ಲ. 

ಸಾಂಸ್ಕೃತಿಕ, ಚಾರಿತ್ರಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಮೈಸೂರು ಅಭಿವೃದ್ಧಿ: ಸಚಿವ ಮಹದೇವಪ್ಪ

ಆದರೆ ಈಗ ನಮ್ಮ ಸರ್ಕಾರ ಬಂದ ನಂತರ 200 ಯೂನಿಟ್‌ ವಿದ್ಯುತ್‌ ಗೃಹಬಳಕೆಗೆ ಉಚಿತ ನೀಡುತ್ತಿದ್ದು, ಇದರಿ ಂದಾಗಿ ಗೃಹ ಬಳಕೆದಾರರಿಗೆ ಯಾವುದೇ ತೊಂದರೆಯಿಲ್ಲ. ಗೃಹ ಬಳಕೆದಾರರು ಈ ಹಿಂದೆ ಇದ್ದ ವಿದ್ಯುತ್‌ ಬಾಕಿಯನ್ನು ಮಾತ್ರ ಪಾವತಿಸಬೇಕಿದೆ ಎಂದರು. ರೈತರ ಐಪಿ ಸೆಟ್‌ಗಳಿಗೆ ಸಂಪರ್ಕ ಕಲ್ಪಿಸದಿರುವ ಕುರಿತು ಪ್ರಶ್ನಿಸಿದಾಗ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು. ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು. 

ಯೋಜ​ನೆ​ಗಳ ಫಲಿ​ತಾಂಶದ ಸಮಗ್ರ ವರದಿ ಸಲ್ಲಿಸಿ: ಅಧಿ​ಕಾ​ರಿ​ಗ​ಳಿಗೆ ಸಂಸದ ಡಿ.ಕೆ.ಸು​ರೇಶ್‌ ಸೂಚನೆ

ಮಲೆನಾಡು ಭಾಗದಲ್ಲಿ ವ್ಯಾಪಿಸಿರುವ ಅಡಕೆ ಹಳದಿ ಎಲೆ, ಎಲೆಚುಕ್ಕಿ ರೋಗದ ಕುರಿತು ಮಾಹಿತಿ ಬಂದಿದ್ದು, ಈ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಸಂಬಂಧಿಸಿದ ಸಚಿವರ ಜೊತೆ ಚರ್ಚೆ ಮಾಡಿ ಪರಿಹಾರಕ್ಕೆ ಹಾಗೂ ಸಂಶೋಧನೆ ಹಣ ಬಿಡುಗಡೆಗೆ ಕೋರಲಾಗುವುದು ಎಂದರು. ಮಳೆಗಾಲ ಹಾಗೂ ಅತಿವೃಷ್ಟಿಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಲಾಗಿದೆ. ಈ ಹಿಂದೆ ನಮ್ಮ ಸರ್ಕಾರವಿದ್ದಾಗ ಅತಿವೃಷ್ಟಿಗೆ ವಿಶೇಷ ಅನುದಾನಗಳನ್ನು ಮಂಜೂರು ಮಾಡಿಸಿಕೊಂಡು ಬಂದು ಸಮಸ್ಯೆ ಪರಿಹಾರ ಮಾಡಲಾಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ ವಿಶೇಷ ಅನುದಾನಗಳು ಮಂಜೂರಾಗಿಲ್ಲ. ನಮ್ಮ ಸರ್ಕಾರ ಇಂತಹ ತಾರತಮ್ಯ ಮಾಡುವುದಿಲ್ಲ ಎಂದರು.