ಸ್ಯಾಂಟ್ರೋ ರವಿ ವಿಷಯದಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅವರು ಈಗಾಗಲೇ ಹೇಳಿದ್ದು, ಈ ವಿಷಯದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಶಿವಮೊಗ್ಗ (ಜ.10): ಸ್ಯಾಂಟ್ರೋ ರವಿ ವಿಷಯದಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಅವರು ಈಗಾಗಲೇ ಹೇಳಿದ್ದು, ಈ ವಿಷಯದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಯಾಂಟ್ರೋ ರವಿಯ ಜೊತೆಗೆ ಕೆಲ ಸಚಿವರ ಹೆಸರು ಕೇಳಿಬಂದಿದೆ ಎಂಬ ಸುದ್ದಿ ಕುರಿತು ಪ್ರತಿಕ್ರಿಯಿಸಿದ ಅವರು, ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಇದೆಲ್ಲ ಏನೇ ಇದ್ದರೂ ಸ್ಯಾಂಟ್ರೋ ರವಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

Add Asianetnews Kannada as a Preferred SourcegooglePreferred

ಈಶ್ವರಪ್ಪಗೆ ಸಚಿವ ಸ್ಥಾನ ನನ್ನ ಆಪೇಕ್ಷೆ: ಸಂಪುಟದ ವಿಸ್ತರಣೆ ವಿಷಯ ಚರ್ಚೆಯಾಗುತ್ತಿದೆ. ಕೆ.ಎಸ್‌. ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದು ನನ್ನ ಅಪೇಕ್ಷೆ. ಆದರೆ ಕೇಂದ್ರ ನಾಯಕರು ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಬೇಕೆಂದರು. ಎಷ್ಟುಸ್ಥಾನಗಳನ್ನ ಭರ್ತಿ ಮಾಡಲಾಗುತ್ತದೆ ಮತ್ತು ಯಾವಾಗ ವಿಸ್ತರಣೆ ಆಗುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಹೇಳಿದರು. ಮೀಸಲಾತಿ ಕುರಿತು ಬಿಜೆಪಿ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಆದರೆ ಕಾಂಗ್ರೆಸ್‌ ನಾಯಕರು ವಿಷಯವನ್ನು ಮನಸ್ಸಿಗೆ ಬಂದಂತೆ ತಿರುಚಿ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ಬಿಜೆಪಿಯಿಂದ ಬಿಎಸ್‌ವೈ ಕಡೆಗಣನೆ ವದಂತಿ ನಂಬಬೇಡಿ: ವಿಜಯೇಂದ್ರ

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಮನಸ್ಸಿಗೆ ಬಂದಂತೆ ಈ ವಿಷಯದಲ್ಲಿ ಮಾತನಾಡುತ್ತಿದ್ದಾರೆ. ಇದು ಅವರಿಗೆ ಗೌರವ ತರುವಂತಹದ್ದಲ್ಲ ಎಂದು ಪ್ರತಿಕ್ರಿಯಿಸಿದ ಅವರು, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಕಾಂಗ್ರೆಸ್‌ ಮಾಡಲಿಲ್ಲ. ಬದಲಾಗಿ ನಾವು ಮಾಡಿದ್ದು. ಇದನ್ನು ಕಾಂಗ್ರೆಸ್‌ ಸ್ವಾಗತಿಸಬೇಕಿತ್ತು. ಅದನ್ನು ಬಿಟ್ಟು ಸುಖಾಸುಮ್ಮನೆ ಟೀಕಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೀಸಲಾತಿ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಇದರಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ ಎಂದರು.

