ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಟ್ಟಕುದುರೆಗಳನ್ನೆಲ್ಲಾ ಸಮರ್ಥವಾಗಿ ಏರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.
ವಿಧಾನಸಭೆ (ಜು.07): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಟ್ಟಕುದುರೆಗಳನ್ನೆಲ್ಲಾ ಸಮರ್ಥವಾಗಿ ಏರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ. ನೂತನ ಉಪ ಸಭಾಧ್ಯಕ್ಷರ ಆಯ್ಕೆಯ ಬಳಿಕ ಮಾತನಾಡಿದ ಬೊಮ್ಮಾಯಿ ಅವರು ಡಿ.ಕೆ.ಶಿವಕುಮಾರ್ ಅವರ ಕಾಲೆಳೆಯುವ ಜತೆಗೆ ಮೆಚ್ಚುಗೆ ಸೂಚಿಸಿದರು. ಕೊಟ್ಟ ಕುದುರೆ ಏರದವನು ಶೂರ ಅಲ್ಲ ಎನ್ನುವ ಮಾತಿದೆ. ಆದರೆ, ಡಿ.ಕೆ.ಶಿವಕುಮಾರ್ ಅವರು ಕೊಟ್ಟ ಕುದುರೆಗಳನ್ನೆಲ್ಲಾ ಏರಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಮುಂದೆ ಶಿವಕುಮಾರ್ಗೆ ಯಾವ ಕುದುರೆ ಸಿಗುತ್ತದೆ ಎಂಬುದನ್ನು ನೋಡೋಣ ಎಂದರು. ಈ ಹಿಂದೆ ಅವರು ಪವರ್ ಖಾತೆ ತೆಗೆದುಕೊಂಡಿದ್ದರು. ಪವರ್ ಖಾತೆಯ ಜತೆಗೆ ಪವರ್ ಪಾಲಿಟಿಕ್ಸ್ ಸಹ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸವಾಲು ಎದುರಿಸಿದವ ನಾಯಕ: ಸವಾಲನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದ್ದು, ಸವಾಲನ್ನು ಎದುರಿಸುವವರು ನಾಯಕರಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾಜದ ನೂತನ ಶಾಸಕರು ಹಾಗೂ ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜಕಾರಣಿಗಳಿಗೆ ಹಲವಾರು ಸವಾಲುಗಳಿವೆ. ಕೇವಲ ಚುನಾವಣೆ ಒಂದೆ ಸವಾಲು ಎಂದು ಪರಿಗಣಿಸಬೇಕಿಲ್ಲ. ಆದರೆ ಅವನ್ನು ಎದುರಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕೆ ಇದೆ.
ಬಜೆಟ್ನಲ್ಲಿ ಜನರಿಗೆ ತೆರಿಗೆ ಬರೆ ಬೇಡ: ಮಾಜಿ ಸಿಎಂ ಬೊಮ್ಮಾಯಿ
ನಾವು ವಿಶ್ವಗುರು ಬಸವಣ್ಣನವರ ಅವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಬೇಕು. ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಅನ್ಯರಿಗೆ ಅಸಹ್ಯ ಪಡಬೇಡ ಅನ್ನುವುದನ್ನು ಪಾಲಿಸಿದರೆ ಸಾಕು ಎಂದರು. ನಮಗೆ ಚರಿತ್ರೆ ಇದೆ, ಚಾರಿತ್ರ್ಯ ಬೇಕಿದೆ. ಆಚಾರ್ಯರಿದ್ದಾರೆ ಆಚರಣೆ ಬೇಕಿದೆ. ಚಾರಿತ್ರ್ಯ ಪರಮಪೂಜ್ಯರ ಆಶೀರ್ವಾದದಿಂದ ದೊರೆಯುತ್ತದೆ. ಕೊಳ್ಳೆಗಾಲದಿಂದ ಹಿಡಿದು ಬೀದರ್ವರೆಗೂ ನಮ್ಮ ಸಮಾಜ ಸಾವಿರಾರು ವರ್ಷಗಳಿಂದ ಮಠಗಳು ಶಿಕ್ಷಣ, ದಾಸೋಹ ಮಾಡಿಕೊಂಡು ಬಂದಿವೆ. ಸರ್ಕಾರ ಇಲ್ಲದ ಸಂದರ್ಭದಲ್ಲಿ ಶಿಕ್ಷಣ ನೀಡುತ್ತ ಬಂದಿವೆ. ಒಗ್ಗಟ್ಟಿನಲ್ಲಿ ಬಲ ಇದೆ. ರಾಜಕೀಯ ಮೀರಿ ಒಗ್ಗಟ್ಟಾದರೆ ನಮ್ಮ ಮುಂದಿನ ಪೀಳಿಗೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಹೇಳಿದರು.
ಸಾರಿಗೆ ನೌಕರನ ಆತ್ಮಹತ್ಯೆ ಯತ್ನ: ಚೆಲುವರಾಯಸ್ವಾಮಿ, ಎಚ್ಡಿಕೆ, ಸಿದ್ದು ಮಾತಿನ ಚಕಮಕಿ, ಕೋಲಾಹಲ
ಚುನಾವಣೆಯ ನಂತರ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನೆ ಮಾಡುವುದು ಸಂಪ್ರದಾಯ. ಇದು ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಅವರ ಸಾನ್ನಿಧ್ಯದಲ್ಲಿ ಸನ್ಮಾನ ಸ್ವೀಕರಿಸಿದಲ್ಲಿ ಶ್ರೀಗಳ ಹಾಗೂ ಸಮಾಜದ ರಕ್ಷಾ ಕವಚ ನಮ್ಮ ಮೇಲಿರುತ್ತದೆ. ಜೊತೆಗೆ ಜವಾಬ್ದಾರಿಯ ಮಾಲೆ ಧರಿಸಿದಂತಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸೇರಿ ಅನೇಕ ಮಠಾಧೀಶರು, ಸುಪ್ರೀಂ ಕೋರ್ಚ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್, ನೂತನವಾಗಿ ಆಯ್ಕೆಯಾದ ವೀರಶೈವ ಲಿಂಗಾಯತ ಸಮುದಾಯದ ಸಚಿವರು ಹಾಗೂ ಶಾಸಕರಿದ್ದರು.
