ಮೈಸೂರು ನಗರವನ್ನು ಸಾಂಸ್ಕೃತಿಕ, ಚಾರಿತ್ರಿಕೆ ಹಿನ್ನೆಲೆಯೊಂದಿಗೆ ಬೌದ್ಧಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿಪಡಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

ಮೈಸೂರು (ಜೂ.18): ಮೈಸೂರು ನಗರವನ್ನು ಸಾಂಸ್ಕೃತಿಕ, ಚಾರಿತ್ರಿಕೆ ಹಿನ್ನೆಲೆಯೊಂದಿಗೆ ಬೌದ್ಧಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿಪಡಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದೇವರಾಜ ಮಾರುಕಟ್ಟೆಅಭಿವೃದ್ಧಿಯ ಜೊತೆಗೆ, ಅದರ ಸುತ್ತಲಿನ 200 ಮೀ. ಪ್ರದೇಶವನ್ನು ಸಂಚಾರ ಮುಕ್ತ (ಝೀರೋ ಟ್ರಾಫಿಕ್‌) ವಲಯವನ್ನಾಗಿ ಮಾಡಲಾಗುವುದು ಎಂದರು.

ಮೈಸೂರನ್ನು ಅಭಿವೃದ್ಧಿಪಡಿಸಿರುವುದು ಯಾರು ಎಂಬುದಕ್ಕೆ ದಾಖಲಾತಿ ಇದೆ. ಮಹಾರಾಜರು ಬಿಟ್ಟರೆ ನಾವೇ ಅಭಿವೃದ್ಧಿಪಡಿಸಿರುವುದು ಎಂಬ ಸಂಸದರ ಹೇಳಿಕೆಗೆ ಪ್ರತಿ ಹೇಳಿಕೆ ನೀಡುವ ಬದಲು ದಾಖಲೆ ತೆರೆದಿಟ್ಟರೆ ಗೊತ್ತಾಗುವುದಿಲ್ಲವೇ ಎಂದು ಹೇಳಿದರು. ಮೈಸೂರಿನಲ್ಲಿ ಜಿಲ್ಲಾ ಆಸ್ಪತ್ರೆ, ಟ್ರಾಮಾ ಸೆಂಟರ್‌, ಜಯದೇವ ಹೃದ್ರೋಗ ಆಸ್ಪತ್ರೆ, ಮಹಾರಾಣಿ ಕಾಲೇಜು, ಜಿಲ್ಲಾಧಿಕಾರಿ ಕಚೇರಿ ಸೇರಿ ಹಲವು ಅಭಿವೃದ್ಧಿ ಕಾರ್ಯ ನಡೆದಿದೆ. ನಜರಬಾದ್‌ನಿಂದ ಬನ್ನೂರು ರಸ್ತೆಕಡೆ ಹೊರಟರೆ ರಾತ್ರಿ ವೇಳೆ ವಿದೇಶಕ್ಕೆ ಹೋದ ಅನುಭವವಾಗುತ್ತದೆ ಎಂದು ಅವರು ತಿಳಿಸಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಕಬಾಬ್‌ ತಿನ್ನಲು ಅವಕಾಶ: ಸಚಿವ ಎಚ್‌.ಸಿ.ಮಹದೇವಪ್ಪ

ಮೈಸೂರಿನಲ್ಲಿ ಚಲನಚಿತ್ರ ನಗರಿ ನಿರ್ಮಾಣ ಸಂಬಂಧ ನಮ್ಮ ಹದಿನಾರು ಸಮೀಪದ ಇಮ್ಮಾವು ಬಳಿ ಸ್ಥಳ ಗುರುತಿಸಲಾಗಿದೆ. ನಮ್ಮ ಅವಧಿಯಲ್ಲಿಯೇ ಈ ಕೆಲಸ ಆಗಿತ್ತು. ಇನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಮೈದಾನ ಆಗಬೇಕು ಎಂದು ಜಾವಗಲ್‌ ಶ್ರೀನಾಥ್‌ ಮತ್ತು ಅನಿಲ್‌ಕುಂಬ್ಳೆ ಕೇಳಿದ್ದರು. ಆದ್ದರಿಂದ ವರಕೂಡು ಬಳಿ ಜಾಗ ಗುರುತಿಸಲಾಗಿದೆ. ಈ ಎಲ್ಲಾ ಕೆಲಸವನ್ನು ಹಂತ ಹಂತವಾಗಿ ಮಾಡುತ್ತೇವೆ ಎಂದರು.

