ಕಾಂಗ್ರೆಸ್ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮಗೆ ಮತ ಕೊಡುವ ಸಮಾಜ ವಿದ್ರೋಹಿಗಳನ್ನು ಕ್ಷಮಿಸುವ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಖಾರವಾಗಿ ಪ್ರಶ್ನಿಸಿದ್ದಾರೆ. 

ಬೆಂಗಳೂರು (ಅ.07): ಕಾಂಗ್ರೆಸ್ ಸರ್ಕಾರ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಮಗೆ ಮತ ಕೊಡುವ ಸಮಾಜ ವಿದ್ರೋಹಿಗಳನ್ನು ಕ್ಷಮಿಸುವ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಖಾರವಾಗಿ ಪ್ರಶ್ನಿಸಿದ್ದಾರೆ. ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಮುಸ್ಲಿಮರು ಕೆಟ್ಟವರೆಂದು ನಾನು ಹೇಳುತ್ತಿಲ್ಲ. ಎಲ್ಲ ಹಿಂದೂಗಳು ಒಳ್ಳೆಯವರೆಂದು ಹೇಳುವುದಿಲ್ಲ. ಆದರೆ, ಹಿಂದೂ-ಮುಸ್ಲಿಮರ ನಡುವಿನ ಅಂತರ ಜಾಸ್ತಿಯಾಗಲು ಇದೆಲ್ಲಾ ಕಾರಣವಾಗಬಾರದು. ರಾಗಿಗುಡ್ಡದಲ್ಲಿ ಹಿಂದೂ ಕುಟುಂಬಗಳನ್ನು ಹುಡುಕಿ ಹುಡುಕಿ ಹಲ್ಲೆ ಮಾಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಂದೂಗಳ ವಾಹನಗಳನ್ನು ಮಾತ್ರ ಹಾನಿಗೀಡು ಮಾಡಲಾಗಿದ್ದು, ಪಕ್ಕದಲ್ಲಿಯೇ ಇದ್ದ ಮುಸ್ಲಿಮರ ವಾಹನಗಳಿಗೆ ಏನೂ ಮಾಡಿಲ್ಲ. ಇದು ಏನನ್ನು ತೋರಿಸುತ್ತದೆ? ಸರ್ಕಾರ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಹರಿಹಾಯ್ದರು. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಬಿಜೆಪಿ ಮುಖಂಡರೆಲ್ಲಾ ಶಿವಮೊಗ್ಗದ ಗಲಭೆ ಘಟನೆ ವೀಕ್ಷಿಸಲು ತೆರಳಿದ್ದೆವು. ವಾಸ್ತವಾಂಶದ ಕುರಿತು ಮಾಹಿತಿ ಕಲೆಹಾಕಲು ಹೋಗಿದ್ದೆವು. ಪ್ರಚೋದನೆಗೆ ಆಸ್ಪದ ನೀಡುವ ಚಿತ್ರಗಳನ್ನು ಹಾಕಲಾಗಿತ್ತು. ಅದಕ್ಕೆ ಆಸ್ಪದ ನೀಡಬಾರದಿತ್ತು. ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯವೂ ಇರಲಿಲ್ಲ. 

ಮಳೆ-ಬೆಳೆ ಇಲ್ಲ, ಪರಿಹಾರ ಕೊಡದೆ ಇದ್ದ ವಿಷವೇ ಗತಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನ

ಕಲ್ಲೆಸೆತದಿಂದ ಗಾಯಗೊಂಡವರು, ಅಮಾಯಕ ಹಿಂದೂಗಳನ್ನು ಕರೆದೊಯ್ದು ಪ್ರಕರಣ ದಾಖಲಿಸಲಾಗಿದೆ. ಸರ್ಕಾರವು ಹಿಂದೂ-ಮುಸ್ಲಿಮರನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಗಲಭೆಯಾದ ಸ್ಥಳಕ್ಕೆ ಗೃಹ ಸಚಿವರು ತೆರಳಿ ಜನರಲ್ಲಿ ವಿಶ್ವಾಸ ಮೂಡಿಸಬೇಕಿತ್ತು. ಆದರೆ ಅಂತಹ ಕೆಲಸ ಮಾಡಲಿಲ್ಲ. ಸರ್ಕಾರವು ಶಾಂತಿ ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಶಿವಮೊಗ್ಗ ಗಲಭೆ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಯನ್ನು ಗಮನಿಸಿದ್ದೇವೆ. 

ನಾವು ಹಿಂದೂಗಳು ಭಾರತಾಂಬೆ ಮಕ್ಕಳು: ರಾಮಲಿಂಗಾರೆಡ್ಡಿಗೆ ಈಶ್ವರಪ್ಪ ಹೇಳಿದ್ದೇನು?

ಯಾರು ಸಮಾಜವನ್ನು ಒಡೆಯುತ್ತಾರೆ ಅಂತಹವರ ಪರವಾಗಿ ಅವರು ಇದ್ದಾರೆ ಎಂಬುದು ಗೊತ್ತಾಗುತ್ತದೆ. ಗೃಹ ಸಚಿವನಾಗಿದ್ದ ವೇಳೆ ಹಳೇ ಹುಬ್ಬಳ್ಳಿಯಲ್ಲಿ ಕಾನೂನು ಕೈಗೆ ತೆಗೆದುಕೊಂಡ ಘಟನೆ ನಡೆದಿತ್ತು. ಈ ವೇಳೆ ಪೊಲೀಸರು ಕಾನೂನು ಕ್ರಮ ಕೈಗೊಂಡರು. ಸ್ವಲ್ಪ ವ್ಯತ್ಯಾಸವಾಗಿದ್ದರೂ ಹಳೇ ಹುಬ್ಬಳ್ಳಿ ಹೊತ್ತಿ ಉರಿಯುತ್ತಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿದ್ದರು. ಅಂತಹ ಆರೋಪಿಗಳ ಮೇಲಿನ ಮೊಕದ್ದಮೆ ವಾಪಸ್‌ ಪಡೆಯಲು ಶಿವಕುಮಾರ್‌ ಹೇಳುತ್ತಾರೆ ಎಂದು ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.