ಮುಖ್ಯಮಂತ್ರಿಗಳು ಪದೇ ಪದೇ ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಕ್ಫ್‌ ಸಚಿವ ಜಮೀರ್‌ ಅಹ್ಮದ್‌, ಸಿಎಂ ಸಿದ್ದರಾಮಯ್ಯ ಜತೆಗೆ ನಾನು ಸಹ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೇನೆ. ದೇವಸ್ಥಾನಕ್ಕೆ ಪದೇ ಪದೇ ಹೋಗುವುದು ತಪ್ಪಾ ಎಂದು ಪ್ರಸ್ನಿಸಿದರು. 

ಧಾರವಾಡ (ಸೆ.03): ಮುಖ್ಯಮಂತ್ರಿಗಳು ಪದೇ ಪದೇ ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಕ್ಫ್‌ ಸಚಿವ ಜಮೀರ್‌ ಅಹ್ಮದ್‌, ಸಿಎಂ ಸಿದ್ದರಾಮಯ್ಯ ಜತೆಗೆ ನಾನು ಸಹ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದೇನೆ. ದೇವಸ್ಥಾನಕ್ಕೆ ಪದೇ ಪದೇ ಹೋಗುವುದು ತಪ್ಪಾ ಎಂದು ಪ್ರಸ್ನಿಸಿದರು. ಇನ್ನು, ಚಾಮರಾಜನಗರಕ್ಕೆ ಮಂತ್ರಿಗಳು ಹೋದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ನಾನು ಸಹ ಐದಾರು ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ, ಅಧಿಕಾರ ಕಳೆದುಕೊಂಡಿದ್ದೇನಾ ಎಂದೂ ಪ್ರಶ್ನೆ ಮಾಡಿದರು.

Add Asianetnews Kannada as a Preferred SourcegooglePreferred

ಗ್ಯಾರಂಟಿಯಿಂದ ಎಂಪಿ ಎಲೆಕ್ಷನ್‌ನಲ್ಲಿ ಮತ ಗಳಕೆ ಹೆಚ್ಚಳ: ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಹುನ್ನಾರ ಬಿಜೆಪಿಯದ್ದು. ಆದರೆ ಇದರಲ್ಲಿ ಅದು ಯಶಸ್ವಿಯಾಗಲ್ಲ ಎಂದು ವಸತಿ ಸಚಿವ ಜಮೀರ ಅಹಮದ್‌ ಖಾನ್ ಹೇಳಿದರು. ಇಲ್ಲಿಯ ಧಾರವಾಡ ಗ್ರಾಮೀಣ ಮತ್ತು ಹು-ಧಾ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 9 ಸ್ಥಾನಗಳನ್ನು ಮಾತ್ರ ಗೆದ್ದಿರಬಹುದು. ಆದರೆ ನಮ್ಮ ಮತಗಳಿಕೆ ಗಣನೀಯವಾಗಿ ಹೆಚ್ಚಿದೆ. ಶೇ.11ರಷ್ಟು ಮತಗಳಿಕೆಯಲ್ಲಿ ಹೆಚ್ಚಾಗಿದೆ. ಇದಕ್ಕೆ ಗ್ಯಾರಂಟಿ ಸ್ಕೀಂಗಳೇ ಕಾರಣ. ಇದು ಬಿಜೆಪಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಆದಕಾರಣ ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಬೇಕು ಎಂಬ ಯೋಚನೆ ಬಿಜೆಪಿ- ಜೆಡಿಎಸ್‌ನದ್ದು. ಅದಕ್ಕಾಗಿ ಸಿದ್ದರಾಮಯ್ಯ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಬೇಕು. ಆಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಹುದು ಎಂಬ ಹುನ್ನಾರ ಅಡಗಿದೆ ಎಂದರು. ಲೋಕಸಭೆ ಚುನಾವಣೆ ವೇಳೆ ಬಿಜೆಪಿಯವರು ಹೇಳಿದಂತೆ 400 ಸ್ಥಾನ ಗೆದ್ದಿದ್ದರೆ ಸಿಬಿಐ, ಇಡಿ ಬಳಕೆ ಮಾಡಿ ಕಾಂಗ್ರೆಸ್ ಶಾಸಕರನ್ನು ಹೆದರಿಸಿ ಬೆದರಿಸಿ ಖರೀದಿ ಮಾಡುತ್ತಿದ್ದರು. ಆದರೆ, ಅವರಿಗೆ ದೇವರು ಶಿಕ್ಷೆ ಕೊಟ್ಟ. ಬಿಜೆಪಿಯವರು 240 ಸ್ಥಾನಗಳಿಗೆ ಸೀಮಿತಗೊಂಡರು. ಹಾಗಾಗಿ ಅವರು ಸರ್ಕಾರ ಉರುಳಿಸಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ ಅಷ್ಟೇ. ಆದರೆ ಇದರಲ್ಲಿ ಅವರು ಯಶಸ್ವಿಯಾಗಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಟಗರು, ಹುಲಿಯಿದ್ದಂತೆ ಭಯದ ಅಗತ್ಯವಿಲ್ಲ: ಸಚಿವ ಜಮೀ‌ರ್

ಅಲ್ಪಸಂಖ್ಯಾತ ಕಾರ್ಯಕರ್ತರ ಶ್ರಮದಿಂದ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಚುನಾವಣೆ ವೇಳೆ ದುಡಿದ ಕಾರ್ಯಕರ್ತರಿಗೆ ಪಕ್ಷದಲ್ಲಿ ಯಾವುದೇ ಅಧಿಕಾರ, ಸ್ಥಾನ ಮಾನ ಸಿಗುತ್ತಿಲ್ಲ. ಕೇವಲ ಶಿಫಾರಸು ಮೇಲೆ ಹಾಗೂ ಪ್ರಭಾವಿಗಳಿಗೆ ಸ್ಥಾನಮಾನ ನೀಡಿರುವ ಉದಾಹರಣೆಗಳಿವೆ. ಮುಂದೆ ಹೀಗಾಗದಂತೆ ಕ್ರಮ ವಹಿಸಲು ವರಿಷ್ಠರ ಜತೆ ಮಾತನಾಡುತ್ತೇನೆ ಎಂದರು. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಸಿಗಬೇಕು. ಶಿಗ್ಗಾಂವಿ ವಿಧಾನಸಭೆ ಉಪ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಹೈಕಮಾಂಡ್‌ಗೆ ತಿಳಿಸಿದ್ದೇವೆ ಎಂದು ಹೇಳಿದರು.