ಮೈಸೂರಿನಲ್ಲಿ ಅಷ್ಟೊಂದು ಆಸ್ಪತ್ರೆಗಳನ್ನು ನಿರ್ಮಿಸದಿದ್ದರೆ ಕೋವಿಡ್‌ ಸಮಯದಲ್ಲಿ ಏನಾಗುತ್ತಿತ್ತು ಎಂಬುದರ ಅರಿವಿರಬೇಕು. ಇನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸಿಎ ನಿವೇಶನ ಹಂಚಿಕೆಯಾಗಿದ್ದು, ಹಕ್ಕು ಪತ್ರ ನೀಡಬೇಕಿದೆ. ಇದರ ಜೊತೆಗೆ ಒಂದು ಕೋಟಿ ಅನುದಾನ ನೀಡುವ ಸಂಬಂಧ ಮುಖ್ಯಮಂತ್ರಿಗಳೊಡನೆ ಚರ್ಚಿಸುವುದಾಗಿ ಅವರು ಹೇಳಿದರು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಸಂಬಂಧ ಸಭೆ ನಡೆಸಲಾಗಿದೆ. ಇವುಗಳಿಗೆ ಹೊಸ ರೂಪ ನೀಡಲಾಗುವುದು. ಚಾಮುಂಡಿಬೆಟ್ಟಸಂರಕ್ಷಣೆಗೆ ಇಲಾಖೆ ಅಧಿಕಾರಿಗಳ ಜೊತೆ ಸೇರಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ವಿವರಿಸಿದರು.

ಪ್ರತಾಪ್‌ಸಿಂಹ ಮಾತಿಗೆ ತೂಕ, ಮಾನ್ಯತೆ, ಗಂಭೀರತೆ ಇಲ್ಲ: ಕೆಲವರು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಸಂಸದ ಪ್ರತಾಪ್‌ ಸಿಂಹ ಅವರ ಮಾತಿಗೆ ತೂಕ, ಮಾನ್ಯತೆ, ಗಂಭೀರತೆ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹೇದವಪ್ಪ ತಿಳಿಸಿದರು. ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹೊಂದಾಣಿಕೆ ರಾಜಕಾರಣ ಯಾರು ಮಾಡುತ್ತಾರೆ, ಮಾಡಿದ್ದಾರೆ ಎಂದು ಹೇಳಲಿ, ಹೊಂದಾಣಿಕೆ ರಾಜಕಾರಣ ಮಾಡುವವರು ಯಾರೆಂದು ಕಾಂಗ್ರೆಸ್‌ಗೆ ಗೊತ್ತಿಲ್ಲ ಎಂದರು.

ಜು.1ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಲು ತೀರ್ಮಾನ: ಡಿ.ಕೆ.ಶಿವಕುಮಾರ್‌

ಇನ್ನು, ಹಣದ ಕ್ರೋಢಿಕರಣ ಹಣಕಾಸು ಇಲಾಖೆಗೆ ಸಂಬಂಧಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಮೇಧಾವಿ ಆರ್ಥಿಕ ತಜ್ಞರು, ಅವರು ಯೋಜನೆ ಮಾಡುತ್ತಾರೆ, ಹೇಗೆ ಮಾಡುತ್ತೇವೆಂದು ಸಂಸದ ಪ್ರತಾಪ್‌ ಸಿಂಹಗೆ ಹೇಳುವ ಅಗತ್ಯವಿಲ್ಲ ಎಂದು ಪ್ರತಾಪ್‌ ಸಿಂಹ ಹೇಳಿಕೆಗೆ ತಿರುಗೇಟು ಕೊಟ್ಟರು. ಇನ್ನು, ವಿದ್ಯುತ್‌ ದರ ಏರಿಕೆ ಸಂಬಂಧ ಪ್ರತಿಕ್ರಿಯಿಸಿ, ವಿದ್ಯುತ್‌ ದರವನ್ನು ಏರಿಕೆ ಮಾಡಿದ್ದು ಬಿಜೆಪಿ ಅವರು, ಈಗ ಅವರಿಗೆ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಬೇಕಾದಾಗ ಒಂದು ಬೇಡದಿದ್ದಾಗ ಒಂದು ಎಂಬಂತೆ ಹೇಳಿಕೆ ಕೊಡುತ್ತಿದ್ದು ಅವರೇ ವಿದ್ಯುತ್‌ ದರ ಏರಿಕೆ ಮಾಡಿ ಈಗ ಅವರೇ ಟೀಕೆ ಮಾಡುವುದೇ ಎಷ್ಟುಸರಿ ಎಂದು ಕಿಡಿಕಾರಿದರು.