Asianet Suvarna News Asianet Suvarna News

ರಾಹುಲ್‌ ಗಾಂಧಿ ಉತ್ತರ ಭಾರತದ, ಉದಯನಿಧಿ ದಕ್ಷಿಣ ಭಾರತದ ಪಪ್ಪು: ಶ್ರೀರಾಮುಲು

ಸರ್ಕಾರಕ್ಕೆ ಅನ್ನದಾತರ ಬಗ್ಗೆ ಯಾವ ಕಾಳಜಿಯೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ನಿರಂತರ ಲೋಡ್‌ ಶೆಡ್ಡಿಂಗ್‌ ಆಗಿದ್ದು, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕೊಡಲು ಸಹ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಉಚಿತ ಭಾಗ್ಯಗಳ ಘೋಷಣೆ ಮಾಡುತ್ತಿರುವ ಸಿಎಂ ರೈತರಿಗೆ ಕತ್ತಲುಭಾಗ್ಯ ಕರುಣಿಸಿದ್ದಾರೆ. ಬರದಿಂದ ಕಂಗೆಟ್ಟ ರೈತರು ಸತ್ತಮೇಲೆ ಪರಿಹಾರ ನೀಡುತ್ತಾರಾ? ಎಂದು ಪ್ರಶ್ನಿಸಿದ ಮಾಜಿ ಸಚಿವ ಬಿ. ಶ್ರೀರಾಮುಲು 

Former Minister B Sriramulu Slams Tamil Nadu Minister Udhayanidhi Stalin grg
Author
First Published Sep 7, 2023, 9:14 PM IST

ಬಳ್ಳಾರಿ(ಸೆ.07):  ಹೋರಾಟದ ಮೂಲಕ ಕಾಂಗ್ರೆಸ್‌ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಐದು ಗ್ಯಾರಂಟಿಗಳ ಲಾಟರಿ ಮೂಲಕ ಅಧಿಕಾರಕ್ಕೆ ಬಂದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಶ್ರೀರಾಮುಲು, ಈ ರಾಜ್ಯದಲ್ಲಿರುವ ಸರ್ಕಾರ ಲಾಟರಿಯಲ್ಲಿ ಆಯ್ಕೆಗೊಂಡಂತೆಯೆ, ಮುಖ್ಯಮಂತ್ರಿ ಸೇರಿದಂತೆ ಪಕ್ಷದ ಸಚಿವರು ಸಹ ಲಾಟರಿಯಲ್ಲಿಯೇ ಆಯ್ಕೆಯಾಗಿದ್ದಾರೆ ಎಂದು ದೂರಿದರು.

ಸರ್ಕಾರಕ್ಕೆ ಅನ್ನದಾತರ ಬಗ್ಗೆ ಯಾವ ಕಾಳಜಿಯೂ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ನಿರಂತರ ಲೋಡ್‌ ಶೆಡ್ಡಿಂಗ್‌ ಆಗಿದ್ದು, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕೊಡಲು ಸಹ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಉಚಿತ ಭಾಗ್ಯಗಳ ಘೋಷಣೆ ಮಾಡುತ್ತಿರುವ ಸಿಎಂ ರೈತರಿಗೆ ಕತ್ತಲುಭಾಗ್ಯ ಕರುಣಿಸಿದ್ದಾರೆ. ಬರದಿಂದ ಕಂಗೆಟ್ಟ ರೈತರು ಸತ್ತಮೇಲೆ ಪರಿಹಾರ ನೀಡುತ್ತಾರಾ? ಎಂದು ಪ್ರಶ್ನಿಸಿದರು.

ಬಳ್ಳಾರಿ: ಜನಾರ್ದನ ರೆಡ್ಡಿ ವರ್ಸಸ್ ಭರತ್ ರೆಡ್ಡಿ ಆಯ್ತು, ಇದೀಗ ಬೆಂಬಲಿಗರ ಮಧ್ಯೆ ವಾರ್..!

