ರಾಜ್ಯ ಸರ್ಕಾರ ಭಾರತ ಪರವಾಗಿ ಇದೆಯಾ ಇಲ್ಲ, ಪಾಕಿಸ್ತಾನ ಪರವಾಗಿ ಇದೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು. 

ಶಿವಮೊಗ್ಗ (ಫೆ.28): ರಾಜ್ಯ ಸರ್ಕಾರ ಭಾರತ ಪರವಾಗಿ ಇದೆಯಾ ಇಲ್ಲ, ಪಾಕಿಸ್ತಾನ ಪರವಾಗಿ ಇದೆಯಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ಗೆದ್ದ ಕಾಂಗ್ರೆಸ್ ಶಾಸಕನ ಬೆಂಬಲಿಗರು ಭಾರತಪರ ಘೋಷಣೆ ಬಿಟ್ಟು, ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ. ಪಾಕಿಸ್ತಾನದ ಪರವಾಗಿ ನಾವಿದ್ದರೆ ಹೆಚ್ಚಿನ ಬಲ ಸಿಗುತ್ತದೆ ಎಂಬ ಭ್ರಮೆ ಕಾಂಗ್ರೆಸ್ ನಾಯಕರದ್ದಾಗಿದೆ. ಕಾಂಗ್ರೆಸ್ ಪಾಕಿಸ್ತಾನ ಪರ ಇದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆ ಎಂದು ಕಿಡಿಕಾರಿದರು. ಈ ಹಿಂದೆ. ರಾಷ್ಟ್ರದ ವಿಭಜನೆ ಮಾಡುವ ದಿಕ್ಕಿನಲ್ಲಿ ಡಿ.ಕೆ.ಸುರೇಶ್ ಹೇಳಿಕೆ ಕೊಟ್ಟಿದ್ದರು.

Add Asianetnews Kannada as a Preferred SourcegooglePreferred

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿದ್ದರು. ಆದರೆ, ಡಿಕೆಶಿ ತಮ್ಮನ ಪರವಾಗಿ ನಿಂತರು‌. ಈಗ ಇದಕ್ಕೇನು ಉತ್ತರ ಕೊಡುತ್ತಾರೆ? ನಾಸೀರ್ ಹುಸೇನ್ ಬೇಜವಾಬ್ದಾರಿಯಿಂದ ಓಡಿ ಹೋಗ್ತಾನೆ. ಇದನ್ನು ಕಾಂಗ್ರೆಸ್ ಶಾಸಕರು ಖಂಡಿಸಬೇಕು. ನಾಸೀರ್ ಹುಸೇನ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಹರಿಹಾಯ್ದರು. ಮುಸ್ಲಿಂರ ಸಂತೃಪ್ತಿಪಡಿಸೋದು ನಮ್ಮ ಹಕ್ಕು ಎಂಬುದು ಕಾಂಗ್ರೆಸ್ ನದ್ದಾಗಿದೆ. ರಾಷ್ಟ್ರದ ನಾಯಕರು ಏನು ಕ್ರಮ ಕೈಗೊಳ್ಳಬೇಕು ಅಂತಾ ಚರ್ಚೆ ಮಾಡ್ತಾರೆ. ಕಾಶ್ಮೀರದಲ್ಲಿ ಈ ರೀತಿ ನಡೆಯುತಿತ್ತು. ಈಗ ಅದರ ಛಾಯೆ ಕರ್ನಾಟಕದ ಮೇಲೆ ಬೀಳುತ್ತಿದೆ. ಅಂತಹ ವ್ಯಕ್ತಿ ರಾಜ್ಯ ಸಭೆಗೆ ಆಯ್ಕೆ ಮಾಡಿರೋದು ತುಂಬ ನೋವಾಗಿದೆ. ಕಾಂಗ್ರೆಸ್ ಸರ್ಕಾರ ಈ ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

‘ಪಾಕಿಸ್ತಾನ್ ಜಿಂದಾಬಾದ್‌’ ಘೋಷಣೆಗೆ ಬಿಜೆಪಿ ಕಿಡಿ: ರಾಜ್ಯ ಸಭಾ ಚುನಾವಣೆಯಲ್ಲಿ ನಾಸಿರ್‌ ಹುಸೇನ್‌ ಜಯಗಳಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಹಾಕಿರುವುದನ್ನು ಖಂಡಿಸಿ ಚಿಕ್ಕ ಮಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್‌.ದೇವರಾಜ್‌ ಶೆಟ್ಟಿ ನೇತೃತ್ವದಲ್ಲಿ ಇಲ್ಲಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಾಸಿರ್ ಹುಸೇನ್‌ ಅವರ ಭಾವಚಿತ್ರಕ್ಕೆ ಬೆಂಕಿಯನ್ನು ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಿಂದ ಹಾಸನ ಜಿಲ್ಲೆಗೆ 9 ಸಾವಿರ ಕೋಟಿ ಬಂದಿದೆ: ಎಚ್.ಡಿ.ರೇವಣ್ಣ ಶ್ಲಾಘನೆ

ಇದೇ ಸಂದರ್ಭದಲ್ಲಿ ದೇವರಾಜ್‌ ಶೆಟ್ಟಿ ಮಾತನಾಡಿ, ಇದು, ಹಿಂದೂ ವಿರೋಧಿ, ದೇಶ ವಿರೋಧಿ ನೀತಿ. ಇಡೀ ದೇಶಕ್ಕೆ ಅಪಮಾನ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್‌ನ ಮನಸ್ಥಿತಿ ಗೊತ್ತಾಗುತ್ತದೆ. ಅಲ್ಪಸಂಖ್ಯಾತರ ಓಲೈಕೆಯನ್ನು ಸ್ಪಷ್ಟಪಡಿಸಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಕೋಟೆ ರಂಗನಾಥ್‌, ಸಂತೋಷ್‌ ಕೋಟ್ಯಾನ್‌, ಪುಷ್ಪರಾಜ್‌, ಹಿರೇಮಗಳೂರು ರೇವನಾಥ್‌, ಮಧುಕುಮಾರ್‌ ರಾಜ್‌ ಅರಸ್‌ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.