Asianet Suvarna News Asianet Suvarna News

ಶಿವಮೊಗ್ಗ ಏರ್‌ಪೋರ್ಟ್‌ ವೆಚ್ಚದಲ್ಲಿ ಅಕ್ರಮ ನಡೆದಿದ್ದರೆ ಕ್ರಮ: ಎಂ.ಬಿ.ಪಾಟೀಲ್‌

ಶಿವಮೊಗ್ಗ ವಿಮಾನ ನಿಲ್ದಾಣ ಹಾಗೂ ರನ್‌ ವೇ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ಹೆಚ್ಚಿಸುವಲ್ಲಿ ಅವ್ಯವಹಾರವಾಗಿದ್ದಲ್ಲಿ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ಭರವಸೆ ನೀಡಿದರು. 

If there has been any illegality in Shivamogga Airport expenditure action will be taken Says MB Patil gvd
Author
First Published Jul 12, 2023, 8:30 AM IST

ವಿಧಾನ ಪರಿಷತ್‌ (ಜು.12): ಶಿವಮೊಗ್ಗ ವಿಮಾನ ನಿಲ್ದಾಣ ಹಾಗೂ ರನ್‌ ವೇ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ಹೆಚ್ಚಿಸುವಲ್ಲಿ ಅವ್ಯವಹಾರವಾಗಿದ್ದಲ್ಲಿ ಪರಿಶೀಲಿಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಭರವಸೆ ನೀಡಿದರು. ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಿಲ್ದಾಣದ ಆರಂಭಿಕ ಅಂದಾಜು ಮೊತ್ತ 220 ಕೋಟಿ ರು.ಗಳಾಗಿದ್ದು, ಎರಡು ಬಾರಿ ಅಂದಾಜು ಮೊತ್ತ ಪರಿಷ್ಕರಿಸಲಾಗಿದೆ. ಪ್ರಸ್ತುತ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ 449.22 ಕೋಟಿ ರು.ಗಳಾಗಿದೆ ಎಂದರು. 

ಮೊದಲು ರನ್‌ ವೇ ನಿರ್ಮಾಣ ಕಾಮಗಾರಿಯನ್ನು ಎಟಿಆರ್‌-72 ಮಾದರಿ ವಿಮಾನಗಳ ಹಾರಾಟಕ್ಕೆ ಅನುವಾಗುವ ರೀತಿಯಲ್ಲಿ ನಿರ್ಮಿಸಲು ಗುತ್ತಿಗೆ ನೀಡಲಾಗಿತ್ತು. ಈ ಕಾಮಗಾರಿ ಪ್ರಗತಿಯಲ್ಲಿರುವಾಗ ಎಟಿಆರ್‌-72 ಬದಲಾಗಿ ಏರ್‌ಬಸ್‌-320 ಮಾದರಿ ಅನುವಾಗುವಂತೆ ನಿರ್ಮಿಸಲು ನಿರ್ಧರಿಸಿದ ಕಾರಣ ಅಂದಾಜು ವೆಚ್ಚ ಹೆಚ್ಚಳವಾಗಿದೆ ಎಂದರು. ಹಳೆ ಮತ್ತು ಹೊಸ ರನ್‌ವೇ ಕಾಮಗಾರಿ ಒಂದೇ ಆಗಿದ್ದು, ಈವರೆಗೆ 247.98 ಕೋಟಿ ರು. ವೆಚ್ಚ ಮಾಡಲಾಗಿದೆ. ಸುಮಾರು 21.85 ಕೋಟಿ ರು. ಪಾವತಿಸುವುದು ಬಾಕಿ ಇದೆ ಎಂದು ಸಚಿವರು ವಿವರಿಸಿದರು. ವಿಮಾನ ನಿಲ್ದಾಣದ ಯೋಜನಾ ಪ್ರದೇಶದ ಒಳಗಡೆ ಲಭ್ಯವಾದ ಭಾರಿ ಗಾತ್ರದ ಶಿಲೆ ಕಲ್ಲು, ಬಂಡೆಗಳನ್ನು ವಿಮಾನ ನಿಲ್ದಾಣದ ಕಾಮಗಾರಿಗೆ ಬಳಸಿಕೊಳ್ಳಲಾಗಿದೆ. ಈ ಗಟ್ಟಿಕಲ್ಲು ಅಗೆತಕ್ಕೆ ಮಾತ್ರ ವೆಚ್ಚ ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದರು.

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಪಘಾತ ಹೆಚ್ಚಳ: ಸಚಿವ ಪರಮೇಶ್ವರ್‌ ಕಳವಳ

ಜೈನ ಮುನಿ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಹಿರೇಕೋಡಿ ಜೈನ ಮುನಿ ಕೊಲೆ ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಆ ದಿಸೆಯಲ್ಲಿ ಸರ್ಕಾರ ಹಾಗೂ ಗೃಹ ಸಚಿವರು ಕ್ರಮ ಕೈಗೊಳ್ಳಲಿದ್ದು, ನಮ್ಮ ಸರ್ಕಾರ ಇಂತಹ ಕೃತ್ಯಗಳಿಗೆ ಆಸ್ಪದ ಕೊಡುವುದಿಲ್ಲ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಮೇಲೆ ನಂಬಿಕೆ ಇಲ್ಲ. ಪೊಲೀಸರ ಮೇಲೆ ಸರ್ಕಾರದಿಂದ ಒತ್ತಡ ಹಾಕಲಾಗುತ್ತಿದೆ ಎಂಬ ಶಾಸಕ ಅಭಯ ಪಾಟೀಲ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸಕ ಅಭಯ ಪಾಟೀಲರು ಈ ರೀತಿ ಯಾವುದನ್ನೋ ಯಾವುದಕ್ಕೋ ಹೋಲಿಸಬಾರದು ಎಂದರು.

