ಡಿ.ಕೆ. ಸುರೇಶ್‌ಗೆ ಕೈ ಪಾಳಯದಲ್ಲಿ ಮಹತ್ವದ ಹುದ್ದೆ  ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ   ಕಾಂಗ್ರೆಸ್‌ ಸಂಸದೀಯ ಪಕ್ಷದ ಪದಾಧಿಕಾರಿಗಳನ್ನು ನೇಮಕ 

ನವದೆಹಲಿ (ಡಿ.21): ಕಾಂಗ್ರೆಸ್‌ (Congress) ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಸೋಮವಾರ ಕಾಂಗ್ರೆಸ್‌ (Congress) ಸಂಸದೀಯ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಇವರಲ್ಲಿ ಕರ್ನಾಟಕದ (Karnataka) ಇಬ್ಬರು ಸ್ಥಾನ ಪಡೆದುಕೊಂಡಿದ್ದಾರೆ. ಡಿ.ಕೆ. ಸುರೇಶ್‌ (Dk Suresh) ಅವರನ್ನು ಸಂಸದೀಯ ಪಕ್ಷದ ಖಜಾಂಚಿಯಾಗಿ ಹಾಗೂ ಜಿ.ಸಿ. ಚಂದ್ರಶೇಖರ್‌ ಅವರನ್ನು ಕಾರ್ಯನಿರ್ವಾಹಕ ಕಮಿಟಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.

ಕಾಂಗ್ರೆಸ್‌ನ (Congress) ಸಂಸದರಾದ ಸಂತೋಖ್‌ ಸಿಂಗ್‌ ಚೌಧರಿ, ಎಂ.ಕೆ. ರಾಘವನ್‌ ಮತ್ತು ಅಮೀ ಯಾಜ್ಞಿಕ್‌ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ದೀಪಿಂದರ್‌ ಸಿಂಗ್‌ ಹೂಡಾ, ಗುರ್ಜೀತ್‌ ಸಿಂಗ್‌ ಔಜ್ಲಾ, ಪ್ರದ್ಯುತ್‌ ಬೋರ್ಡೋಯ್‌, ಪ್ರತಿಭಾ ಸಿಂಗ್‌, ಕಾರ್ತಿ ಚಿದಂಬರಂ ಮತ್ತು ನಕುಲ್‌ ನಾಥ್‌, ಗೀತಾ ಕೋಡಾ ಮುಂತಾದವರನ್ನು ಕಾರ್ಯನಿರ್ವಾಹಕ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಡಿಕೆ ಬ್ರದರ್ಸ್ ಮಾಸ್ಟರ್ ಪ್ಲಾನ್ : 

ಮುಂದಿನ ದಿನಗಳಲ್ಲಿ ರಾಮನಗರ (Ramanagar) ವಿಧಾನಸಭಾ ಕ್ಷೇತ್ರವನ್ನು (Assembly Constituency) ಕೈ ವಶ ಮಾಡಿಕೊಳ್ಳುವುದೇ ನಮ್ಮ ಗುರಿಯಾಗಿದೆ ಎಂದು ನೂತನ ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ (S Ravi) ತಿಳಿಸಿದರು. ತಾಲೂಕಿನ ಹಾರೋಹಳ್ಳಿಯ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಕ್ಷದ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾನು ಮೂರನೇ ಬಾರಿ ಗೆಲುವು ಸಾಧಿಸಲು ಕಾರ್ಯಕರ್ತರು, ಮುಖಂಡರು ಒಮ್ಮತದಿಂದ ಕೆಲಸ ಮಾಡಿ ನನಗೆ ಗೆಲುವು ತಂದು ಕೊಟ್ಟೀದ್ದೀರಿ. ಇದೇ ಹುರುಪಿನಿಂದ ನಾವುಗಳು ಕೆಲಸ ಮಾಡಿ ರಾಮನಗರ (Ramanagar) ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್‌ (Congress) ತೆಕ್ಕೆಗೆ ತೆಗೆದುಕೊಳ್ಳಲು ಇಂದಿನಿಂದಲೇ ತಯಾರಿ ನಡೆಸಬೇಕು ಎಂದು ಕರೆ ನೀಡಿದರು.

