ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನಮಗೆಲ್ಲ ಹರುಷ ಮೂಡಿಸಿದೆ ಎಂದು ಯಾದಗಿರಿ ನೂತನ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಹೇಳಿದರು. 

ಯಾದಗಿರಿ (ಮೇ.19): ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಅನ್ನೋದು ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ನಮ್ಮೆಲ್ಲ ಶಾಸಕರ ಒಲುವಾಗಿತ್ತು. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನಮಗೆಲ್ಲ ಹರುಷ ಮೂಡಿಸಿದೆ ಎಂದು ಯಾದಗಿರಿ ನೂತನ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಹೇಳಿದರು. ಬೆಂಗಳೂರಿನಲ್ಲಿ ಕಾಂಗ್ರೆಸ್‌ ಶಾಸಕರ ಸಭೆ ಹಿನ್ನೆಲೆಯಲ್ಲಿ, ಅಲ್ಲಿಗೆ ತೆರಳುವ ಮುನ್ನ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯ ಅವರತ್ತಲೇ ಬಹುತೇಕ ಶಾಸಕರ ಒಲವು ಕಂಡಿದೆ. 

ಹೈಕಮಾಂಡ್‌ ನಮ್ಮೆಲ್ಲರ ಅಭಿಪ್ರಾಯ ಕೇಳಿದಾಗ ಸಿದ್ದರಾಮಯ್ಯ ಪರ ಒಲವು ತೋರಿದ್ದೆವು. ನಮ್ಮ ಭಾಗದ ಜನ ಸಿದ್ದರಾಮಯ್ಯನವರು ಸಿಎಂ ಆಗಬೇಕು ಎಂದು ಇಷ್ಟಪಟ್ಟಿದ್ದರು. ಅದು ಈಡೇರಿರುವುದು ಸಂತಸ ಮೂಡಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರ, ಹೈಕಮಾಂಡ್‌ ತೀರ್ಮಾನಕ್ಕೆ ನಾವೆಲ್ಲ ತಲೆಬಾಗಿದ್ದೇವೆ ಎಂದರು. ಸಿಎಲ್‌ಪಿ (ಕಾಂಗ್ರೆಸ್‌ ಶಾಸಕಾಂಗ ಸಭೆ) ಇದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯನ್ನಾಗಿ ಹಾಗೂ ಡಿ. ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಹೈಕಮಾಂಡ್‌ ನಿರ್ಧರಿಸಿದೆ. ಮೇ 20, ಶನಿವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೈಕಮಾಂಡ್‌ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ, ಬದ್ಧರಾಗಿರಲೂ ಬೇಕು ಎಂದು ಅವರು ಪ್ರತಿಕ್ರಿಯಿಸಿದರು.

ರಾಮ​ನ​ಗ​ರ​ ಕ್ಷೇತ್ರ​ದಲ್ಲಿಯೇ ರಾಜ​ಕೀ​ಯ​ ಮರು ಜನ್ಮ: ನಿಖಿಲ್‌ ಕುಮಾ​ರ​ಸ್ವಾಮಿ

ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಈಶ್ವರ ಖಂಡ್ರೆ ಯೋಗ್ಯ: ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಈಶ್ವರ ಖಂಡ್ರೆ ಅವರು ಸೂಕ್ತರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕ ತುನ್ನೂರು, ಈ ಸರ್ಕಾರದಲ್ಲಿ ಲಿಂಗಾಯತರಿಗೆ ಯೋಗ್ಯ ಸ್ಥಾನ ಸಿಗುತ್ತದೆ, ಯಾವ ಸಮುದಾಯವನ್ನೂ ಸರ್ಕಾರ ನಿರ್ಲಕ್ಷಿಸುವುದಿಲ್ಲ ಎಂದರು. ಮೂರ್ನಾಲ್ಕು ಸ್ಥಾನಗಳಿಗೆ ಡಿಸಿಎಂ ಆಯ್ಕೆ ಆಗಬಹುದಾಗಿದ್ದು, ಇದರಲ್ಲಿ ಒಂದು ಲಿಂಗಾಯತರಿಗೆ ಸಿಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು, ಲಿಂಗಾಯತರಲ್ಲದೆ ಬೇರೆ ಜನಾಂಗದವರೂ ಹೆಚ್ಚಿಗೆ ಆರಿಸಿ ಬಂದಿದ್ದಾರೆ. ಇವತ್ತಲ್ಲ ನಾಳೆ, ಎಲ್ಲ ವರ್ಗಕ್ಕೂ ಅವಕಾಶ ಸಿಗಬಹುದು ಎಂದು ಅಭಿಮತ ವ್ಯಕ್ತಪಡಿಸಿದ ಶಾಸಕ ಚೆನ್ನಾರೆಡ್ಡಿ, ಈ ಐದು ವರ್ಷಗಳ ಅವಧಿಯಲ್ಲಿ ಲಿಂಗಾಯತರಿಗೂ ಸಿಎಂ ಸ್ಥಾನ ಸಿಗಬಹುದು, ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲ ಸಮಾಜದವರನ್ನೂ ತೆಗೆದುಕೊಂಡು ಹೋಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರೇಷ್ಮೆ​ನ​ಗರಿ ರಾಮನಗರ ಜಿಲ್ಲೆಗೆ ಮೊದಲ ಬಾರಿ ಡಿಸಿಎಂ ಹುದ್ದೆ!

ನಾನು ಸಚಿವ ಸ್ಥಾನಾಕಾಂಕ್ಷಿ ಅಲ್ಲ: ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ನಾನು ಸಚಿವಾಕಾಂಕ್ಷಿ ಅಲ್ಲ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ತುನ್ನೂರು ಅಭಿಪ್ರಾಯ ವ್ಯಕ್ತಪಡಿಸಿದರು. ಯಾದಗಿರಿಯಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತ, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ, ಯಾದಗಿರಿ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡುವುದೇ ನನ್ನ ಗುರಿ. ಈಗಾಗಲೇ ಈ ಸ್ಥಾನಕ್ಕೆ ಜಿಲ್ಲೆಯಲ್ಲಿ ಸೀನಿಯರ್‌ (ಹಿರಿಯರು) ಇದ್ದಾರೆ. ಜಿಲ್ಲೆಯ ಹಿರಿಯರಿಗೆ ಸಚಿವ ಸ್ಥಾನ ಸಿಗಲಿ ಅಂತನ್ನೋದು ನನ್ನ ಅಭಿಪ್ರಾಯ. ಸಚಿವ ಸ್ಥಾನ ಕುರಿತು ಹೈಕಮಾಂಡ್‌ ಕೇಳಿದರೆ ಹಿರಿಯರಿಗೆ ಕೊಡಿ ಅನ್ನುತ್ತೇನೆ ಎಂದ ಶಾಸಕ ತುನ್ನೂರು, ಯಾರಿಗೆ ಯಾವ ಕೋಟಾದಡಿ ನೀಡಬೇಕು ಅನ್ನೋದು ಹೈಕಮಾಂಡ್‌ ನಿರ್ಧಾರವಾಗಿರುತ್ತದೆ ಎಂದರು.