ಗದಗದ ಬಸವೇಶ್ವರ ಮೂರ್ತಿ ಎದುರು ಜನಾರ್ದನರೆಡ್ಡಿ ಫೋಟೋ ಶೂಟ್. ಶ್ರೀರಾಮುಲು ಅವರ ಗದಗದ  ನಿವಾಸಕ್ಕೂ ಭೇಟಿ. ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದ ಜನಾರ್ದನ ರೆಡ್ಡಿ ದಿಢೀರ್ ವಿಸಿಟ್.

ವರದಿ : ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಗದಗ (ಡಿ.6): ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಂಗಳವಾರ ಸಂಜೆ ಕೆಲವೇ ಕೆಲವು ಬೆಂಬಲಿಗರು ಮತ್ತು ಫೋಟೋ ವಿಡಿಯೋ ಟೀಮ್ ನೊಂದಿಗೆ ಬಂದು ಗದಗದ ಬಸವೇಶ್ವರ ಗಾರ್ಡನ್ ನಲ್ಲಿ ಕಾಣಿಸಿಕೊಂಡ್ರು. ಬಸವೇಶ್ವರ ಮೂರ್ತಿ ದರ್ಶನಕ್ಕೂ ಮುಂಚೆ ಗದಗನಲ್ಲಿರೋ ರಾಮುಲು ಅವರ ಮನೆಗೆ ಹೋಗಿ ಬಂದಿದ್ದಾರೆ‌. ನಂತ್ರ ಕೆಲ ಹೊತ್ತು ಗಾರ್ಡನ್ ನಲ್ಲಿ ವೀಡಿಯೋ, ಫೋಟೋ ಶೂಟ್ ನಡೆಸಿದ್ರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ್ನಾಡಿ, ಬಸವೇಶ್ವರ ಮೂರ್ತಿ ನೋಡೋದಕ್ಕೆ ಬಂದಿದ್ದೆ ಅಂತಾ ಹೇಳಿದ್ರು. ತೋಂಟದಾರ್ಯ ಸ್ವಾಮಿಜೀಗಳ ಆಶಯದಂತೆ ಬಸವೇಶ್ವರ ಮೂರ್ತಿ ನಿರ್ಮಿಸಲಾಗಿದೆ. ರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ನಾನು ಪ್ರವಾಸೋದ್ಯಮ ಸಚಿವನಾಗಿದ್ದೆ. ಆಗ ಬಸವೇಶ್ವರ ಪುತ್ಥಳಿ ಸ್ಥಾಪನೆ ಒತ್ತಾಯ ಇತ್ತು. ಈ ಭಾಗದ ಜನರ ಆಶಯದಂತೆ ಪುತ್ಥಳಿ ನಿರ್ಮಾಣವಾಗಿದೆ. ನುಡಿದಂತೆ ನಡೆದಿದ್ದೇವೆ. ನೆನಪಿಗಾಗಿ ಸ್ಥಳಕ್ಕೆ ಭೇಟಿ ನೀಡಿ ಫೋಟೋ ವೀಡಿಯೋ ತೆಗೆದುಕೊಳ್ಳಬೇಕೆಂದಿದ್ದೆ. ಬಸವಣ್ಣ ಜೀವಂತವಾಗಿ, ಸಾಕ್ಷಾತ್ ಬಸವಣ್ಣ ನಿಂತಂತಿದೆ ಅಂತಾ ಮೂರ್ತಿಯ ಬಗ್ಗೆ ಹೇಳಿದ್ರು. 