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಿಹಾರ ಸಿಗುತ್ತದೆ ಎಂದು ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಎಂದು ಸಕ್ಕರೆ ಸಚಿವ ಹೇಳಿಕೆ ನೀಡಿದ್ದು, ಆತನಿಗೆ ಹುಚ್ಚು ಹಿಡಿದಿರಬೇಕು, ಆತನನ್ನು ನಾವೇ ಆಸ್ಪತ್ರೆಗೆ ದಾಖಲಿಸುತ್ತೇವೆ ಎಂದರು.

ಲೋಕಸಭೆ ಚುನಾವಣೆ ಬಳಿಕ ಭಾಗ್ಯ ಬಂದ್‌:

ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ತಂಟೆಗೆ ನಾವು ಹೋಗುವುದಿಲ್ಲ. ಈ ಸರ್ಕಾರದ ಹಣೆಬರಹ ಗೊತ್ತಾಗಲಿ ಎಂದು ಸುಮ್ಮನಿರುತ್ತೇವೆ. ಲೋಕಸಭಾ ಚುನಾವಣೆಯ ಬಳಿಕ ಗ್ಯಾರಂಟಿಗಳ ಭಾಗ್ಯಗಳು ಬಂದ್‌ ಆಗಲಿವೆ. ಸರ್ಕಾರ ನಡೆಸಲು ಇವರ ಬಳಿ ಹಣವಿಲ್ಲ. ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹೊಸ ಯೋಜನೆ ಇಲ್ಲ. ಈ ಹಿಂದಿನ ಯೋಜನೆಗಳು ಪೂರ್ಣಗೊಳಿಸಲು ಸಹ ಇವರ ಬಳಿ ಹಣವಿಲ್ಲ. ರೈತ ಸಂಘಟನೆಗಳು ಸರ್ಕಾರ ವಿರುದ್ಧ ಹೋರಾಟ ಮಾಡಬೇಕು. ನಾವು ಸಹ ಚಳವಳಿ ರೂಪಿಸುತ್ತಿದ್ದೇವೆ. ಸೆ. 8ರಂದು ರಾಜ್ಯಾದ್ಯಂತ ಬಿಜೆಪಿ ರೈತ ಮೋರ್ಚಾದಿಂದ ಹೋರಾಟ ಹಮ್ಮಿಕೊಂಡಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆಗಳು ನಡೆಯಲಿವೆ ಎಂದರು.

ಜೀನ್ಸ್‌ ಪಾರ್ಕ್‌ಗೆ ಹಣ ನೀಡಲಿಲ್ಲ:

ರಾಹುಲ್‌ ಗಾಂಧಿ ಅವರು ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್ ಮಾಡಲು .5 ಸಾವಿರ ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಮೊದಲ ಬಜೆಟ್‌ನಲ್ಲಿಯೇ ಹಣ ಮೀಸಲಿಡುವುದಾಗಿ ಹೇಳಿದ್ದರು. ಆದರೆ, ಮೊದಲ ಬಜೆಟ್‌ನಲ್ಲಿ ಜೀನ್ಸ್‌ ಪಾರ್ಕ್ ಬಗ್ಗೆ ಎಲ್ಲೂ ಪ್ರಸ್ತಾಪವಾಗಲಿಲ್ಲ. ಬಳ್ಳಾರಿಯಲ್ಲಿ ನಾವು ಈ ಹಿಂದೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಿಸಿದೆವು. ಆದರೆ, ಕಾಂಗ್ರೆಸ್‌ನಿಂದ ಏನೂ ಕೆಲಸವಾಗಿಲ್ಲ. ಗೃಹಲಕ್ಷ್ಮಿ ಯೋಜನೆಗೂ ಸರಿಯಾಗಿ ಹಣ ನೀಡುತ್ತಿಲ್ಲ. ತಾಂತ್ರಿಕ ದೋಷ ಎನ್ನುತ್ತಿದ್ದಾರೆ. ಇವರು ಹೀಗೆ ತಾಂತ್ರಿಕ ದೋಷಗಳ ಸಬೂಬು ಹೇಳುತ್ತಿದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡುತ್ತಾರೆ ಎಂದರು.

ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ವಿಧಾನಪರಿಷತ್‌ ಸದಸ್ಯ ವೈ.ಎಂ. ಸತೀಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್‌, ರಾಜ್ಯ ರೈತ ಮೋರ್ಚಾದ ಗುರುಲಿಂಗನಗೌಡ, ಜಿಲ್ಲಾಧ್ಯಕ್ಷ ಪ್ರಕಾಶಗೌಡ, ಮದಿರೆ ಕುಮಾರಸ್ವಾಮಿ, ಡಾ. ಮಹಿಪಾಲ್‌ ಸುದ್ದಿಗೋಷ್ಠಿಯಲ್ಲಿದ್ದರು.

ಸಚಿವ ಉದಯನಿಧಿ ದಕ್ಷಿಣ ಭಾರತದ ಪಪ್ಪು

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಉತ್ತರ ಭಾರತದ ಹಾಗೂ ತಮಿಳುನಾಡು ಸಚಿವ ಉದಯನಿಧಿ ಅವರು ದಕ್ಷಿಣ ಭಾರತದ ಪಪ್ಪುಗಳು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದರು.

ಸನಾತನದ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿರುವ ಉದಯನಿಧಿಗೆ ದೇಶದ ಇತಿಹಾಸ ಹಾಗೂ ಸಂಸ್ಕೃತಿ ತಿಳಿದಿಲ್ಲ. ಹಿಂದೂ ಧರ್ಮದ ಬಗ್ಗೆ ಅರಿವಿಲ್ಲದೆ ಮಾತನಾಡುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರಲ್ಲದೆ, ಸಚಿವ ಪರಮೇಶ್ವರ ಅವರು ಸಹ ಒಂದು ಜಾತಿಯನ್ನು ಓಲೈಸಲು ಹಿಂದೂ ಧರ್ಮವನ್ನು ಟೀಕಿಸುತ್ತಾರೆ ಎಂದರು.

ತಮಿಳುನಾಡಿನಿಂದ ಅನಗತ್ಯವಾಗಿ ಮೇಕೆದಾಟು ಯೋಜನೆಗೆ ವಿರೋಧ: ಸಿಎಂ ಸಿದ್ದು

ಐಎನ್‌ಡಿಐಎ ಒಕ್ಕೂಟದಲ್ಲಿ ತಮಿಳುನಾಡಿನ ಆಡಳಿತರೂಢ ಡಿಎಂಕೆ ಇದೆ ಎಂಬ ಕಾರಣಕ್ಕೆ ಕಾವೇರಿ ನೀರು ಬಿಡಲಾಗಿದೆ. ಇವರಿಗೆ ರಾಜ್ಯದ ಹಿತಕ್ಕಿಂತ ಒಕ್ಕೂಟದ ಸದಸ್ಯರ ಹಿತ ಕಾಯುವುದು ಮುಖ್ಯವಾಗಿದೆ. ಐಎನ್‌ಡಿಐಎ ಒಕ್ಕೂಟಕ್ಕೆ ಹೆದರಿ ಇಂಡಿಯಾ ಪದ ತೆಗೆದು ಭಾರತ ಎಂದು ಮಾಡಿಲ್ಲ. ಬ್ರಿಟಿಷರಿಟ್ಟಹೆಸರು ಬದಲಾಯಿಸಬೇಕು ಎಂದು ಬಹುದಿನದ ಬೇಡಿಕೆ ಇತ್ತು. ಹೀಗಾಗಿ ಬದಲಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ದೇವೇಂದ್ರಪ್ಪ ಬಿಜೆಪಿ ಅಭ್ಯರ್ಥಿ

ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ವೈ. ದೇವೇಂದ್ರಪ್ಪ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು. ದೇವೇಂದ್ರಪ್ಪ ಅವರು ಉತ್ತಮ ಕೆಲಸ ಮಾಡಿದ್ದಾರೆ. ಅವರೇ ಅಭ್ಯರ್ಥಿಯಾಗುತ್ತಾರೆ ಎಂದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಾಜಿ ಸಚಿವ ಬಿ. ಶ್ರೀರಾಮುಲು ಅವರೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ. ಅವರ ಮನವೊಲಿಸುತ್ತೇವೆ ಎಂದರು.

Follow Us:
Download App:
  • android
  • ios