ಈ ಹಿಂದೆ ವಲಸಿಗರಿಂದಾಗಿ ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂದು ಈಶ್ವರಪ್ಪ ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಈಗ ಈಶ್ವರಪ್ಪ ವಿರುದ್ಧವೇ ಅಶಿಸ್ತಿನ ವಾತಾವರಣ ಮೂಡಿಸುತ್ತಿರುವ ಆರೋಪ ಮಾಡಿ ವಲಸಿಗರಲ್ಲಿ ಒಬ್ಬರಾದ ಬಿ.ಸಿ.ಪಾಟೀಲ್‌ ಟೀಕಾಪ್ರಹಾರ ನಡೆಸಿದ್ದಾರೆ.

ಹಾವೇರಿ(ಆ.23): ಬಿಜೆಪಿ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಪುತ್ರ ಕಾಂತೇಶನನ್ನು ಮುಂದಿನ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದಾರೆ. ಕಾಂತೇಶ್‌ಗೆ ಹಾವೇರಿಯಿಂದ ಸ್ಪರ್ಧಿಸಲು ಪಕ್ಷ ಯಾವುದೇ ಸಂದೇಶ ಕೊಟ್ಟಿಲ್ಲ. ಆದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದವರನ್ನು ಕರೆದುಕೊಂಡು ಈಶ್ವರಪ್ಪ ಈ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಇಲ್ಲಿಯ ವಾತಾವರಣ ಕೆಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್‌ ಕಿಡಿಕಾರಿದ್ದಾರೆ.

Add Asianetnews Kannada as a Preferred SourcegooglePreferred

ಈ ಹಿಂದೆ ವಲಸಿಗರಿಂದಾಗಿ ಬಿಜೆಪಿಯಲ್ಲಿ ಅಶಿಸ್ತು ಮೂಡಿದೆ ಎಂದು ಈಶ್ವರಪ್ಪ ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಈಗ ಈಶ್ವರಪ್ಪ ವಿರುದ್ಧವೇ ಅಶಿಸ್ತಿನ ವಾತಾವರಣ ಮೂಡಿಸುತ್ತಿರುವ ಆರೋಪ ಮಾಡಿ ವಲಸಿಗರಲ್ಲಿ ಒಬ್ಬರಾದ ಬಿ.ಸಿ.ಪಾಟೀಲ್‌ ಟೀಕಾಪ್ರಹಾರ ನಡೆಸಿದ್ದಾರೆ.

ಪುತ್ರನಿಗೆ ಲೋಕಸಭೆ ಎಲೆಕ್ಷನ್‌ ಟಿಕೆಟ್‌ಗಾಗಿ ಈಶ್ವರಪ್ಪ ಲಾಬಿ: ಮಗನಿಗೆ ಮಠಾಧೀಶ್ವರ ಆಶೀರ್ವಾದವೂ ಇದೆ ಎಂದ ಮಾಜಿ ಸಚಿವ

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಕಾಂತೇಶ್‌ಗೆ ಪಕ್ಷ ಸೂಚನೆ ಕೊಟ್ಟಿದ್ದರೆ ಕ್ಷೇತ್ರದಲ್ಲಿ ಓಡಾಡಲಿ. ಆದರೆ, ಅಂತಹ ಯಾವುದೇ ಸಂದೇಶ ಪಕ್ಷದಿಂದ ಬಂದಿಲ್ಲ. ಈಶ್ವರಪ್ಪ ಕೂಡ ತಮ್ಮ ಪುತ್ರನೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಓಡಾಡುವುದು ಸರಿಯಲ್ಲ. ಈ ರೀತಿ ಮಾಡಿದರೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಲ್ಲಿ ಬಹಳಷ್ಟುಆಕಾಂಕ್ಷಿಗಳಿದ್ದಾರೆ. ಚುನಾವಣೆ ಎದುರಿಸುವ ಶಕ್ತಿ, ಸಾಮರ್ಥ್ಯ ಇರುವವರೂ ಕೂಡ ಬಹಳಷ್ಟುಮಂದಿ ಇದ್ದಾರೆ. ಪಕ್ಷ ಅವಕಾಶ ಕೊಟ್ಟರೆ ನಾನೂ ಸ್ಪರ್ಧೆಗೆ ಆಸಕ್ತಿ ಹೊಂದಿದ್ದೇನೆ ಎಂದರು.

