ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಕೋಲಾರದಿಂದ ವಿಧಾನಸಭೆಗೆ ಸ್ಪರ್ಧಿಸುವ ನಿರ್ಧಾರದಿಂದ ಸಿದ್ದರಾಮಯ್ಯ ಹಿಂದೆ ಸರಿಯಲಿದ್ದಾರೆಂಬ ಸುದ್ದಿ ಹಬ್ಬಿದ ಬೆನ್ನಲ್ಲೇ ಮಂಗಳವಾರ ನಗರದ ಅವರ ನಿವಾಸದ ಮುಂದೆ ಕ್ಷೇತ್ರದ ಸಾಕಷ್ಟುಸಂಖ್ಯೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಜಮಾಯಿಸಿ ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಧರಣಿ ನಡೆಸಿದರು. 

ಬೆಂಗಳೂರು (ಮಾ.22): ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಕೋಲಾರದಿಂದ ವಿಧಾನಸಭೆಗೆ ಸ್ಪರ್ಧಿಸುವ ನಿರ್ಧಾರದಿಂದ ಸಿದ್ದರಾಮಯ್ಯ ಹಿಂದೆ ಸರಿಯಲಿದ್ದಾರೆಂಬ ಸುದ್ದಿ ಹಬ್ಬಿದ ಬೆನ್ನಲ್ಲೇ ಮಂಗಳವಾರ ನಗರದ ಅವರ ನಿವಾಸದ ಮುಂದೆ ಕ್ಷೇತ್ರದ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಜಮಾಯಿಸಿ ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಧರಣಿ ನಡೆಸಿದರು. ಅಷ್ಟೇ ಅಲ್ಲ, ಕೊಟ್ಟ ಮಾತಿನಂತೆ ಕೋಲಾರದಿಂದ ಸ್ಪರ್ಧಿಸಬೇಕೆಂದು ಆಗ್ರಹಿಸಿ ಕೆಲ ಕಾರ್ಯಕರ್ತರು ಬಾರುಕೋಲಿನಿಂದ ಹೊಡೆದು ಕೊಂಡರಲ್ಲದೆ, ತಮ್ಮ ನಿರ್ಧಾರ ಬದಲಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದರು. ಪಕ್ಷದ ಕೆಲ ಮುಖಂಡರ ಮನವೊಲಿಸುವ ಪ್ರಯತ್ನವೂ ವಿಫಲವಾಯಿತು. ಕೊನೆಗೆ ಅಭಿಮಾನಿಗಳನ್ನು ಸಮಾಧಾನಪಡಿಸಲು ಸಿದ್ದರಾಮಯ್ಯನವರೇ ಆಗಮಿಸಿ ಹರಸಾಹಸ ಪಡಬೇಕಾಯಿತು.

Add Asianetnews Kannada as a Preferred SourcegooglePreferred

ಮಂಗಳವಾರ ನಗರದ ಗಾಂಧಿ ಭವನ ರಸ್ತೆಯಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದ ಮುಂದೆ ಕೆಲ ಹೊತ್ತು ದೊಡ್ಡ ಹೈಡ್ರಾಮವೇ ನಡೆಯಿತು. ಕೋಲಾರ ಜಿಲ್ಲೆಯಿಂದ ಆಗಮಿಸಿದ್ದ ಬಹಳಷ್ಟುಸಂಖ್ಯೆಯ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದರು. ಕೊನೆಗೆ ಬೆಂಬಲಿಗರನ್ನು ಕೊಂಚ ಗದರಿಸಿ ಸುಮ್ಮನಿರಿಸಿದ ಸಿದ್ದರಾಮಯ್ಯ ಅವರು, ‘ನೋಡ್ರಪ್ಪ ಕೋಲಾರದಿಂದ ಸ್ಪರ್ಧಿಸಬೇಡಿ ಎಂದು ಹೈಕಮಾಂಡ್‌ ನನಗೆ ಹೇಳಿಲ್ಲ, ರಿಸ್‌್ಕ ತೆಗೆದುಕೊಳ್ಳಬೇಡಿ ರಾಜ್ಯಾದ್ಯಂತ ನೀವು ಪ್ರವಾಸ ಮಾಡಬೇಕು ಎಂದು ಹೇಳಿದೆ. ನೀವು ಪ್ರತಿಭಟನೆ ಮಾಡಬೇಡಿ ಸಮಾಧಾನವಾಗಿ ಹೋಗಿ, ನಾನು ನನ್ನ ಕುಟುಂಬದ ಜತೆ ಚರ್ಚಿಸಿ ನಿಮಗೆಲ್ಲರಿಗೂ ಹೇಳುತ್ತೇನೆ’ ಎಂದು ಅಭಿಮಾನಿಗಳಲ್ಲಿ ಕೈ ಮುಗಿದು ಕೇಳಿಕೊಂಡರು. ಬಳಿಕ ಕೊಂಚ ತಣ್ಣಗಾದ ಅಭಿಮಾನಿಗಳು ಧರಣಿ ನಿಲ್ಲಿಸಿ ಊರಿನತ್ತ ಪ್ರಯಾಣ ಬೆಳೆಸಿದರು.

ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಯಾರು?: ಬಿಜೆಪಿಗೆ ಟಕ್ಕರ್‌ ಕೊಡುತ್ತಾ ಕಾಂಗ್ರೆಸ್‌

‘ರಕ್ತ ಕೊಟ್ಟೇವು ಸಿದ್ದರಾಮಯ್ಯರನ್ನು ಬಿಡವು, ಕೋಲಾರ ನಮ್ಮೂರು-ಸಿದ್ದರಾಮಯ್ಯ ನಮ್ಮೋರು’ ಹೀಗೆ ಹಲವು ಘೋಷಣೆಗಳ ಪೋಸ್ಟರ್‌ ಹಿಡಿದು ತಮ್ಮ ಆಗ್ರಹ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರನ್ನು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರುವ ಹೊಣೆ ನಮ್ಮದು. ಅವರು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಿದ್ದಾರೆ, ಕೋಲಾರಕ್ಕೆ ಕೆ.ಸಿ.ವ್ಯಾಲಿ ನೀರು ಹರಿಸಿ ಅಂತರ್ಜಲ ವೃದ್ಧಿಗೆ ಕಾರಣರಾಗಿದ್ದಾರೆ. ಅವರ ಸ್ಪರ್ಧಿಯಿಂದ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಯಾವುದೇ ಕಾರಣಕ್ಕೂ ಅವರು ಹಿಂದೆ ಸರಿಯಬಾರದು ಎಂದು ಆಗ್ರಹಿಸಿದರು.

ದೇಶದ ಆದರ್ಶ ರಾಜಕಾರಣಿ ಎಸ್‌.ಎಂ.ಕೃಷ್ಣ: ಎಂಎಲ್‌ಸಿ ದಿನೇಶ್‌ ಗೂಳಿಗೌಡ

ಆತ್ಮಹತ್ಯೆ ಬೆದರಿಕೆ!: ಈ ವೇಳೆ ಕೆಲ ಕಾರ್ಯಕರ್ತರು ಬಾರುಕೋಲಿನಿಂದ ಹೊಡೆದುಕೊಂಡರೆ, ಇನ್ನು ಕೆಲವರು ಸಿದ್ದರಾಮಯ್ಯ ಅವರು ನಿರ್ಧಾರ ಬದಲಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದರು. ಈ ವೇಳೆ ವಿ.ಆರ್‌.ಸುದರ್ಶನ್‌ ಸೇರಿದಂತೆ ಜಿಲ್ಲೆಯ ಕೆಲ ಮುಖಂಡರು ಸಮಾಧಾನ ಪಡಿಸಲು ನಡೆಸಿದ ಪ್ರಯತ್ನ ವಿಫಲವಾಯಿತು. ‘ಸಿದ್ದರಾಮಯ್ಯ ಅವರೇ ಬಂದು ನಮ್ಮ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರ ಬದಲಿಸುವುದಿಲ್ಲವೆಂದು ಹೇಳಬೇಕು’ ಎಂದು ಪಟ್ಟು ಹಿಡಿದರು. ಕೊನೆಗೆ ಸಿದ್ದರಾಮಯ್ಯ ಅವರೇ ನಿವಾಸದಿಂದ ಹೊರಗೆ ಬಂದರೂ ಕಾರ್ಯಕರ್ತರಿಂದ ಬರುತ್ತಿದ್ದ ಒಂದೇ ಆಗ್ರಹ, ‘ಕೋಲಾರದಿಂದಲೇ ನೀವು ಸ್ಪರ್ಧಿಸಬೇಕು’ ಎಂಬುದಾಗಿತ್ತು.