ನಾನು ಜೆಡಿಎಸ್ ನಲ್ಲಿ ಇರಬೇಕಾ, ಬೇಡವಾ? ಬಿಜೆಪಿಗೆ ಹೋಗಬೇಕಾ ಬೇಡವಾ? ಕಾಂಗ್ರೆಸ್ ಗೆ ಹೋಗ್ಬೇಕಾ ಬೇಡವಾ ಎಂದು ನನ್ನ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು.
ಮೈಸೂರು (ಜು.10): ನಾನು ಜೆಡಿಎಸ್ ನಲ್ಲಿ ಇರಬೇಕಾ, ಬೇಡವಾ? ಬಿಜೆಪಿಗೆ ಹೋಗಬೇಕಾ ಬೇಡವಾ? ಕಾಂಗ್ರೆಸ್ ಗೆ ಹೋಗ್ಬೇಕಾ ಬೇಡವಾ ಎಂದು ನನ್ನ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀನು ಬರದಿದ್ದರೆ ಸರ್ಕಾರ ಉಳಿಯಲ್ಲ ಬಾ ಅಂತ ಸಿದ್ದರಾಮಯ್ಯ ಆಗಲಿ, ಡಿ.ಕೆ. ಶಿವಕುಮಾರ್ ಆಗಲಿ ಕರೆದಿಲ್ಲ. ಚನ್ನಪಟ್ಟಣ ಬೈ ಎಲೆಕ್ಷನ್ ನಲ್ಲಿ ನನ್ನ ಯಾರೂ ಕರೆದಿಲ್ಲ. ಹಾಗಂತ ನಾನು ಯಾವ ಪಕ್ಷಕ್ಕೂ ಹೋಗಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೂ ಕರೆದಿಲ್ಲ ಎಂದು ಹೇಳಿದರು.
ಈ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿರೋರಿಗೆ ಗೊತ್ತಿರುತ್ತೆ. 25 ವರ್ಷ ಸಿದ್ದರಾಮಯ್ಯ ಜೊತೆ ಇದ್ದು. ಸಿದ್ದರಾಮಯ್ಯ ವಿಪಕ್ಷ ನಾಯಕರಾದಾಗ, ಸಿಎಂ ಆದಾಗ ಯಾವ ರೀತಿ ಕೆಲಸ ಮಾಡಿಕೊಂಡು ಬಂದಿದೀನಿ ಅನ್ನೋದು ಬೇರೆ ಶಾಸಕರಿಗೆ ಗೊತ್ತಿಲ್ಲ. ನಾನು ದೊಡ್ಡ ನಾಯಕನ ವಿರುದ್ಧ ಹೋರಾಟ ಮಾಡಿಕೊಂಡು ಬಂದಿರುವ ಕ್ಷೇತ್ರ ಇದು ಎಂದು ಅವರು ಕುಟುಕಿದರು. ನಿನ್ನೆ ಮೊನ್ನೆ ಬಂದ ಶಾಸಕರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನನ್ನ ಮುಂದೆ ನಿಲ್ಲುವ ಶಕ್ತಿ ಇಲ್ಲದವರು ಕೂಡ ಏನೇನೋ ಮಾತನಾಡುತ್ತಿದ್ದಾರೆ. ನಾನು ದೇವೇಗೌಡರ ಜೊತೆ ಬಾವುಟ ಕಟ್ಟಿ ಪಕ್ಷ ಕಟ್ಟಿದವನು. ಮುಂದೆ ಏನು ಮಾಡಬೇಕು ಅಂತ ಕ್ಷೇತ್ರದ ಜನತೆ ಹೇಳುತ್ತಾರೆ.