ಹೊಸ ರಾಜಕೀಯ ಪಕ್ಷ ಆರಂಭಿಸುತ್ತೀರಾ ಅನ್ನೋ ಪ್ರಶ್ನೆಗೆ ಬಿಜೆಪಿಯಿಂದ ರಾಜಕೀಯ ಆರಂಭವಾಗಿದೆ. ಆಡ್ವಾನಿಯವರ ರಾಮ ರಥಯಾತ್ರೆ ಮೂಲಕ ಕೆಲಸ ಆರಂಭ ಮಾಡಿದ್ವಿ. ಏನಿದ್ರೂ ಭಾರತೀಯ ಜನತಾ ಪಕ್ಷದ ಮೇಲೆ ಅಭಿಮಾನ ಇರುತ್ತೆ ಅಂತಾ ಹೇಳಿದ್ರು. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡ್ತೇನೆ ಅನ್ನೋ ಮೂಲಕ ಎಲ್ಲೂ ತಮ್ಮ ನಡೆಯನ್ನ ಸ್ಪಷ್ಟವಾಗಿ ಹೇಳಲಿಲ್ಲ. 

ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ಬಳ್ಳಾರಿಯಿಂದ ಹೊರಗಿರಬೇಕಿದೆ. ಬೆಂಗಳೂರಲ್ಲಿ ಇರಲು ಇಷ್ಟ ಇಲ್ಲ. ಉತ್ತರ ಕರ್ನಾಟಕದ ಬಳ್ಳಾರಿ, ಬೀದರ್ ನಿಂದ ಬೆಳಗಾವಿ ವರೆಗೆ ಎಲ್ಲಾದ್ರೂ ಇರಬೇಕು. ಮನಸ್ಸಿಗೆ, ಆರೋಗ್ಯಕ್ಕೆ ಈ ವಾತಾವರಣ ತೃಪ್ತಿ ತರುತ್ತದೆ‌ ಅಂತಾ ಹೇಳಿದ್ರು. ನಮ್ಮ ಜನರ ನಡುವೆಯೇ ಇರಬೇಕು ಅನ್ನೋ ಕಾರಣಕ್ಕೆ ಗಂಗಾವತಿಯಲ್ಲಿ ಮನೆ ಮಾಡಿದ್ದೇನೆ ಅಂತಾ ಹೇಳಿಕೊಂಡ್ರು. ಹೊಸ ಪಕ್ಷದ ವಿಚಾರವಾಗಿ ಹೆಚ್ಚು ಮಾತಾಡಲ್ಲ. ಇನ್ನೂ ಸಮಯ ಇದೆ ಅಂದ್ರು. ನಿಮಗೆ ಯಾವ ಪಕ್ಷದ ನಾಯಕರು ಸಂಪರ್ಕದಲ್ಲಿದ್ದಾರೆ ಅಂತಾ ಕೇಳಿದ್ರೆ ನಾಯಕರ ಸಂಪರ್ಕ ಅಲ್ಲ. ನಮ್ಮ ಜೊತೆ ಜನರಿದ್ದಾರೆ ಅಂತಾ ಹೇಳಿದ್ರು. 12 ವರ್ಷ ಮನೆಯಲ್ಲಿದ್ದೇನೆ. ಈಗ ಜನರ ಜೊತೆ ಇರಬೇಕು ಅಂತಾ ನಿರ್ಧರಿಸಿ ಸಂಚಾರ ನಡೆಸಿದ್ದೇನೆ ಅಂದ್ರು. 

ಅಭಿಮಾನ ಅಂದ್ರೆ ಬಿಜೆಪಿ. ಹಿರಿಯರು, ನಾಯಕರು ಏನು ತೀರ್ಮಾನ ಮಾಡ್ತಾರೆ ಕಾಯ್ದು ನೋಡ್ತಿದಿನಿ. ಯಾವ ಕ್ಷೇತ್ರದಿಂದ ಚುನಾವಣೆ ಅನ್ನೋದನ್ನ ಬರುವ ದಿನಗಳಲ್ಲಿ ತಿಳಿಸುತ್ತೇನೆ‌. ಬಿಜೆಪಿ ಮೇಲೆ ಒಲವು ಹೊಂದಿರೋ ಜನಾರ್ದನರೆಡ್ಡಿ ಕಾಯ್ದು ನೋಡುವ ತಂತ್ರ ಅನುಸರಸ್ತಿದಾರೆ.

