Asianet Suvarna News Asianet Suvarna News

ಮತದಾರರು ಹಾದಿ-ಬೀದೀಲಿ ಹೋಗೋರು ಯಾವಾಗಾದ್ರು? ಡಿಕೆಶಿಗೆ ಕುಮಾರಸ್ವಾಮಿ ತರಾಟೆ

ಎಲ್ಲರಿಗೂ ಉಚಿತ ಗ್ಯಾರಂಟಿ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ನಿಮಗೆ ಮತದಾರರು ಹಾದಿ-ಬೀದಿಯವರು ಆಗಿದ್ದಾರೆಯೇ ಎಂದು ಮಾಜಿ ಸಿಎಂ ಕುಮಾರಸ್ವಾಮಿ  ಪ್ರಶ್ನೆ ಮಾಡಿದ್ದಾರೆ.

Former CM Kumaraswamy challenged Karnataka Congress govt to fulfill the free guarantees sat
Author
First Published May 24, 2023, 11:33 AM IST

ಬೆಂಗಳೂರು (ಮೇ 24): ರಾಜ್ಯದ ಜನತೆಗೆ ಕೊಟ್ಟ 5 ಗ್ಯಾರಂಟಿಗಳ ಆಧಾರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕೆ ಆಗುತ್ತಾ ಎಂದು ಹೇಳಿಕೆ ನೀಡಿದ್ದರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ಉಚಿತ ಗ್ಯಾರಂಟಿ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ನಿಮಗೆ ಮತದಾರರು ಹಾದಿ-ಬೀದಿಯವರು ಆಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

ಹೊಸ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ಮೊದಲ ವಿಧಾನಸಭಾ ಅಧಿವೇಶನದ ಮೂರನೇ ದಿನ ಸ್ಪೀಕರ್‌ ಕಚೇರಿಗೆ ಬಂದು ಪ್ರಮಾಣವಚನ ಸ್ವೀಕಾರ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನವರು ಮೊದಲು ಭಾಷಣ ಏನು ಮಾದಿದ್ದರು ಎಂದು ನೆನಪು ಮಾಡಿಕೊಳ್ಳಬೇಕು. ಈಗ ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲಾ ಗ್ಯಾರಂಟಿ ಯೋಜನೆ ಕೊಡಕ್ಕಾಗಲ್ಲ ಎಂಬ ಡಿಸಿಎಂ ಸಿ.ಕೆ. ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ. ಆವತ್ತು ಭರವಸೆ ಕೊಡಬೇಕಾದಾಗ ನಿಮಗೆ ತಲೆ ಇರಲಿಲ್ಲವಾ.? ಈಗ ಮತ ಕೊಟ್ಟವರೆಲ್ಲಾ ಹಾದಿಬೀದಿಯವರು ಆಗಿಬಿಟ್ರಾ‌? ಎಂದು ಪ್ರಶ್ನಿಸಿದ್ದಾರೆ.

'ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ..' ಗ್ಯಾರಂಟಿ ಬಗ್ಗೆ ಡಿಕೆಶಿ ಕೊಂಕು!

ಬಜೆಟ್‌ ಘೋಷಣೆ ಎಷ್ಟು ಈಡೇರುತ್ತೆ ನೋಡೋಣ: ಕಳೆದ ಮೂರು ದಿನಗಳಿಂದ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣವಚನ ನಡೆಯುತ್ತಿದೆ. ಇಂದು ನಾನು ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ. ಆಡಳಿತ ಪಕ್ಷದ ಸ್ಪೀಕರ್ ಆಯ್ಕೆಗಾಗಿ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವಿರೋಧವಾಗಿ ಆಯ್ಕೆ ಆಗಲಿದ್ದಾರೆ. ಮುಂದೆ ಬಜೆಟ್ ಅಧಿವೇಶನ ಆಗಬಹುದು. ಬಜೆಟ್ ಘೋಷಣೆಗಳನ್ನು ಎಷ್ಟರ ಮಟ್ಟಿಗೆ ಜಾರಿ ತರ್ತಾರೆ ಅಂತ ಜನ ಕಾಯುತ್ತಿದ್ದಾರೆ. ನಾಡಿನ ಜನತೆಗೆ ಕೊಟ್ಟ ಮಾತನ್ನು ಈ ಸರ್ಕಾರ ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತೋ ನೋಡೋಣ ಎಂದು ಹೇಳಿದರು.