ನಾವು 17 ಶಾಸಕರು ಈ ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬರುವಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತ್ಯಾಗ ಮಾಡಿ ಬಂದಿದ್ದೇವೆ. ಬಿಜೆಪಿಗೆ ಬಂದ ಮೇಲೆ ಅಶಿಸ್ತು ಪ್ರದರ್ಶಿಸಿಲ್ಲ. ಪಕ್ಷದಲ್ಲಿ ಯಾವುದೇ ಗೊಂದಲ ಮೂಡಿಸಿಲ್ಲ. ಆದರೆ, ಈಶ್ವರಪ್ಪನವರು ನಾವು ಬಂದಿದ್ದರಿಂದ ಅಶಿಸ್ತು ಮೂಡಿದೆ ಎಂದಿದ್ದಾರೆ. ಈಶ್ವರಪ್ಪ ಅವರ ಹೇಳಿಕೆಯಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಪಕ್ಷದ ವರಿಷ್ಠರಾದರೂ ಈಶ್ವರಪ್ಪ ಅವರಿಗೆ ಈ ಬಗ್ಗೆ ಬುದ್ಧಿಮಾತು ಹೇಳಬಹುದಿತ್ತು. ಆದರೆ, ಯಾರೂ ಕಿವಿ ಮಾತು ಹೇಳಲಿಲ್ಲ. ಅದೂ ಕೂಡ ನಮಗೆ ಬಹಳಷ್ಟುಬೇಸರ ಉಂಟು ಮಾಡಿದೆ ಎಂದರು.

ಮನೆಗೆ ಬಂದು ಸೊಸೆ ಮೊಳೆ ಬಡಿದ ಮೇಲೆ ಮನೆಯವಳಾಗುತ್ತಾಳೆಯೇ ವಿನಃ ಹೊರಗಿನವಳಾಗಲ್ಲ. ನಾವು ಬಿಜೆಪಿ ಸದಸ್ಯತ್ವ ಪಡೆದ ಮೇಲೆ ವಲಸಿಗರು, ಮೂಲ ಎಂದು ಹೇಳುವ ಪ್ರಶ್ನೆಯೇ ಇಲ್ಲ. 2004ರ ನಂತರ ಹೊರಗಿನಿಂದ ಬಂದವರೇ ಬಿಜೆಪಿಯಲ್ಲಿ ಜಾಸ್ತಿ ಇದ್ದಾರೆ. ಅನಂತ್‌ ಕುಮಾರ್‌, ಯಡಿಯೂರಪ್ಪ ಅವರಂತಹ ಕೆಲ ನಾಯಕರನ್ನು ಬಿಟ್ಟರೆ ಉಳಿದ ಬಹಳಷ್ಟುಜನ ಜನತಾದಳದಿಂದ ಬಂದವರಿದ್ದಾರೆ. ನಾವು ಬಂದು 4 ವರ್ಷ ಆಯಿತು. ನಾವೀಗ ವಲಸಿಗರಲ್ಲ ಎಂದು ಪ್ರತಿಪಾದಿಸಿದರು.

ಗುತ್ತಿಗೆದಾರರ ಆರೋಪದ ವಿಚಾರದಲ್ಲಿ ಸಿದ್ದು ಸುಳ್ಳು ಹೇಳುತ್ತಿದ್ದಾರೆ: ಬೊಮ್ಮಾಯಿ

ಕಾಂಗ್ರೆಸ್‌ನಿಂದ ಗಿಮಿಕ್‌:

‘ಆಪರೇಷನ್‌ ಹಸ್ತ’ದ ಬಗ್ಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್‌, ಕಾಂಗ್ರೆಸ್‌ನವರಿಗೆ ಈಗ ಶಾಸಕರ ಅವಶ್ಯಕತೆ ಏನಿದೆ? ಸುಮ್ಮನೆ ಹವಾ ಸೃಷ್ಟಿಸಲು ಮಾಡುತ್ತಿರುವ ಗಿಮಿಕ್‌ ಇದು. ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರ್ತಾರೆ ಎನ್ನುವ ಹವಾ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಎಸ್‌.ಟಿ.ಸೋಮಶೇಖರ್‌ ಆಗಲಿ, ಶಿವರಾಮ್‌ ಹೆಬ್ಬಾರ್‌ ಆಗಲಿ ಬಿಜೆಪಿ ಬಿಟ್ಟು ಹೋಗಲ್ಲ. ನಮ್ಮ ಸರ್ಕಾರ ಜಾರಿಗೊಳಿಸಿದ ಒಳ ಮೀಸಲಾತಿ ಹಾಗೂ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿಗಳಿಂದಾಗಿ ನಮಗೆ ಸೋಲಾಗಿದೆ. ಕಾಂಗ್ರೆಸ್‌ನವರು ಜನರಿಗೆ ಮಂಕು ಬೂದಿ ಎರಚಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿದರು.

ನಾನೂ ಆಕಾಂಕ್ಷಿ

ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದಲ್ಲಿ ಬಹಳಷ್ಟುಆಕಾಂಕ್ಷಿಗಳಿದ್ದಾರೆ. ಚುನಾವಣೆ ಎದುರಿಸುವ ಶಕ್ತಿ, ಸಾಮರ್ಥ್ಯ ಇರುವವರೂ ಬಹಳಷ್ಟುಮಂದಿ ಇದ್ದಾರೆ. ಪಕ್ಷ ಅವಕಾಶ ಕೊಟ್ಟರೆ ನಾನೂ ಸ್ಪರ್ಧೆಗೆ ಆಸಕ್ತಿ ಹೊಂದಿದ್ದೇನೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್‌ ತಿಳಿಸಿದ್ದಾರೆ.