ಕಡಿಮೆ ಕ್ಷೇತ್ರಗಳಲ್ಲಿ ಗೆದ್ದರೂ 'ಎಚ್.ಡಿ.ಕುಮಾರಸ್ವಾಮಿಯೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ' ಎಂದು ಭವಿಷ್ಯ ನುಡಿದಿದ್ದ ಕೊಪ್ಪ ತಾಲೂಕಿನ ಹರಿಪರಪುರ ಸಮೀಪದ ಗೌರಿಗದ್ದೆಯ ವಿನಯ್ ಗುರುಗಳು ಇದೀಗ 'ಕುಮಾರಸ್ವಾಮಿಯೇ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ,' ಎಂದು ಅಭಯ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಸುದ್ದಿ ವೈರಲ್ ಆಗಿದೆ.

ಬೆಂಗಳೂರು: 'ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ...' ಎಂದು ಭವಿಷ್ಯ ನುಡಿದಿದ್ದ ಕೊಪ್ಪ ಹರಿಹರಪುರ ಸಮೀಪದ ಗೌರಿಗದ್ದೆಯ ವಿನಯ್ ಗುರೂಜಿಯವರು ಇದೀಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಯಾವುದೇ ಅಪಾಯ ಇಲ್ಲ. ಯಾವ ದುಷ್ಟ ಶಕ್ತಿಯೂ ಅವರಿಗೆ ತೊಂದರೆ ನೀಡುವುದಿಲ್ಲವೆಂದು ಅಭಯ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಅತೃಪ್ತರನ್ನು ಸರಿ ದಾರಿಗೆ ತರಲು ಕೈ ಪಡೆ ಯತ್ನ

ಕಳೆದೆರಡು ತಿಂಗಳಿನಿಂದ ನಡೆಯುತ್ತಿರುವ ಸಮ್ಮಿಶ್ರ ಸರಕಾರದ ಹಗ್ಗ ಜಗ್ಗಾಟ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಅತೃಪ್ತ ಶಾಸಕರು ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದಾರೆ. ಒಂದೆಡೆ ಐವರು ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆನ್ನುವ ಮಾಹಿತಿ ಇದ್ದರೆ, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಕೆಲವು ಸಚಿವರೂ ರಾಜೀನಾಮೆ ನೀಡುತ್ತಾರೆಂದೂ ಹೇಳಲಾಗುತ್ತಿದೆ.

ತ್ರಿಮೂರ್ತಿ ವರ ಪಡೆದ ವಿನಯ್ ಗುರೂಜಿ ಶಕ್ತಿ ಏನು?

ಬಜೆಟ್ ಮಂಡನೆಗೂ ಮುನ್ನ ರಾಜ್ಯಪಾಲರು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ, ಮಾತನಾಡಲು ಪ್ರತಿಪಕ್ಷ ಬಿಜೆಪಿ ಅಡ್ಡಿಪಡಿಸಿತ್ತು. ಒಟ್ಟಿನಲ್ಲಿ ಸರಕಾರದ ಭವಿಷ್ಯವೇ ಅತಂತ್ರದಲ್ಲಿದ್ದು, ಇದೀಗ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಅಪಾರ ನಂಬಿಕೆ ಇಟ್ಟಿರುವ ವಿನಯ್ ಗುರೂಜಿ ಹೇಳಿಕೆ ಅವರಲ್ಲಿ ವಿಶ್ವಾಸ ಹೆಚ್ಚಿಸಿದೆ.

ಕುತೂಹಲ ಹುಟ್ಟಿಸಿದೆ ಶೋಭಾ-ಬಿಎಸ್‌ವೈ ವಿನಯ್ ಗುರೂಜಿ ಭೇಟಿ

ಗುರೂಜಿಯವರು ಸಮ್ಮಿಶ್ರ ಸರಕಾರದ ಸ್ಥಿರತೆ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎನ್ನುವ ಪೋಸ್ಟ್‌ವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇಂಥ ಹೇಳಿಕೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲವೆಂದು ಗುರೂಜಿ ಆಪ್ತರು ಸುವರ್ಣನ್ಯೂಸ್.ಕಾಮ್‌ಗೆ ಹೇಳಿದ್ದಾರೆ. ಆದರೆ, ಗುರೂಜಿ ಚೆನ್ನೈನಲ್ಲಿದ್ದು, ಈ ಹೇಳಿಕೆ ಎಲ್ಲಿ ನೀಡಿದ್ದಾರೆಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. 

ಭವಿಷ್ಯದಂತೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ದೇವೇಗೌಡರು ವಿನಯ್ ಗುರೂಜಿಯವರನ್ನು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ತಮ್ಮ ಮನೆಗೆ ಕರೆಯಿಸಿಕೊಂಡು, ಪತ್ನಿ ಚೆನ್ನಮ್ಮ ಅವರೊಂದಿಗೆ ಪಾದಪೂಜೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಅಪಾರ ದೈವ ಭಕ್ತರೂ ಆದ ಕುಮಾರಸ್ವಾಮಿಯವರು ಗುರೂಜಿಯವರ ಈ ಅಭಯದಿಂದಲೇ ಇಷ್ಟು ರಾಜಕೀಯ ಗೊಂದಲಗಳಿದ್ದರೂ ಶಾಂತರಾಗಿದ್ದಾರೆ, ಎಂದು ಹೇಳಲಾಗುತ್ತಿದೆ.