ಗ್ಯಾರಂಟಿಗೆ ಲಂಚ ಕೊಡಬೇಡಿ, ಯಾರಾದರೂ ಕೇಳಿದರೆ ನನಗೇ ದೂರಿ, ಒದ್ದು ಒಳಗೆ ಹಾಕುತ್ತೇವೆ: ಡಿಕೆಶಿ
‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿ ಮಾಡುತ್ತಿರುವ ಗ್ಯಾರಂಟಿ ಯೋಜನೆ ಜಾರಿಗೆ ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ದೂರು ನೀಡಬಹುದು. ಅಂತಹವರನ್ನು ಒದ್ದು ಒಳಗೆ ಹಾಕುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಹಾರೋಹಳ್ಳಿ/ಕನಕಪುರ (ಜೂ.04): ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಾರಿ ಮಾಡುತ್ತಿರುವ ಗ್ಯಾರಂಟಿ ಯೋಜನೆ ಜಾರಿಗೆ ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ದೂರು ನೀಡಬಹುದು. ಅಂತಹವರನ್ನು ಒದ್ದು ಒಳಗೆ ಹಾಕುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಇಡೀ ದಿನ ಸ್ವಕ್ಷೇತ್ರದಲ್ಲಿ ಕಾಲ ಕಳೆದ ಡಿಕೆಶಿ, ಕನಕಪುರ ಕ್ಷೇತ್ರವ್ಯಾಪ್ತಿಯ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮತದಾರರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ಇಡೀ ದೇಶ ಎದುರು ನೋಡುತ್ತಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಈ ಯೋಜನೆಗಳ ಫಲಾನುಭವಿಯಾಗಲು ಯಾರೂ ಲಂಚ ಕೊಡಬೇಕಾಗಿಲ್ಲ ಎಂದರು.
ಕನಕಪುರಕ್ಕೆ ಮೆಡಿಕಲ್ ಕಾಲೇಜು: ಕನಕಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಈ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಕನಕಪುರಕ್ಕೆ ಆದ ಅನ್ಯಾಯ ಸರಿಪಡಿಸುವುದು ನನ್ನ ಮೊದಲ ಕೆಲಸ. ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಬಳಿ ಪ್ರಸ್ತಾಪ ಮಾಡಿದ್ದೇನೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಿ ಕ್ಷೇತ್ರದ ಜನತೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ ಎಂದು ಭರವಸೆ ನೀಡಿದರು.
ಹೃದಯ ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ ಬೆಳವಣಿಗೆ: ಡಾ.ಸಿ.ಎನ್.ಮಂಜುನಾಥ್
ಡಿಕೆಶಿಗೆ ತವರಲ್ಲಿ ಅದ್ದೂರಿ ಸ್ವಾಗತ: ಶನಿವಾರ ಇಡೀ ದಿನ ಸ್ವಕ್ಷೇತ್ರದಲ್ಲಿ ಕಾಲ ಕಳೆದ ಡಿಕೆಶಿಯವರು, ತಾಲೂಕಿನ ಹಾರೋಹಳ್ಳಿ, ಕಬ್ಬಾಳು, ಕಲ್ಲಹಳ್ಳಿ, ಶಿವನಹಳ್ಳಿ, ಸಾತನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ ಹಾಗೂ ಕನಕಪುರ ನಗರ ಸೇರಿದಂತೆ ಕನಕಪುರ ಕ್ಷೇತ್ರವ್ಯಾಪ್ತಿಯ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಬೆಳಗ್ಗೆ ಕಬ್ಬಾಳಿನಲ್ಲಿರುವ ಕಬ್ಬಾಳಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆ, ಡಿಕೆಶಿಗೆ ಬೃಹತ್ ಕೊಬ್ಬರಿ ಹಾರ ಹಾಕಿ, ಜನಪದ ಕಲಾತಂಡಗಳ ಮೂಲಕ ಸ್ವಾಗತ ಕೋರಲಾಯಿತು. ಕಲ್ಲಹಳ್ಳಿಯಲ್ಲಿ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. ಗ್ರಾಮಸ್ಥರು ಬೃಹತ್ ಸೇಬಿನ ಹಾರ ಹಾಕಿ, ಬರಮಾಡಿಕೊಂಡರು.
ಬಳಿಕ, ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಚಿಕ್ಕತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಲ್ಲಹಳ್ಳಿಯ ಶ್ರೀನಿವಾಸ ದೇವಾಲಯದಲ್ಲಿ ಅವರು ಪೂಜೆ ಸಲ್ಲಿಸಿದರು. ನಂತರ, ಕನಕಪುರಲ್ಲಿನ ಸ್ವಾತಂತ್ರ್ಯ ಹೋರಾಟಗಾರರಾದ ಎಸ್.ಕರಿಯಪ್ಪ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಐದು ಉಚಿತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ನವರ ದು:ಖ, ದುಗುಡ ಹೆಚ್ಚಾಗಿದೆ. ಬಿಜೆಪಿ ಮತ್ತು ಜೆಡಿಎಸ್ನವರು ಇಂತಹ ಕಾರ್ಯಕ್ರಮಗಳನ್ನು ನೀಡಲಿಲ್ಲ. ಮೋದಿಯವರು ಹೇಳಿದಂತೆ ಜನರ ಖಾತೆಗೆ 15 ಲಕ್ಷ ಬರಲಿಲ್ಲ, ರೈತರ ಸಾಲಮನ್ನಾ ಆಗಲಿಲ್ಲ. ಜನರಿಗೆ ಅಚ್ಛೇ ದಿನ್ ಬರಲೇ ಇಲ್ಲ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಕಿಡಿಕಾರಿದರು.
ಹೆಣ್ಣುಮಕ್ಕಳಿಗೆ ‘ಗೃಹಲಕ್ಷ್ಮೇ’ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ಕೊಡುತ್ತೇವೆ. ಆದರೆ, ಮನೆಯ ಯಜಮಾನಿ ಯಾರು ಅಂತ ಕುಟುಂಬದವರೇ ತೀರ್ಮಾನ ಮಾಡಿಕೊಳ್ಳಬೇಕು. ಅತ್ತೆ-ಸೊಸೆ ಯಾರೂ ಜಗಳ ಮಾಡಿಕೊಳ್ಳಬಾರದು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗಲಿದೆ. ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯಲ್ಲಿ 3 ಸಾವಿರ ಕೊಡುತ್ತೇವೆ. ಜೂನ್ 11ರಿಂದ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸಿಗಲಿದೆ.
ಸಂಸತ್ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್.ವಿಶ್ವನಾಥ್ ಆರೋಪ
ಹೆಣ್ಣು ಮಕ್ಕಳು ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಿ ಬರಬಹುದು. ಆದರೆ, ಕೆಎಸ್ಆರ್ಟಿಸಿ ನಡೆಯಬೇಕಲ್ಲ. ಆದ್ದರಿಂದ ಗಂಡಸರು ಮಾತ್ರ ಟಿಕೆಟ್ ಪಡೆದು ಪ್ರಯಾಣ ಮಾಡಬೇಕು ಎಂದು ಹೇಳಿದರು. ಈಗ ನಾನು ಮತ್ತು ಸಿದ್ದರಾಮಯ್ಯ, ಸಚಿವ ಸಂಪುಟದ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ. ಕನಕಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಬಂಧ ನಾನು ಹಾಗೂ ಸುರೇಶ್ ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾನು ಕ್ಷೇತ್ರದ ಎಲ್ಲ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ, ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ.