ಹಿರಿಯರಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆಯೇ ಬಿಜೆಪಿಯ ‘ಡೌನ್ಫಾಲ್’ ಶುರುವಾಯಿತು ಎಂದು ಮಾಜಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಸೆ.04): ಹಿರಿಯರಾದ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆಯೇ ಬಿಜೆಪಿಯ ‘ಡೌನ್ಫಾಲ್’ ಶುರುವಾಯಿತು. ಪಕ್ಷ ಆನಂತರ ಮೇಲೇಳಲೇ ಇಲ್ಲ. ಈಗ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಕ್ಷ ಕಟ್ಟುತ್ತಿದ್ದಾರೆ. ಸೋತವರ ಜೊತೆ ಯಡಿಯೂರಪ್ಪ ಈಗಲೂ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದಾರೆ.
ನಟ ಸುದೀಪ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಮಾತುಕತೆ ನಡೆಸಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತನಾಡಿದ ಮಾತ್ರಕ್ಕೆ ‘ಆಪರೇಷನ್ ಹಸ್ತ’ಕ್ಕೆ ಒಳಗಾಗುವುದಿಲ್ಲ. ನನಗೇನು ಕ್ಯಾನ್ಸರ್ ಆಗಿಲ್ಲ, ಗಡ್ಡೆಯೂ ಇಲ್ಲ. ಆದ್ದರಿಂದ ವೈದ್ಯರ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.
ಬಿಜೆಪಿಯ 26 ಮಂದಿ ಸಂಸದರು ಗುಲಾಮಗಿರಿಯಲ್ಲಿದ್ದಾರೆ: ಮುಖ್ಯಮಂತ್ರಿ ಚಂದ್ರು
ಬಿಜೆಪಿಯಲ್ಲಿ ಉತ್ತಮ ಸ್ಥಾನಮಾನ ನೀಡಿದ್ದಾರೆ. ಚುನಾವಣೆ ಎಂದ ಮೇಲೆ ಸೋಲು-ಗೆಲುವು ಸಹಜ. ಕಾಂಗ್ರೆಸ್ನಿಂದ ನನಗೆ ಯಾವುದೇ ಆಹ್ವಾನ ಬಂದಿಲ್ಲ. ‘ರಾಜು ನೀನು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ. ಹೇಗೆ ಸೋಲು ಅನುಭವಿಸಿದೆ’ ಎಂದು ಶಿವಕುಮಾರ್ ಪ್ರಶ್ನಿಸಿದರು. ‘ನಿಮ್ಮ ಮತ್ತು ಸಿದ್ದರಾಮಯ್ಯ ಅವರ ಪ್ರಭಾವದಿಂದ ಸೋಲು ಅನುಭವಿಸಿದೆ’ ಎಂದು ಶಿವಕುಮಾರ್ ಅವರಿಗೆ ತಿಳಿಸಿದೆ ಎಂದು ವಿವರಿಸಿದರು.
ಅಸಮಾಧಾನ ನಿವಾರಣೆ ಆಗಲಿ: ಜಯ ಗಳಿಸಿದವರು ಗೆಲುವಿನ ಮಜಾ ಅನುಭವಿಸುತ್ತಿದ್ದಾರೆ. ಸೋತವರು ಸಹ ಸೋಲಿನ ಮಜಾ ಅನುಭವಿಸುತ್ತಿದ್ದೇವೆ. ಜಯದ ಮಜಾ ಯಾವಾಗಲೂ ಇರಬಾರದು. ವಿಧಾನ ಸಭೆ ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರನ್ನು ಶೀಘ್ರ ನೇಮಕ ಮಾಡಬೇಕು. ಇಲ್ಲದಿದ್ದರೆ ಪಕ್ಷ ಸಂಘಟನೆಗೆ ತೊಂದರೆ ಆಗುತ್ತದೆ ಎಂದು ಪಕ್ಷದ ವೇದಿಕೆಯಲ್ಲಿ ಹೇಳಿದ್ದೇನೆ. ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿರುವುದರಿಂದಲೇ ಬಿ.ಎಲ್. ಸಂತೋಷ್ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ರೇಣುಕಾಚಾರ್ಯ ಅವರು ಫಿಲ್ಟರ್ ಇಲ್ಲದೇ ಮಾತನಾಡುತ್ತಾರೆ. ಅವರನ್ನು ಖರೀದಿಸಲು ಸಾಧ್ಯವಿಲ್ಲ. ಅವರೇ ಎಲ್ಲರನ್ನೂ ಖರೀದಿ ಮಾಡುತ್ತಾರೆ. ರೇಣುಕಾಚಾರ್ಯ ಅವರೂ ಕಾಂಗ್ರೆಸ್ಗೆ ಸೇರ್ಪಡೆ ಆಗುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯಗೆ ಬಡವರ ಮಕ್ಕಳು ಉದ್ಧಾರವಾಗಬಾರದು: ಪ್ರತಾಪ್ ಸಿಂಹ ವಾಗ್ದಾಳಿ
ರಾಜಾ ಅಮರೇಶ್ವರ ನಾಯ್ಕಗೆ ಟಿಕೆಟ್ ನೀಡಲಿ: ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಪುನಃ ರಾಜಾ ಅಮರೇಶ್ವರ ನಾಯ್ಕ ಅವರಿಗೇ ಟಿಕೆಟ್ ನೀಡಬೇಕು. ಹಾಲಿ ಸಂಸದರಾಗಿರುವ ಅವರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಈ ಸಲವೂ ಅವರೇ ಅಭ್ಯರ್ಥಿಯಾಗಲಿ. ನಾವೆಲ್ಲ ಅವರ ಪರ ಕೆಲಸ ಮಾಡುತ್ತೇವೆ ಎಂದು ರಾಜುಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