ಅಧಿ​ಕಾರ ಅವ​ಧಿ​ಯಲ್ಲಿ ಜಿಲ್ಲೆ, ತಾಲೂಕು ಸರ್ವಾಂಗೀಣ ಅಭಿ​ವೃ​ದ್ಧಿ: ದೊರೆತ ಕಾಲಾವಧಿಯಲ್ಲಿ ಜಿಲ್ಲೆ, ತಾಲೂಕನ್ನು ಶಕ್ತಿಮೀರಿ ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲಾಗಿದೆ. ಶಿವಶರಣರ ನಾಡು ಶಿಕಾರಿಪುರಕ್ಕೆ ಪರಸ್ಥಳದವರು ಆಗಮಿಸಿದಾಗ ಅಲ್ಲಮಪ್ರಭು ಅಕ್ಕಮಹಾದೇವಿ ಸಹಿತ ಎಲ್ಲ ಶಿವಶರಣರ ನೆನಪು ಶಾಶ್ವತವಾಗಿಸಿ ಪ್ರಸಿದ್ಧ ತೀರ್ಥಕ್ಷೇತ್ರದ ಮಾದರಿಯಲ್ಲಿ ಉಡುತಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪಟ್ಟಣದಲ್ಲಿ ಸರ್ಕಾರಿ ಪ್ರ.ದ. ಕಾಲೇಜು ಸಮೀಪ ಅರಣ್ಯ ಇಲಾಖೆ ವತಿಯಿಂದ 6 ಎಕರೆ ವಿಶಾಲ ಜಾಗದಲ್ಲಿ ನಿರ್ಮಾಣವಾದ ನೂತನ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸಂಸದ ರಾಘವೇಂದ್ರರ ಪರಿಶ್ರಮದಿಂದ ಪೂರ್ಣಗೊಂಡಿರುವ ಶಿವಮೊಗ್ಗದ ವಿಮಾನ ನಿಲ್ದಾಣದ ಉದ್ಘಾಟನೆ ಹಾಗೂ ಶಿಕಾರಿಪುರ ಮಾರ್ಗದ ರೈಲ್ವೆ ಸಂಪರ್ಕದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿ 2 ತಿಂಗಳೊಳಗಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸಚಿವ ಅಶ್ವತ್ಥ್ ನಾರಾಯಣ ಮಾದರಿ ಪ್ರತಿನಿಧಿ: ಬಿ.ಎಸ್‌.ಯಡಿಯೂರಪ್ಪ

ಸಂಸದ ರಾಘವೇಂದ್ರ ಮಾತನಾಡಿ, ರಸ್ತೆ, ರೈಲ್ವೆ ಕಾರ್ಯ ಸಹಿತ ಅಭಿವೃದ್ಧಿ ನೆಪದಲ್ಲಿ ಮರ-ಗಿಡಗಳು ನೆಲಸಮವಾಗಿವೆ. ಇದ​ಕ್ಕೆ ಪರ್ಯಾಯವಾಗಿ ರಸ್ತೆ ಇಕ್ಕೆಲಗಳಲ್ಲಿ ಗಿಡ, ಸಸಿ ನೆಡುವ ಕಾರ್ಯವಾಗುತ್ತಿದೆ. ಮರವೊಂದು ನೂರಾರು ಜನಕ್ಕೆ ಆಮ್ಲಜನಕ ನೀಡಲಿದೆ. ಈ ಬಗ್ಗೆ ಅರಿವಿಲ್ಲದೇ ರಸ್ತೆ ಅಕ್ಕಪಕ್ಕದ ಹೊಲದವರು ಮರ ಕಡಿಯುತ್ತಿದ್ದಾರೆ. ರೋಟರಿ, ಲಯನ್ಸ್‌ ಕ್ಲಬ್‌ ಸಹಿತ ಸ್ಥಳೀಯ ಸುಗಂಧ ಬಳಗದವರು ವೃಕ್ಷೋದ್ಯಾನವನ್ನು ದತ್ತುಪಡೆದು ನಿರ್ವಹಣೆಯ ಉಸ್ತುವಾರಿಯನ್ನು ವಹಿಸಿಕೊಂಡು, ಸೌಂದರ್ಯಕ್ಕೆ ಧಕ್ಕೆಯಾಗದಂತೆ ಜಾಗ್ರತೆ ವಹಿಸಲು ಸೂಚಿಸಿದರು.