Asianet Suvarna News Asianet Suvarna News

ಭೋವಿ ನಿಗಮದ ಅವ್ಯವಹಾರ ತನಿಖೆಯಾಗಲಿ: ಮತ್ತೊಂದು ಆಡಿಯೋ ಹರಿಬಿಟ್ಟ ಗೂಳಿಹಟ್ಟಿ ಶೇಖರ್‌

ಭೋವಿ ನಿಗಮದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಆಡಿಯೋವೊಂದನ್ನು ಹರಿಬಿಟ್ಟಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಅದೇ ಹಗರಣಕ್ಕೆ ಸಂಬಂದಿಸಿದಂತೆ ಶನಿವಾರ ಮತ್ತೊಂದು ಆಡಿಯೋ ಹರಿ ಬಿಟ್ಟಿದ್ದಾರೆ. 

Investigate Bhovi Corporation scam Goolihatti Shekhar leaks another audio gvd
Author
First Published Jun 10, 2024, 4:31 AM IST | Last Updated Jun 10, 2024, 4:31 AM IST

ಹೊಸದುರ್ಗ (ಜೂ.10): ಭೋವಿ ನಿಗಮದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಆಡಿಯೋವೊಂದನ್ನು ಹರಿಬಿಟ್ಟಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಅದೇ ಹಗರಣಕ್ಕೆ ಸಂಬಂದಿಸಿದಂತೆ ಶನಿವಾರ ಮತ್ತೊಂದು ಆಡಿಯೋ ಹರಿ ಬಿಟ್ಟಿದ್ದಾರೆ. ತಮ್ಮ ಸಮುದಾಯದ ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಹೇಳಿಕೆ ನೀಡಿರುವ ಅವರು, ನಾನು ಯಾರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿಲ್ಲ. ನಿಗಮದಲ್ಲಿ ಭೋವಿ ಸಮುದಾಯದ ಜನರಿಗೆ ಆಗಿರುವ ಅನ್ಯಾಯ ತಿಳಿಸುವ ಕೆಲಸ ಮಾಡಿದ್ದೇನೆ. ನನ್ನ ಬಗ್ಗೆ ನಮ್ಮ ಸಮುದಾಯದ ಜನ ತಪ್ಪು ತಿಳಿಯುವುದು ಬೇಡ. ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ತಿಳಿಸಿದ್ದಾರೆ.

ತನಿಖೆ ಮಾಡಿ: ಭೋವಿ ನಿಗಮಕ್ಕೆ 2018-19ರಲ್ಲಿ ₹127 ಕೋಟಿ, 2019-20ರಲ್ಲಿ ₹119 ಕೋಟಿ, 2020 -21ನೇ ಸಾಲಿನಲ್ಲಿ ₹106 ಕೋಟಿ, 2021-22ರಲ್ಲಿ ₹40 ಕೋಟಿ, 2022-23ರಲ್ಲಿ ₹107 ಕೋಟಿ ಒಟ್ಟು ₹499 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಇದು ಕೇವಲ ಭೋವಿ ನಿಗಮದ ಸ್ಯಾಂಪಲ್‌ ಅಷ್ಟೇ ಎಂದಿರುವ ಅವರು, 2018-19ರಲ್ಲಿ ನೀಡಲಾಗಿರುವ 127 ಕೋಟಿ ಹಣವನ್ನು ಯುವಕರಿಗೆ, ಮಹಿಳೆಯರಿಗೆ, ವಾಹನ ಸಾಲ, ಗಂಗಾ ಕಲ್ಯಾಣ, ಭೂ ಒಡೆತನ ಯೋಜನೆ ಹೀಗೆ ಎಲ್ಲಾ ಯೋಜನೆಗಳಿಗೂ ಹಣ ನೀಡಬೇಕೆಂಬ ಗೈಡ್‌ ಲೈನ್‌ ನೀಡಲಾಗಿದೆ. 

ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ: ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ

ಆದರೆ ಇದ್ಯಾವುದಕ್ಕೂ ಲೆಕ್ಕವಿಲ್ಲ. ಅಲ್ಲದೆ ಸರಿಯಾದ ಕ್ರಿಯಾಯೋಜನೆಗಳಿಲ್ಲ. ಮುಖ್ಯಮಂತ್ರಿ, ಇಲಾಖಾ ಮಂತ್ರಿ, ನಿಗಮದ ಅಧ್ಯಕ್ಷರ ವಿವೇಚನಾ ಕೋಟಾದಲ್ಲಿ ಈ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ. ಇದೆ ರೀತಿ ಪ್ರತಿ ವರ್ಷವೂ ನಡೆದಿದ್ದು ಯಾರ ಅವಧಿಯಲ್ಲಿ ದುರ್ಬಳಕೆ ಆಗಿದೆ ಎಂದು ಪತ್ತೆ ಹಚ್ಚಬೇಕು. ಈ ಬಗ್ಗೆ ಸರಿಯಾದ ತನಿಖೆ ಮಾಡುವಂತೆ ಸರ್ಕಾರವನ್ನು ಕೇಳಿರುವುದಾಗಿ ತಿಳಿಸಿದ್ದಾರೆ.

ಯಾರ ಮೇಲೂ ಅಪಾದನೆ ಮಾಡಿಲ್ಲ: ನಾನು ಯಾರ ಮೇಲೂ ಆಪಾದನೆ ಮಾಡಿಲ್ಲ, ಆದರೆ ಪರಿಶೀಲನೆ ಮಾಡಿ ಎಂದಿದ್ದೇನೆ. 2020-21ರಲ್ಲಿ ಹೊರ ಗುತ್ತಿಗೆ ನೌಕರಿಗೆ ₹1.94 ಕೋಟಿ ಅನಿಕಾ ಎಂಟರ್ ಪ್ರೈಸಸ್‌ಗೆ ಹಣ ಹೋಗಿದೆ. ಯಾಕೆ ಹಣ ಕೊಟ್ಟಿದ್ದಾರೆ? ಎಲ್ಲಿಗೆ ಹಣ ಹೋಗಿದೆ? ಕೊವೀಡ್ ವೇಳೆ ₹1.78ಕೋಟಿ ಹಣ ಸಾಯಿ ಥೆರಪಿಸ್ಟ್ ಸಂಸ್ಥೆಗೆ ಹಾಕಿದ್ದಾರೆ. ಈ ಸಂಸ್ಥೆ ಯಾರದ್ದು? ಯಾಕೆ ಹಾಕಿದ್ದಾರೆ? ಭೋವಿ ನಿಗಮಕ್ಕೂ ಸಾಯಿ ಥೆರಪಿಸ್ಟ್‌ಗೂ ಏನು ಸಂಬಂಧ? ಬೆಡ್ ಖರೀದಿಗೆ ₹1.78 ಕೋಟಿ ಹಣ ಎಂದು ತೋರಿಸಿದ್ದಾರೆ. 

₹1.78 ಕೋಟಿ ಹಣ ಎಲ್ಲಿ ಹೋಯ್ತು, ಬೆಡ್‌ಗೂ ನಮ್ಮ ಸಮಾಜಕ್ಕೂ ಏನು ಸಂಬಂಧ, ಸಾಂಸ್ಥಿಕ ಕೋಟಾದಡಿಯಲ್ಲಿ ಎಷ್ಟೇಷ್ಟು ಹಣ ಖರ್ಚು ಮಾಡಲಾಗಿದೆ? ಹೈಸ್ಕೂಲ್ ಶಿಕ್ಷಕರಿಗೆ ಶಾಲಾ ಅವಧಿ ಮುಗಿದ ಬಳಿಕ ಜಿಲ್ಲಾ ವ್ಯವಸ್ಥಾಪಕರಾಗಿ ಕೆಲಸ ಮಾಡಬೇಕು. ಎಂಜಿನಿಯರ್ ಅವರನ್ನು ಭೋವಿ ನಿಗಮಕ್ಕೆ ಹಾಕಿದ್ದಾರೆ. ಒಂದೇ ಒಂದು ಪೇಪರ್‌ನಲ್ಲಿ ದಾಖಲೆಗಳಿಲ್ಲ. ಬೊಮ್ಮಾಯಿ ಸಾಹೇಬ್ರು ಇದನ್ನ ತನಿಖೆಗೆ ಕೊಟ್ಟಿದ್ದಾರೆ ಅವರಿಗೆ ಧನ್ಯವಾದಗಳು. ಇದರ ಬಗ್ಗೆ ನಾನು ಮಾಹಿತಿ ಕೇಳುತ್ತಿದ್ದೇನೆ ಎಂದಿದ್ದಾರೆ.