Ballari Politics: ಹೊಸ ಪಕ್ಷ ಕಟ್ಟಲು 'ಗಣಿಧಣಿ' ನಿರ್ಧಾರ?: ಆಪ್ತಮಿತ್ರರ ಮಧ್ಯೆ ಬಿರುಕು

ರಾಮುಲು ಮನೆ ಅಂದ್ರೆ ನಮ್ಮ ಮನೆ, ನಮ್ಮ ಮನೆ ಅಂದ್ರೆ ರಾಮುಲು ಮನೆ:
ಗದಗ ನಗರಕ್ಕೆ ಭೇಟಿ ನೀಡಿದ್ದ ರೆಡ್ಡಿ, ರಾಮುಲು ಅವರ ಗದಗ ನಿವಾಸಕ್ಕೆ ತೆರಳಿದ್ರು. ರಾಮುಲು ಜೊತೆಗೆ ನಿಮ್ಮ ಮುನಿಸು ಇದ್ಯಾ ಅನ್ನೋ ಪ್ರಶ್ನೆಗೆ, ಗದಗನಲ್ಲಿ ಬಂದು ರಾಮುಲು ಮನೆಯಲ್ಲೇ ರೆಡಿಯಾಗಿದ್ದೇನೆ. ರಾಮುಲು ಮನೆ ನಮ್ಮ ಮನೆ. ನನ್ನ ಮನೆ ಅವ್ರದ್ದು ಅಂತಾ ಹೇಳಿವ ಮೂಲಕ ಮುನಿಸು ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ರು‌. ಜಗತ್ತೇ ಬೇರೆಯಾದ್ರೆ. ನಾನು ಶ್ರೀರಾಮುಲು ಬೇರೆ. ರಾಜಕೀಯಕ್ಕೂ ಮೀರಿದ ಪ್ರೀತಿ. ಕುಟುಂಬ ಇದ್ದಂತೆ ಇದ್ದೇವೆ ಅಂದ್ರು. ಮೊಮ್ಮಗಳ ಕಾರ್ಯಕ್ರಮಕ್ಕೆ ರಾಮುಲು ಬರಲಿಲ್ಲವೇಕೆ ಅನ್ನೋ ಮಾಧ್ಯಮದ ಪ್ರಶ್ನೆಗೆ, ಯಡಿಯೂರಪ್ಪ ಬಂದ್ರೆ ಕರ್ನಾಟಕ ಬಿಜೆಪಿನೇ ಬಂದಂಗೆ ಅಂತಾ ಬಂದೇ ಮಾತಲ್ಲೇ ಹೇಳಿದ್ರು. 

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ಶೀಘ್ರ ಗೃಹಪ್ರವೇಶ

ಗದಗ ನಗರಕ್ಕೆ ರೆಡ್ಡಿ ಭೇಟಿ ಹಲವು ಚರ್ಚೆಗೆ ಕಾರಣವಾಗಿದೆ. ಒಂದ್ಕಡೆ ರಾಮುಲು ಅನುಪಸ್ಥಿತಿಯಲ್ಲಿ ಮನೆಗೆ ಬಂದು ನನ್ನ ರಾಮುಲು ಮಧ್ಯೆ ಏನು ಸಮಸ್ಯೆ ಇಲ್ಲ ಅನ್ನೋದನ್ನ ಸಾರಿ ಹೇಳಿದ್ರೆ, ಮತ್ತೊಂದ್ಕಡೆ ಬಳ್ಳಾರಿಗೆ ಗದಗ ಸಮೀಪ ಇದೆ ಅನ್ನೋ ಮೂಲಕ ಇಲ್ಲಿ ಸ್ಪರ್ಧಿಸುವ ಸೂಚನೆಯನ್ನೇನಾದ್ರೂ ಅನ್ನೋ ಚರ್ಚೆಯನ್ನೂ ಹುಟ್ಟು ಹಾಕಿದೆ.