ಮುಂದಿನ 75 ದಿನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಹೋರಾಟ: ಸುರ್ಜೇವಾಲ  ಖರ್ಗೆ ನೇತೃತ್ವದಲ್ಲಿ ಚುನಾವಣಾ ರೋಡ್‌ ಮ್ಯಾಪ್‌ ಚರ್ಚೆ  ಶೇ.40 ಕಮಿಷನ್‌ ಕುರಿತು ಧ್ವನಿ ಎತ್ತಲು ಕ್ರಮ: ಸುರ್ಜೇವಾಲ

ನವದೆಹಲಿ (ಡಿ.13) : ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಹೋರಾಟ ರೂಪಿಸಲಾಗುವುದು, ಮುಂದಿನ 75 ದಿನಗಳಲ್ಲಿ ಬೊಮ್ಮಾಯಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರವನ್ನು ಎತ್ತಿ ತೋರಿಸುವ, ಪಕ್ಷ ಸಂಘಟನೆಯನ್ನು ಇನ್ನಷ್ಟುಬಲಪಡಿಸುವ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೋಮವಾರ ನಡೆದ ಕರ್ನಾಟಕ ಕಾಂಗ್ರೆಸ್‌ ಪ್ರಮುಖರ ಸಭೆಯ ಬಳಿಕ ಮಾತನಾಡಿದ ಅವರು, ಚುನಾವಣಾ ರೋಡ್‌ ಮ್ಯಾಪ್‌ ಸಿದ್ಧತೆ ಹೇಗಿರಬೇಕು ಎಂಬ ಬಗ್ಗೆ ಖರ್ಗೆ ನೇತೃತ್ವದಲ್ಲಿ ಸಮಾಲೋಚನೆ ನಡೆಯಿತು ಎಂದು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ: ಸುರ್ಜೇವಾಲಾ

ಬಿಜೆಪಿ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರತರ ಹೋರಾಟ ಮಾಡಲು ನಿರ್ಧರಿಸಲಾಗಿದ್ದು, ರಾಜ್ಯ ಬಿಜೆಪಿ ಸರ್ಕಾರದ ಮೇಲಿರುವ ಶೇ.40ರಷ್ಟುಕಮಿಷನ್‌ ಆರೋಪದ ವಿರುದ್ಧವೂ ಧ್ವನಿ ಎತ್ತುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ರಾಜ್ಯದಿಂದ ಬಿಜೆಪಿ ಆಡಳಿತವನ್ನು ಕಿತ್ತೊಗೆಯಲು ಬೇಕಾದ ಮಾರ್ಗಸೂಚಿಗಳನ್ನು ಸಭೆಯಲ್ಲಿ ಸಿದ್ಧಪಡಿಸಲಾಯಿತು ಎಂದರು.

ಸಾಲು ಸಾಲು ಸಮಾವೇಶ: ಕೃಷ್ಣಾ, ಮಹದಾಯಿ ನದಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುವ ಸಂಬಂಧ ವಿಜಯಪುರದಲ್ಲಿ ಡಿ.30ರಂದು ಬೃಹತ್‌ ರಾರ‍ಯಲಿ, ಹುಬ್ಬಳ್ಳಿಯಲ್ಲಿ ಜ.2ರಂದು ಸಮಾವೇಶ ನಡೆಸಲಾಗುವುದು. ಬಳಿಕ ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟಜಾತಿ, ಪಂಗಡ ಸಮಾವೇಶ ಆಯೋಜಿಸಲಾಗುವುದು ಎಂದು ಸುರ್ಜೇವಾಲ ಇದೇ ವೇಳೆ ಮಾಹಿತಿ ನೀಡಿದರು.

Karnataka Politics: ಕಾಂಗ್ರೆಸಿಗರಿಗೆ ಸುರ್ಜೇವಾಲಾ ಒಗ್ಗಟ್ಟಿನ ಮಂತ್ರ

ನಮ್ಮಲ್ಲಿ ಮುಖ್ಯಮಂತ್ರಿ ಹುದ್ದೆಯಾಗಿ ಯಾವುದೇ ಜಗಳಗಳಿಲ್ಲ, ಕಾಂಗ್ರೆಸ್‌ ಅಧಿಕಾರಕ್ಕೆ ತರುವುದಷ್ಟೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ ಅವರು, ಕರ್ನಾಟಕದಲ್ಲಿ ಎಲ್ಲಾ ಮುಖಂಡರು ಒಂದಾಗಿ ಚುನಾವಣೆ ಎದುರಿಸುತ್ತೇವೆ. ಜಿಲ್ಲಾ ಕೇಂದ್ರಗಳಲ್ಲೂ ಕಾಂಗ್ರೆಸ್‌ ನಾಯಕರ ಒಗ್ಗಟಿನ ಮಂತ್ರ ನಡೆಸಲಿದ್ದೇವೆ ಎಂದರು.