Asianet Suvarna News Asianet Suvarna News

ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ, ಸಮಯ ಬೇಕು: ಸಚಿವ ರಾಮಲಿಂಗಾರೆಡ್ಡಿ

ಕಾಂಗ್ರೆಸ್‌ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಿದ್ದು, ಅಲ್ಲಿಯವರೆಗೆ ಬಿಜೆಪಿ ಅವರು ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

Guarantee promises will be fulfilled time is needed Says Minister Ramalinga Reddy gvd
Author
First Published May 27, 2023, 1:34 PM IST

ಬೆಂಗಳೂರು (ಮೇ.27): ಕಾಂಗ್ರೆಸ್‌ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಿದ್ದು, ಅಲ್ಲಿಯವರೆಗೆ ಬಿಜೆಪಿ ಅವರು ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಿ ಎಂದು ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಜೂನ್‌ 1ರ ಒಳಗಾಗಿ ಗ್ಯಾರಂಟಿ ಜಾರಿಗೊಳಿಸದಿದ್ದರೆ, ಪ್ರತಿಭಟನೆ ನಡೆಸುವುದಾಗಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ನೀಡಿರುವ ಎಲ್ಲಾ ಗ್ಯಾರಂಟಿಗಳ ಬಗ್ಗೆ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಹಣ ಹಾಕಲು ಅವರ ಖಾತೆ ಸಂಖ್ಯೆ ಬೇಕು. ಖಾತೆ ಇಲ್ಲದವರು ಖಾತೆ ತೆರೆಯಬೇಕು. 

ಇದಕ್ಕೆಲ್ಲಾ ಸಮಯ ಬೇಕಾಗಲಿದೆ. ಅಲ್ಲಿಯವರೆಗೆ ಬಿಜೆಪಿ ಅವರು ತಮ್ಮ ಸೋಲಿನ ಬಗ್ಗೆ ಪರಾಮರ್ಶೆ ನಡೆಸಲಿ ಎಂದರು. ಬಿಜೆಪಿ ಅವರು ಸುಮ್ಮನೆ ಮಾತನಾಡುತ್ತಾರೆ. ಅವರ ಮಾತಿಗೆ ಕಿಮ್ಮತ್ತಿಲ್ಲ. ಬರೀ ಮಾತನಾಡುವವರನ್ನು ಜನ ಈ ಬಾರಿ ಮನೆಗೆ ಕಳುಹಿಸಿದ್ದಾರೆ. ಬಿಜೆಪಿ ನುಡಿದಂತೆ ನಡೆದ ಪಕ್ಷವಲ್ಲ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಡವರಿಗೆ ಏಳು ಕೇಜಿ ಅಕ್ಕಿ ನೀಡುತ್ತಿದ್ದನ್ನು ಮೂರು ಕೇಜಿಗೆ ಇಳಿಕೆ ಮಾಡಿದ್ದರು, ಈಗ ಮತ್ತೆ 10 ಕೇಜಿ ನೀಡುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಉಚಿತ ಯೋಜನೆಗಳನ್ನು ಕೊಡುವಲ್ಲಿ‌ ವಿಫಲ: ನೆಟ್ಟಾರು ಪತ್ನಿಗೆ ಮತ್ತೆ‌ ಉದ್ಯೋಗ ನೀಡಿ ಎಂದ ನಳಿನ್‌

ಮುಂದಿನ ಸಂಪುಟ ವೇಳೆಗೆ ಗ್ಯಾರಂಟಿ ಯೋಜನೆ ಜಾರಿ: ‘ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಹೊಟ್ಟೆಉರಿ ಶುರುವಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಸಂಪುಟದಲ್ಲೇ ಐದೂ ಗ್ಯಾರಂಟಿಗಳಿಗೂ ನಾವು ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಮುಂದಿನ ಸಂಪುಟದ ವೇಳೆಗೆ ಸ್ಪಷ್ಟವಾಗಿ ರೂಪುರೇಷೆ ಸಿದ್ಧಪಡಿಸಿ ಅನುಷ್ಠಾನ ಮಾಡುತ್ತೇವೆ. ಹೀಗಾಗಿ ಪ್ರತಿಪಕ್ಷಗಳ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬೇಕಿಲ್ಲ’ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

ಪ್ರತಿಪಕ್ಷಗಳ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಡಾ.ಜಿ. ಪರಮೇಶ್ವರ್‌, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಮೊದಲ ಸಂಪುಟದಲ್ಲೇ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡಿ ಅಂದು ರಾತ್ರಿಯೇ ಆದೇಶ ಹೊರಡಿಸಲಾಗಿದೆ. ಯೋಜನೆಗಳು ವಿವಿಧ ಇಲಾಖೆಗಳ ಅಡಿಗೆ ಬರುವುದರಿಂದ ರೂಪುರೇಷೆ ಹಾಗೂ ನಿಯಮಾವಳಿ ರೂಪಿಸಲು ಕೆಲ ಸಮಯ ಹಿಡಿಯುತ್ತದೆ. ಎರಡನೇ ಸಂಪುಟದಲ್ಲಿ ಸ್ಪಷ್ಟವಾಗಿ ಅನುಷ್ಠಾನ ಘೋಷಣೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ನಿರೀಕ್ಷೆ ಹೆಚ್ಚಿದೆ. ಪಕ್ಷ ಹಾಗೂ ಸರ್ಕಾರಕ್ಕೆ ಸಿಗುತ್ತಿರುವ ಪ್ರಾಮುಖ್ಯತೆಯಿಂದ ಪ್ರತಿಪಕ್ಷಗಳಿಗೆ ಹೊಟ್ಟೆಉರಿ ಶುರುವಾಗಿದೆ. ಹೀಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹೀಗಾಗಿ ಟೀಕೆಗಳಿಗೆ ಬೆಲೆ ನೀಡಬೇಕಾಗಿಲ್ಲ ಎಂದರು.

ಮೇಕೆದಾಟು ಪಾದಯಾತ್ರೆ: 8 ಕೇಸ್ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಡಿಕೆಶಿ

ಗ್ಯಾರಂಟಿ ಕಾರ್ಡ್‌ನ್ನೇ ನೀಡಿದ್ದೇವೆ: ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ ಎಂದು ಸಹಿ ಮಾಡಿ ಗ್ಯಾರಂಟಿ ಕಾರ್ಡ್‌ನ್ನೇ ನೀಡಿದ್ದೇವೆ. ಖಾತೆ ಹಂಚಿಕೆ ಬೇಗ ಮಾಡಿ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಲಿದ್ದಾರೆ. ಜೂನ್‌ನಿಂದ ಗ್ಯಾರಂಟಿ ಯೋಜನೆ ಜಾರಿ ಎಂದು ಹೇಳಿದ್ದೆವು. ಅದಕ್ಕೆ ಪೂರಕವಾಗಿರುವ ಎಲ್ಲಾ ಕೆಲಸಗಳೂ ನಡೆಯುತ್ತಿವೆ ಎಂದು ಹೇಳಿದರು.

Follow Us:
Download App:
  • android
  • ios