ನಾನು ನಿಗಮದ ಅಧ್ಯಕ್ಷನಾದ ಬಳಿಕ ಹಣ ವಾಪಸ್ ಕಟ್ಟಲು ಸೂಚಿಸಿದ್ದೆ. ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರಿಗೆ ಮನವಿ ಪತ್ರ ಕೊಟ್ಟಿದ್ದೇನೆ. ₹1.78 ಕೋಟಿ ಬೆಡ್‌ಗೆ ನಿಗಮದ ಹಣ ಖರ್ಚಾಗಿದೆ. ಎಲ್ಲಾ ನಿಗಮಗಳದ್ದು ಕೂಡಾ ಇದೇ ಕಥೆಯಾಗಿದೆ. ಮಂತ್ರಿಗಳು ಸೇರಿ ನಾನು ಯಾರ ಮೇಲೆಯೂ ಕೂಡಾ ಆಪಾದನೆ ಮಾಡಿಲ್ಲ. ಕೋಟಾ ಶ್ರೀನಿವಾಸ್ ಪೂಜಾರಿ ಬಗ್ಗೆ ಕೂಡಾ ಗೌರವ ಇದೆ. ಹೆಚ್ಚುವರಿ ಹಣ ಸಿಎಂರನ್ನ ಕೇಳಿದ್ರೆ ಕೊಡ್ತಾ ಇದ್ರು, ಆದರೆ ವಿವೇಚನಾ ಕೋಟಾ ದುರ್ಬಳಕೆ ಆಗಿದೆ. 

ಮಂಡ್ಯ ಸೋಲಿಗೆ ಪಕ್ಷ ಕೇಳಿದರೆ ರಾಜೀನಾಮೆ ನೀಡುವೆ: ಸಚಿವ ಚಲುವರಾಯಸ್ವಾಮಿ

ಕಲಬುರಗಿ, ರಾಯಚೂರಿಗೆ ತಲಾ ₹20 ಕೋಟಿ ಹಣ ನೀಡಿದ್ದಾರೆ. ವಿವೇಚನಾ ಕೋಟಾ ಎಂದು ಹಣ ಬಿಡುಗಡೆ ಮಾಡಿದ್ದಾರೆ. ಫಲಾನುಭವಿಗಳ ಹಣ ಕೂಡಾ ಇವರೇ ಡ್ರಾ ಮಾಡಿದ್ದಾರೆ. ರೇಷನ್ ಅಂಗಡಿ ಎಂದು ಮಾಲೀಕನಿಗೆ ₹10 ಲಕ್ಷ ಹಾಕಿ. ₹25 ಸಾವಿರ ಮಾಲೀಕನಿಗೆ ಕೊಟ್ಟು, ಉಳಿದ ಎಲ್ಲ ಹಣ ವಾಪಸ್ ಹಾಕಿಸಿಕೊಂಡಿದ್ದಾರೆ. ಇದೆಲ್ಲವನ್ನ ಸರ್ಕಾರ ಕೂಡಲೇ ತನಿಖೆ ಮಾಡಬೇಕು ಎಂದು ಅವರು ಆಡಿಯೋದಲ್ಲಿ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios