ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಚುನಾವಣೆಗೆ ಮೊದಲು ನನಗೂ ಫ್ರೀ, ನಿಮಗೂ ಫ್ರೀ ಎಂದು ತಿಳಿಸಿದ್ದೀರಿ, ಈಗೇಕೆ ಮಾನದಂಡನೆಗಳನ್ನು ಮತ್ತು ಷರತ್ತುಗಳನ್ನು ವಿಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದ ಮಾಜಿ ಸಚಿವ ಗೋವಿಂದ ಕಾರಜೋಳ

ಲೋಕಾಪುರ(ಮೇ.31): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದೇ ಷರತ್ತುಗಳಿಲ್ಲದೇ 5 ಗ್ಯಾರಂಟಿ ಯೋಜನೆಗಳನ್ನು ಈ ನಾಡಿನ 6.5 ಕೋಟಿ ಜನಕ್ಕೆ ನೀಡಬೇಕೆಂದು ಮಾಜಿ ಸಚಿವ ಗೋವಿಂದ ಕಾರಜೋಳ ಒತ್ತಾಯಿಸಿದರು.

ಸೋಮವಾರ ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮೊದಲು ಪ್ರಣಾಳಿಕೆಯಲ್ಲಿ ಯಾವುದೇ ಷರತ್ತುಗಳಿಲ್ಲದೇ ರಾಜ್ಯದ ಪ್ರತಿ ಕುಟುಂಬಕ್ಕೆ 200 ಯುನಿಟ್‌ ಉಚಿತ ವಿದ್ಯುತ್‌, ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯನಿಗೂ ತಿಂಗಳಿಗೆ ತಲಾ 10 ಕೆ.ಜೆ.ಅಕ್ಕಿ, ಪ್ರತಿ ಕುಟುಂಬದ ಯಜಮಾನಿಗೆ ತಿಂಗಳಿಗೆ .2 ಸಾವಿರ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ .3 ಸಾವಿರ, ನಿರುದ್ಯೋಗಿ ಡಿಪ್ಲೋದವರರಿಗೆ ತಿಂಗಳಿಗೆ .1500, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವುದಾಗಿ ಭರವಸೆ ನೀಡಿದೆ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಚುನಾವಣೆಗೆ ಮೊದಲು ನನಗೂ ಫ್ರೀ, ನಿಮಗೂ ಫ್ರೀ ಎಂದು ತಿಳಿಸಿದ್ದೀರಿ, ಈಗೇಕೆ ಮಾನದಂಡನೆಗಳನ್ನು ಮತ್ತು ಷರತ್ತುಗಳನ್ನು ವಿಧಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

"ನೀತಿ"ರಾಮಯ್ಯನ ಮುಂದೆ “ಪಂಚ ಪ್ರತಿಜ್ಞೆ” ಚಾಲೆಂಜ್..!

ಸಿಎಂ ಸಿದ್ದರಾಮಯ್ಯ ಅವರು ಜೂನ್‌ 1 ರಿಂದ ಚುನಾವಣೆಯಲ್ಲಿ ಕೊಟ್ಟಭರವಸೆಗಳನ್ನು ಅನುಷ್ಠಾನಗೊಳಿಸಲೇಬೇಕು ಇಲ್ಲದಿದ್ದರೆ, ಈ ನಾಡಿನ ಜನರಿಗೆ ಮೋಸ ಮಾಡಿರಿ ಎಂದು ಕ್ಷಮೆ ಕೇಳಬೇಕು. ನಿಮ್ಮ ಸಚಿವ ಸಂಪುಟದ ಸಹದ್ಯೋಗಿಗಳು ಬಾಯಿಗೆ ಬಂದ ಮಾತನಾಡುತ್ತಿದ್ದಾರೆ. ಹಾದಿ ಬೀದಿಗೆ ಜನಕ್ಕೆ ಗ್ಯಾರಂಟಿಗಳನ್ನು ಕೊಡಲು ಆಗುವುದಿಲ್ಲ ಅಂತಿದ್ದಾರೆ. ಹಾದಿ ಬೀದಿಗಳ ಜನರ ವೋಟು ತೆಗೆದುಕೊಂಡಿಲ್ಲವೇ? ನಾಲಿಗೆ ಒಂದು ಅದಾವೋ ಎರಡು ಅದಾವು ಎಂದು ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಗ್ಧಾಳಿ ನಡೆಸಿದರು.

ಮುಧೋಳ ನಗರಸಭೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಸರಕಾರ ಬಂದ್‌ ಮಾಡಿದೆ. ಅದಕ್ಕೆ ನಾನು ಖಂಡಿಸುತ್ತೇನೆ. ಸರಕಾರ ಕೂಡಲೇ ಎಲ್ಲ ಕಾಮಗಾರಿಗಳು ಮುಗಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಧೋಳ ಮತಕ್ಷೇತ್ರಕ್ಕೆ ಸಾವಿರಾರು ಕೋಟಿ ರು.ಗಳ ಅನುದಾನ ತಂದು ಮುಧೋಳ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದರು ಜನರು ಅಭಿವೃದ್ಧಿ ಕೆಲಸಕ್ಕೆ ಮತ್ತು ವ್ಯಕ್ತಿತ್ವಕ್ಕೆ ಮನ್ನಣಿ ನೀಡಲಿಲ್ಲ? ಎಂಬುದಕ್ಕೆ ಮುಧೋಳ ವಿಧಾನಸಭಾ ಕ್ಷೇತ್ರವೇ ಸಾಕ್ಷಿ ಎಂದು ತಿಳಿಸಿದರು. ಜನ ಅಭಿವೃದ್ಧಿ ಕೆಲಸಕ್ಕೆ ಮನ್ನಣಿ ನೀಡಲಿಲ್ಲ, ಸರಕಾರದ 5 ಗ್ಯಾರಂಟಿ ಯೋಜನೆಗೆ ಮನ್ನಣಿ ನೀಡಿದರು. ನನ್ನ ಮೇಲೆ ಇಟ್ಟಪ್ರೀತಿ, ವಿಶ್ವಾಸಕ್ಕೆ ಮುಧೋಳ ಮತಕ್ಷೇತ್ರದ ಜನತೆಗೆ ಚಿರಋುಣಿಯಾಗಿದ್ದೇನೆ ಎಂದರು.