ಜನ ಜೆಡಿಎಸ್ ಅಲ್ಲಿ ಇರು ಅಂದರೆ ಇರ್ತೀನಿ. ಕಾಂಗ್ರೆಸ್ ಗೆ ಹೋಗಿ ಅಂದರೆ ಹೋಗುತ್ತೇನೆ. ಬಿಜೆಪಿಗೆ ಹೋಗು ಅಂದರೂ ಹೋಗುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದರು. ನಾನು ಜೆಡಿಎಸ್ ಶಾಸಕ. ಚುನಾವಣೆಯಲ್ಲಿ ಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಕ್ಷಾಂತರ ಮಾಡಿಲ್ಲ. ಈ ಹಿಂದೆ 20 ತಿಂಗಳು ಯಡಿಯೂರಪ್ಪಗೆ ಅಧಿಕಾರ ಕೊಡಲಿಲ್ಲ ಅಂತ ಬೆಂಬಲ ನೀಡಿದ್ದೆ. ಇನ್ನು ನಮ್ಮ ಅವಧಿ 3 ವರ್ಷ ಇದೆ. ನನಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಕೊಡಲಿಲ್ಲ ಅಂತ ಬೇಸರವಿದೆ. ಹಿರಿಯನಾಗಿದ್ದು ನನಗೆ ಅವಕಾಶ ಕೊಡಲಿಲ್ಲ.
ಸುರೇಶ್ ಬಾಬುಗೆ ಕುಮಾರಸ್ವಾಮಿ ಅಧಿಕಾರ ಕೊಟ್ಟರು. ಸದ್ಯ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಚಾಮುಂಡೇಶ್ವರಿಯಂತಹ ಕ್ಷೇತ್ರದಲ್ಲಿ ದೊಡ್ಡ ನಾಯಕನ ಮುಂದೆ ನಾನು ಹೋರಾಟ ಮಾಡಿ ಗೆದ್ದು ಬಂದಿದ್ದೇನೆ. ಸಿದ್ದರಾಮಯ್ಯ ಅಂತ ನಾಯಕರ ಮುಂದೆ ಗೆದ್ದಿದ್ದೇನೆ. ಅರ್ಧದಲ್ಲಿ ಜೆಡಿಎಸ್ ಬಿಟ್ಟು ಯಾವ ಪಕ್ಷಕ್ಕೂ ನಾನು ಹೋಗಲ್ಲ. ನಾನು ನನ್ನ ಜೀವನದಲ್ಲಿ ಭ್ರಷ್ಟಾಚಾರವನ್ನೂ ಮಾಡಿಲ್ಲ, ಪಕ್ಷಾಂತರವನ್ನೂ ಮಾಡಿಲ್ಲ. ನನ್ನನ್ನ ಪಕ್ಷಾಂತರಿ ಎಂದು ಹೇಳುವ ತಾಕತ್ತು ಯಾರಿಗೂ ಇಲ್ಲ. ಮುಂದೆ ನನ್ನ ಕ್ಷೇತ್ರದ ಜನ ಹೇಳಿದ ಹಾಗೆ ಮಾಡುತ್ತೇನೆ ಎಂದರು.
ಈಗ ಬಂದು ಪಕ್ಷ ಅಂತ ಮಾತನಾಡ್ತೀರಾ. ಸಿದ್ದರಾಮಯ್ಯ ಪಕ್ಷ ಬಿಟ್ಟೋದಾಗ ಯಾರು ಉಳಿದುಕೊಂಡಿದ್ದು. ನಾಯಕರು ಅಂತ ಈಗ ಮಾತನಾಡ್ತೀರಲ್ಲ. ನನ್ನ ಬಗ್ಗೆ ಮಾತನಾಡೋ ಯೋಗ್ಯತೆ ನಿಮಗಿದಿಯ ಎಂದು ಜಿ.ಟಿ. ದೇವೇಗೌಡರು ಪ್ರಶ್ನಿಸಿದರು. ನಿಖಿಲ್ ನಟ ಕೂಡ. 3 ಬಾರಿ ಚುನಾವಣೆ ಸೋತಿದ್ದಾನೆ. ಈಗ ಆತನಿಗೂ ರಾಜಕೀಯದ ಅನುಭವ ಇದೆ. ದೇವೇಗೌಡರು ಕಟ್ಟಿದ್ದ ಜನತಾದಳವನ್ನು ಸದೃಢವಾಗಿ ಮುಂದೆ ತೆಗೆದುಕೊಂಡು ಹೋಗುವ ಗಟ್ಟಿ ನಾಯಕತ್ವ ನಿಖಿಲ್ ಗೆ ಇದೆ. ನಾನು ಪಕ್ಷದ ಕಾರ್ಯಕ್ರಮದಿಂದ ದೂರವಿದ್ದೇನೆ. ಶಾಸಕನಾಗಿ ನನ್ನ ಕೆಲ್ಸ ಮಾತ್ರ ಮಾಡುತ್ತೇನೆ ಎಂದರು.
