ಜೆಡಿಎಸ್‌ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ, ನೀರಾವರಿ ಯೋಜನೆಗಳಗೆ ಹೆಚ್ಚು ಮಹತ್ವ ಕೊಡಲಾಗುವುದು ಎಂದ ಕುಮಾರಸ್ವಾಮಿ

ಚಿಂಚೋಳಿ(ಸೆ.22): ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ಗೆ ಬೆಂಬಲ ನೀಡಿ ನಮಗೊಂದು ಅವಕಾಶ ನೀಡಿ. ನಿಮ್ಮ ತೆರಿಗೆ ಹಣದಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತೇನೆ. ನಿಮ್ಮ ನಿರೀಕ್ಷೆಯಂತೆ ಕೆಲಸ ಮಾಡದಿದ್ದರೆ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರ ಹತ್ತಿರ ಬುಧವಾರ ನಡೆದ ತಾಲೂಕು ಜೆಡಿಎಸ್‌ ಬೃಹತ್‌ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜೆಡಿಎಸ್‌ ಜನತಾ ಜಲಧಾರೆ ನಾಡಿನ 30 ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ತೆಲಂಗಾಣ ರಾಜ್ಯದ ಕಾಳೇಶ್ವರದಲ್ಲಿ ಆಣೆಕಟ್ಟು 120 ಕೋಟಿಗಳಲ್ಲಿ ನಿರ್ಮಿಸಿ 23 ಜಿಲ್ಲೆಗಳಲ್ಲಿ ನದಿಯ ನೀರಿನ ಬಳಕೆ ಆಗುತ್ತಿದೆ. ಅದೇ ಮಾದರಿಯಲ್ಲಿ ನೀರಾವರಿ ಸೌಲಭ್ಯವನ್ನು ನೀಡಲಾಗುವುದು. ಜೆಡಿಎಸ್‌ ಪಂಚರತ್ನ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಆರೋಗ್ಯ, ಶಿಕ್ಷಣ, ವಸತಿ, ಉದ್ಯೋಗ, ನೀರಾವರಿ ಯೋಜನೆಗಳಗೆ ಹೆಚ್ಚು ಮಹತ್ವ ಕೊಡಲಾಗುವುದು ಎಂದರು.

ರಾಜ್ಯದ 6 ಸಾವಿರ ಗ್ರಾಪಂ ಕೇಂದ್ರದಲ್ಲಿ ಯುಕೆಜಿಯಿಂದ ಪಿಯುಸಿ ವರೆಗೆ ಕಾಲೇಜು ಪ್ರಾರಂಭಿಸುವುದು. ಅಲ್ಲದೇ 30 ಹಾಸಿಗೆವುಳ್ಳ ಆಸ್ಪತ್ರೆ ಪ್ರಾರಂಭಿಸಿ 4 ಜನ ವೈದ್ಯರನ್ನು ನೇಮಿಸುವುದು. ರೈತರ ಜಮೀನುಗಳಿಗೆ ನೀರು ಒದಗಿಸಿ ಕೊಡುವುದು. ಅಲ್ಲದೇ ರೈತರ ಸಾಲವನ್ನು ಮಾಡಲಾಗುವುದು ಎಂದು ಹೇಳಿದರು.

ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ರಾಜ್ಯ ರಾಜಕಾರಣದಲ್ಲಿ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಮಳೆ ಪ್ರವಾಹ, ಜಲಾವೃತದಿಂದ ಮನೆ ಕಳೆದುಕೊಂಡವರಿಗೆ ಬಿಜೆಪಿ ಸರಕಾರ ಇನ್ನುವರೆಗೆ ಪರಿಹಾರ ಬಿಡುಗಡೆಗೊಳಿಸಿಲ್ಲ. ನಮ್ಮ ಅ​ಧಿಕಾರದಲ್ಲಿ ಒಂದು ಸಾವಿರ ಮನೆಗಳಿಗೆ 9.85ಲಕ್ಷ ರು. ಪರಿಹಾರ ಕೊಡಲಾಗಿದೆ. ರೈತರಿಗೆ ಹೊರೆ ಆಗದಂತೆ ಕೆಲವು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಜನರ ತೆರಿಗೆ ಹಣವನ್ನು ಚುನಾವಣೆಯಲ್ಲಿ ನೀಡುತ್ತಾರೆ ಹಣಕ್ಕಾಗಿ ಮಾರು ಹೋಗಬಾರದು ಎಂದು ಮಾಜಿ ಸಿ.ಎಂ. ಎಚ್‌.ಡಿ.ಕುಮಾರ ಸ್ವಾಮಿ ಹೇಳಿದರು.