ಇದರಲ್ಲಿ ಕಾಂಗ್ರೆಸ್‌ ಪಾತ್ರ ಏನಿದೆ?, ಶಾಸಕ ಲಕ್ಷ್ಮಣ ಸವದಿ ಕೂಡ ಅಲ್ಲಿಗೆ ಭೇಟಿ ನೀಡಿದ್ದಾರೆ. ಇಂತಹ ಕೃತ್ಯ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ. ಆದ್ದರಿಂದ ಅಭಯ ಪಾಟೀಲ ಇದರಲ್ಲಿ ರಾಜಕೀಯ ಬೆರೆಸಬಾರದು. ಬೇರೆ ಬೇರೆ ಸರ್ಕಾರಗಳಿದ್ದಾಗ ಇಂತಹ ಘಟನೆಯಾಗಿವೆ. ಇವು ಹೇಯ ಕೃತ್ಯ ಇಂತಹ ಆರೋಪಿಗಳನ್ನು ಕ್ಷಮಿಸಬಾರದು ಎಂದರು.

ಕೃಷ್ಣಾ ತೀರದ ಜನರಿಗೆ ಬಜೆಟ್‌ನಲ್ಲಿ ಅನ್ಯಾಯವಾಗಿದೆ ನಿರಾಣಿ ಆರೋಪ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರೇನೂ ಮಾಡಿದ್ದಾರೆ ಎಂದು ಹೇಳಲಿ. ಕೃಷ್ಣ ಮೇಲ್ದಂಡೆ ಯೋಜನೆಯಡಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಧನ ಮೀಸಲಿಟ್ಟಿದ್ದರು ಎನ್ನುತ್ತಾರೆ. ಆದರೆ, ಎಷ್ಟುಖರ್ಚು ಮಾಡಿರಿ, ಇಬ್ಬರಿಗಷ್ಟೇ ಕೊಟ್ಟಿದ್ದಾರೆ ಅವರಿಗೂ ಇನ್ನೂ ಹಣ ಮುಟ್ಟಿಲ್ಲ. 5 ಸಾವಿರ ಕೋಟಿಯಲ್ಲ ಐದು ಪೈಸೆನೂ ಕೊಟ್ಟಿಲ್ಲ ರಾಜಕೀಯ ಮಾಡಲು ನನ್ನ ಕ್ಷೇತ್ರಕ್ಕೆ ಬಂದು ಕಾರ್ಯಕ್ರಮ ಮಾಡಿದ್ದಾರೆ. ಆದರೆ, ಒಂದು ರುಪಾಯಿನೂ ಅವರು ಕೊಟ್ಟಿಲ್ಲ ಸಾಂಕೇತಿಕವಾಗಿ ಇಬ್ಬರಿಗೆ ಕೊಡುವ ಮೂಲಕ ಸುಮ್ಮನೇ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ದೂರಿದರು.

ಜೈನಮುನಿ ಹತ್ಯೆ ಕೇಸ್‌: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ, ರಾಜ್ಯ ಸರ್ಕಾರ ನಕಾರ

ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಬಜೆಟ್‌ಗಿಂತ .4,000 ರಿಂದ ​.5,000 ಕೋಟಿ ಹೆಚ್ಚುವರಿ ಟೆಂಡರ್‌ ಕರೆದಿದ್ದಾರೆ. ನೀರಾವರಿ ಇಲಾಖೆಯಲ್ಲಿ .10ರಿಂದ ​15 ಸಾವಿರ ಕೋಟಿ ಹೆಚ್ಚುವರಿ ಟೆಂಡರ್‌ ಮಾಡಿದ್ದಾರೆ. ಇದೆಲ್ಲವೂ ಯಾಕೇ ಅನ್ನೋದು ಚೆನ್ನಾಗಿ ಗೊತ್ತಿದೆ ಎಂದು ಟಾಂಗ್‌ ನೀಡಿದರು. ಬಜೆಟ್‌ನಲ್ಲಿ ನೀರಾವರಿಗೆ ಅನುದಾನದ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳಿಗೆ .32 ಸಾವಿರ ಕೋಟಿ ಕೊಟ್ಟಿದ್ದೇವೆ. ಇದರೊಂದಿಗೆ ಹೊಸ ಯೋಜನೆ ಘೋಷಿಸಿದ್ದೇವೆ. ಬರುವ 8ರಿಂದ ​9 ತಿಂಗಳಲ್ಲಿ ಹೊಸ ಬಜೆಟ್‌ ಬರುತ್ತದೆ. ಆಗ ಹೆಚ್ಚಿನ ಯೋಜನೆಗಳಿಗೆ ಹಣ ಮೀಸಲಿಡುತ್ತೇವೆ ಎಂದರು.

Follow Us:
Download App:
  • android
  • ios