ಬಿಜೆಪಿಯ ಶಾಸಕರೊಬ್ಬರು ತಮ್ಮ ಬೆಂಬಲಿಗನ ಕಾರು ತಪಾಸಣೆ ಮಾಡದಂತೆ ಲೆಟರ್ ಪ್ಯಾಡ್ ಕೊಟ್ಟಿದ್ದಾರೆ.  ಅಷ್ಟಕ್ಕೂ ಪತ್ರ ಬರೆದು ವಿವಾದ ಮೈಮೇಲೆ ಎಳೆದುಕೊಂಡಿರುವ ಶಾಸಕರ ಯಾರು ಅಂತೀರಾ ?  ಕೆಳಗಿದೆ ನೋಡಿ 

ಬೆಂಗಳೂರು, (ಜುಲೈ.12): ಆಸ್ಪತ್ರೆಯಲ್ಲಿ ಬೆಡ್​, ಚಿಕಿತ್ಸಾ ವೆಚ್ಚ ಕಡಿಮೆ ಮಾಡಿಸಿಕೊಳ್ಳಲು, ಶಾಲಾ-ಕಾಲೇಜುಗಳಲ್ಲಿ ಸೀಟ್​ ಸಲುವಾಗಿ, ಹಾಸ್ಟೆಲ್‌ಗಾಗಿ ಸೇರಿದಂತೆ ವಿವಿಧ ಕಾರಣಕ್ಕೆ ಬೆಂಬಲಿಗರು ಮತ್ತು ಆಪ್ತರು ಆಯಾ ಕ್ಷೇತ್ರದ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಶಿಫಾರಸು ಪತ್ರ (ಲೆಟರ್ ಪ್ಯಾಡ್) ಪಡೆಯೋದು ಸಾಮಾನ್ಯ.

Add Asianetnews Kannada as a Preferred SourcegooglePreferred

ಜನರ ಕಷ್ಟಕ್ಕೆ ಮರುಗಿ ಅವರಿಗೆ ಅನುಕೂಲವಾಗಲೆಂದು ಜನಪ್ರತಿನಿಧಿಗಳು ಪತ್ರ ರವಾನಿಸುವ ಮೂಲಕ ಸಂಬಂಧಪಟ್ಟವರಿಗೆ ಸೂಚನೆ ನೀಡೋದು ಸಹಜ. ಆದರೆ, ಇಲ್ಲೋರ್ವ ಶಾಸಕರೊಬ್ಬರು ತನ್ನ ಬೆಂಬಲಿಗನ ಕಾರನ್ನು ಯಾವುದೇ ಕಾರಣಕ್ಕೂ ಪೊಲೀಸರು ತಪಾಸಣೆ ಮಾಡುವ ನೆಪದಲ್ಲಿ ನಿಲ್ಲಿಸಬಾರದು ಎಂದು ಲೆಟರ್ ಪ್ಯಾಡ್ ನೀಡಿದ್ದಾರೆ. ಇದೀಗ ಶಾಸಕರ ಪತ್ರ ವೈರಲ್​ ಆಗಿದ್ದು, ಅಚ್ಚರಿ ಮೂಡಿಸಿದೆ.

Gadag; ಸಭೆಯಲ್ಲೇ ಗಳಗಳನೇ ಅತ್ತ ನಗರಸಭೆ ಅಧ್ಯಕ್ಷೆ! 

ಹೌದು...ಗದಗನ ಶಿರಹಟ್ಟಿ ಬಿಜೆಪಿ ಶಾಸಕ ರಾಮಪ್ಪ ಎಸ್​. ಲಮಾಣಿ, ತಮ್ಮ ಬೆಂಬಲಿಗನ ಕಾರು ತಡೆಯದಂತೆ ಲೆಟರ್‌ ಮೂಲಕ ಪೊಲೀಸರಿಗೆ ಸೂಚಿಸಿದ್ದಾರೆ. 

ಗದಗನ ಶಿರಹಟ್ಟಿ ತಾಲೂಕಿನ ಬೆಳಗಟ್ಟಿಯ ಜಿ.ಬಸವರಾಜ ಎಂಬುವವರು ನನ್ನ ಮತ ಕ್ಷೇತ್ರಕ್ಕೆ ಒಳಪಟ್ಟಿದ್ದು, ನಮ್ಮ ಪಕ್ಷದ ಕಾರ್ಯಕರ್ತರಾಗಿದ್ದಾರೆ. ಹಾಗೂ ನನಗೆ ತುಂಬಾ ಚಿರಪರಿಚಿತರು. ಬಸವರಾಜ ಅವರು ಮಹೇಂದ್ರ ಬೊಲೆರೋ ವಾಹನ ಹೊಂದಿದ್ದು, ಇದರ ಸಂಖ್ಯೆ AP-39 V-3517. ಈ ವಾಹನವನ್ನು ಹಿಡಿಯಬಾರದು. ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದು ಪತ್ರದ ಮೂಲಕ ಮನವಿ ಮಾಡುತ್ತೇನೆ ಎಂದು ಶಾಸಕರ ಲೆಟರ್​ಹೆಡ್​ನಲ್ಲೇ ರಾಮಪ್ಪ ಎಸ್​. ಲಮಾಣಿ ಅವರು ಬರೆದು ಸಹಿ ಮಾಡಿದ್ದಾರೆ.

ಶಾಸಕರು ಲೆಟರ್ ಹೆಡ್ ಬೇಕಾಬಿಟ್ಟಿ ನೀಡಿದ್ದಾರೆ ಅನ್ನೋ ಆರೋಪ ಕೂಡ ಇದೆ. ಯಾರೂ ಕೇಳಿದ್ರೂ ಖಾಲಿ ಪತ್ರದಲ್ಲಿ ಸಹಿ ಮಾಡಿ ಪತ್ರ ನೀಡಿದ್ದಾರೆ ಅನ್ನೋ ಆರೋಪ ಬಿಜೆಪಿ ವಲಯದಲ್ಲೇ ಕೇಳಿಬರ್ತಾಯಿದೆ. ಶಾಸಕರ ನಿರ್ಲಕ್ಷವೇ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಇದು ಅಧಿಕಾರದ ದುರ್ಬಳಕೆ, ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಶಾಸಕರ ಕಡೆಯವರು ಅಂದ ಮಾತ್ರಕ್ಕೆ ಸಾರಿಗೆ ನಿಯಮ ಅನ್ವಯಿಸುವುದಿಲ್ಲವೇ? ಇದ್ಹೇನು ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನಿಸುತ್ತಿದ್ದಾರೆ. 

ಇನ್ನು ಈ ಬಗ್ಗೆ ಮಾತನಾಡಿರುವ ಶಾಸಕ, ಮೋಸ ಮಾಡಿ ಪತ್ರ ತೆಗೆದುಕೊಂಡು ಹೋಗಿದ್ದಾನೆ‌. ಆತನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಾಸ್ಟೆಲ್ ಗೆ ವಿದ್ಯಾರ್ಥಿ ಸೇರಿಸಲು ಅಂತ ಹೇಳಿ ಪತ್ರ ತೆಗೆದುಕೊಂಡು ಹೋಗಿದ್ದಾನೆ. ಈ ರೀತಿ ದುರ್ಬಳಕೆ ಮಾಡಿಕೊಂಡಿದ್ದಾನೆ. ನಾಳೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತೇನೆ ಎಂದರು.