ಕಲ್ಯಾಣ ಕರ್ನಾಟಕವೆಂದು ವಿಧಾನಸೌಧದಲ್ಲಿ ಕುಳಿತುಕೊಂಡು ಹೊಸ ಹೆಸರು ನಾಮಕರಣಗೊಳಿಸಿದರೆ ಸಾಲದು. ಲೂಟಿ ಮಾಡಿದ ಹಣದಿಂದ ಚುನಾವಣೆಯಲ್ಲಿ ಖರ್ಚು ಮಾಡುತ್ತಾರೆ. ಚಿಂಚೋಳಿ ತಾಲೂಕಿನಲ್ಲಿ ಬೆಟ್ಟಿಂಗ್‌, ಮೀಟರ್‌ ಬಡ್ಡಿ, ಮಟಕಾ ದಂಧೆ ನಡೆಯುತ್ತಿವೆ ಇದಕ್ಕೆ ಕಡಿವಾನ ಹಾಕಲಾಗುವುದು ಎಂದರು.

ದೇಶದಲ್ಲಿ ಪೆಟ್ರೋಲ್‌, ಡಿಸೇಲ ಬೆಲೆ ಗಗನಕ್ಕೇರಿವೆ ಈ ಮೊದಲು ಬಿಜೆಪಿ ಸಚಿವೆ ಸೃತಿ ಇರಾನಿಯವರು ಈರುಳ್ಳಿ ಕೊರಳಿನಲ್ಲಿ ಹಾಕಿಕೊಂಡು ಪ್ರತಿಭಟನೆ ನಡೆಸಿದ್ದರು. ಇಗ ಏನು ಮಾಡುತ್ತಿದ್ದಾರೆ ಎಂದು ಟೀಕಿಸಿದರು ಸಂಜೀವನ್‌ ಯಾಕಾಪೂರ ಮಾತನಾಡಿ, ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ, ಬೆಣ್ಣತೊರೆ ಜಲಾಶಯ, ಗಂಡೋರಿನಾಲಾ, ಚಂದ್ರಂಪಳ್ಳಿ ನೀರಾವರಿ ಯೋಜನೆಗಳಿಂದ ರೈತರ ಜಮೀನುಗಳಿಗೆ ನೀರು ಹರಿಯುತ್ತಿಲ್ಲ. ಜೆಡಿಎಸ್‌ ಅಧಿ​ಕಾರಕ್ಕೆ ಬಂದರೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸಬೇಕೆಂದು ಮನವಿ ಮಾಡಿದರು.

ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಮಾಜಿ ಸಚಿವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ಲಪೂಟ ಮಾಡಿವೆ. ಬಿಜೆಪಿ ಅಧಿ​ಕಾರದಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿವೆ. ಎಚ್‌.ಡಿ. ದೇವೇಗೌಡರು ದೇಶದ ಪ್ರಧಾನ ಮಂತ್ರಿಗಳಾಗಿದ್ದಾಗ 18 ಸಾವಿರ ಕೋಟಿ ರು. ನೀರಾವರಿ ಅನುದಾನ ನೀಡಿದರು. ಕೃಷ್ಣಕೊಳ್ಳದ ಆಲಮಟ್ಟಿಜಲಾಶಯವನ್ನು 124 ಮೀಟರ್‌ ಹೆಚ್ಚಿಸಿ ರೈತರಿಗೆ ನೆರವು ನೀಡಿದರು ಎಂದರು.

ರಾಹುಲ್‌ ಯಾಕಾಪೂರ, ತಾಲೂಕು ಜೆಡಿಎಸ್‌ ಅಧ್ಯಕ್ಷ ರವಿಶಂಕರರೆಡ್ಡಿ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ಸಾ.ರಾ.ಮಹೇಶ, ಬಾಲರಾಜ ಗುತ್ತೆದಾರ, ಶಿವಕುಮಾರ ನಾಟಿಕಾರ, ಗೌರಿಶಂಕರ ಸೂರವಾರ, ಕೃಷ್ಣಾರೆಡ್ಡಿ, ಮಹೇಶ್ವರಿ ವಾಲಿ, ನಾಸೀರ ಹುಸೇನ, ಹಣಮಂತ ಪೂಜಾರಿ, ರಮೇಶ ಪಾಟೀಲ, ಸುರೇಶ ಮಹಾಗಾಂವಕರ ಇನ್ನಿತರಿದ್ದರು.