ಫ್ರೀ ಗ್ಯಾರಂಟಿ ಕೊಟ್ಟು ಚಪ್ಪಾಳೆ ಗಿಟ್ಟಿಸಿಕೊಂಡರು:  ರಾಜ್ಯದಲ್ಲಿ ನಾನು ಕೊಟ್ಟ ಮಾತು ತಪ್ಪಲ್ಲ, ಮಾತಿಗೆ ತಪ್ಪಿದರೆ ಒಂದು ಕ್ಷಣ ಅಧಿಕಾರದಲ್ಲಿ ಇರಲ್ಲ ಅಂದಿದ್ದಾರೆ. ವಿದ್ಯುತ್ ಎಲ್ಲರಿಗೂ ಉಚಿತ (ಫ್ರೀ) ಅಂತಾ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿದ್ದಾರೆ. ಆದರೆ, ಇವತ್ತು ಕೆಲವು ಗೈಡ್ ಲೈನ್ಸ್ ರಚನೆ ಆಗಬೇಕಿದೆ ಅಂತಿದ್ದಾರೆ. ಆವತ್ತು ವೀರಾವೇಶದಲ್ಲಿ ಮಾತಾಡಿ  ಚಪ್ಪಾಳೆ ಗಿಟ್ಟಿಸಿಕೊಂಡರು. ಒಂದೇ ವಾರದಲ್ಲಿ ನಿಮ್ಮ ನಿಜವಾದ ಬಣ್ಣ ಬಯಲಾಗ್ತಿದೆ. ಇವರು ಹೇಗೆ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ನೋಡಿ. ಈಗ ಎಲ್ಲರೂ ಕಾದು ನೋಡೋಣ. ನಂತರ ಜನತೆಯ ಜೊತೆ ಯಾವ ರೀತಿ ಹೋರಾಟ ಮಾಡ ಬೇಕೋ ಯೋಜನೆ ರೂಪಿಸ್ತೀವಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್‌ ಒಗ್ಗಟ್ಟಿಗೆ ಬೆಂಕಿಯಿಟ್ಟ ಎಂ.ಬಿ. ಪಾಟೀಲ್‌: ಪವರ್‌ ಶೇರಿಂಗ್‌ ಹೇಳಿಕೆ ರಹಸ್ಯವೇನು?

ಡಿ.ಕೆ. ಶಿವಕುಮಾರ್‌ ಹೇಳಿಕೆ ಏನು? : ಗ್ಯಾರಂಟಿಗಳ ಮೇಲೆಯೆ ಅಧಿಕಾರ ಹಿಡಿದ ಕಾಂಗ್ರೆಸ್‌ ಪಕ್ಷ, ಶನಿವಾರ ನಡೆದ ಸರ್ಕಾರದ ಮೊದಲ ಕ್ಯಾಬಿನೆಟ್‌ ಸಭೆಯಲ್ಲಿ ತನ್ನೆಲ್ಲಾ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಇದು ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದರು. ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ 'ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ' ಎಂದು ಮಾಧ್ಯಮದವರಿಗೆ ಕೊಂಕಾಗಿ ಪ್ರಶ್ನೆ ಮಾಡಿದ್ದಾರೆ. ಚುನಾವಣೆಯ ವೇಳೆ ಎಲ್ಲರಿಗೂ ಗ್ಯಾರಂಟಿ ಕೊಡೋದಾಗಿ ಸ್ವತಃ ಡಿಕೆ ಶಿವಕುಮಾರ್‌ ಅವರೇ ಹೇಳಿದ್ದರೆ, ಸುದ್ದಿಗೋಷ್ಠಿಯಲ್ಲಿ ಮಾತ್ರ ಎಲ್ಲಾ ವಿವರಗಳನ್ನು ಪಡೆದು ಅರ್ಹರಿಗೆ ಮಾತ್ರವೇ ಗ್ಯಾರಂಟಿ ನೀಡುವ ಮಾತನಾಡಿದ್ದರು. ಚುನಾವಣೆಯಲ್ಲಿ ನಿಮ್ಮ ಭಾಷಣದಲ್ಲಿ ಎಲ್ಲವೂ ಉಚಿತ ಅಂತಾ ಹೇಳಿದ್ರಲ್ಲ, ಅದೇನಾಯ್ತು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರಿಸಿದ ಡಿಕೆ ಶಿವಕುಮಾರ್‌, 'ಅದೇ ಅದೇ..' ಎಂದು ಹೇಳುತ್ತಾ ಹಾರಿಕೆಯ ಉತ್ತರ ನೀಡಿದರು.

Follow Us:
Download App:
  • android
  • ios