ನಾಯಕರಾದ ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ಡಿ.ಕೆ.ಸುರೇಶ್‌ (DK Suresh) ಅವರ ನೇತೃತ್ವದಲ್ಲಿ ಜೆಡಿಎಸ್‌ (JDS) ಪಕ್ಷವನ್ನು ಜಿಲ್ಲೆಯಲ್ಲಿ ನಿರ್ನಾಮ ಮಾಡುವುದೇ ನಮ್ಮ ದೃಢ ನಿರ್ಧಾರವಾಗಿದೆ. ಕುಮಾರಸ್ವಾಮಿ (Kumaraswamy) ಅವರನ್ನು ಹಾಸನಕ್ಕೆ ನಮ್ಮ ಜಿಲ್ಲೆಯಿಂದ ಓಡಿಸುವ ಕೆಲಸವನ್ನು ನಾವು ಮಾಡಬೇಕಿದೆ. ಈಗ ತೋರಿಸಿದ ಒಗ್ಗಟ್ಟನ್ನು ಮುಂದಿನ ದಿನಗಳಲ್ಲಿ ಪ್ರದರ್ಶಿಸಿಸುವುದರ ಜೊತೆಗೆ ನಮ್ಮ ಪಕ್ಷಕ್ಕೆ ಯಾರು ಬಂದರೂ ಸ್ವಾಗತಿಸಿ ಬಲಪಡಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಬಮುಲ್ (Bamul) ನಿರ್ದೇಶಕ ಎಚ್‌.ಎಸ್‌.ಹರೀಶ್‌ ಕುಮಾರ್‌, ಜಿಲ್ಲಾ ಕಾಂಗ್ರೆಸ್‌ (Congress) ಉಪಾಧ್ಯಕ್ಷ ಜಗದೀಶಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆಸಿಬಿ ಅಶೋಕ, ಹಿರಿಯ ಮುಖಂಡ ಕೀರಣಗೆರೆ ಜಗದೀಶ್‌, ಮೋಹನಹೊಳ್ಳ, ಗ್ರಾಪಂ ಮಾಜಿ ಅಧ್ಯಕ್ಷ ಎನ್‌.ಗುರುಪ್ರಸಾದ್‌, ವಿಎಸ್‌ ಎಸ್‌ ಎನ್‌ ನಿರ್ದೇಶಕ ಎಚ್‌.ಸಿ.ಶೇಖರ್‌ , ಗ್ರಾಪಂ ಮಾಜಿ ಸದಸ್ಯ ಕೋಟೆ ಕುಮಾರ್‌, ಗ್ರಾಪಂ ಮಾಜಿ ಉಪಾಧ್ಯಕ್ಷ ಲೋಕೇಶ್‌ ಮತ್ತಿ​ತ​ರ​ರು​ಹಾ​ಜ​ರಿ​ದ್ದರು.

ಕುಮಾರಸ್ವಾಮಿ ಬೆಂಬಲ ಇಲ್ಲದಿದ್ದರೆ ಡಿಕೆ ಬ್ರದರ್ಸ್ ಗೆಲ್ಲುತ್ತಿರಲಿಲ್ಲ:  ಹಾಲಿ ವಿಧಾನ ಪರಿಷತ್​ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ(BJP) ಮತ್ತು ಜೆಡಿಎಸ್(JDS) ನಡುವೆ ಒಳಒಪ್ಪಂದ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi), ಜೆಡಿಎಸ್ ಬೆಂಬಲ ಇಲ್ಲದಿದ್ದರೆ ಡಿಕೆಶಿ ಸಹೋದರರು (DK Brothers) ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಡಿಕೆಶಿ ಕೂಡ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳದಿದ್ದರೆ ಶಾಸಕರಾಗುತಿರಲಿಲ್ಲ ಎಂದು ಡಿಕೆ ಶಿವಕುಮಾರ್(DK Shivakumar) ವಿರುದ್ಧ ಕಿಡಿಕಾರಿದರು. ಜೆಡಿಎಸ್ ಪಕ್ಷದಲ್ಲಿ ಕೆಲ ಮತ ಇದೆ. ಹೀಗಾಗಿ ಕೇಳಿದ್ದೇವೆ. ಆದರೆ ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಒಪ್ಪಂದ ಆಗಿಲ್ಲ. ಅದಕ್ಕೆ ಬಿಜೆಪಿ ವೀಕ್ ಆಗಿದೆ ಎಂದು ಡಿಕೆಶಿ ಹೇಳಿದ್ದಾರೆ. JDS ಇಲ್ಲದಿದ್ದರೆ ಡಿಕೆಶಿ ಸಹೋದರರು ಗೆಲ್ಲುತ್ತಿರಲಿಲ್ಲ ಎಂದು ಟಾಂಗ್ ಕೊಟ್ಟರು.

ಅವರ ಜೊತೆ ಸಂಬಂಧ ಅಷ್ಟೇ
ಕುಮಾರಸ್ವಾಮಿಯವರನ್ನು ಸಿಎಂ ಮಾಡಿ ಕೊನೆಗೆ ಅವರನ್ನ ಇಳಿಸಿದ್ದು ಯಾರು? ಇಳಿಸಲು ಅವರ ಪಕ್ಷದ ಶಾಸಕರನ್ನು ಕಳುಹಿಸಿದ್ದು ಯಾರು? ಕೂರಿಸಿದ್ದು ಅವರೇ, ಕಾಲು ಎಳೆಯುವ ಕೆಲಸ ಮಾಡಿದ್ದು ಅವರೇ. ನಮ್ದು ಜೆಡಿಎಸ್ ಜೊತೆ ಒಪ್ಪಂದ ಇಲ್ಲ, ಅವರ ಜೊತೆ ಸಂಬಂಧ ಅಷ್ಟೇ ಎಂದು ಶಾಸಕ ಸಿ ಟಿ ರವಿ ಸ್ಪಷ್ಟಪಡಿಸಿದ್ದರು.

ಇದೇ ವೇಳೆ ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಟಿ ರವಿ, ತಾನು ಹೇಗಿರುತ್ತೇನೋ ಉಳಿದವರು ಹಾಗೇ ಇರಬೇಕು, ಸಿದ್ದರಾಮಯ್ಯ ಇರುವಂತೆಯೇ ಉಳಿದವರು ಕಾಣುತ್ತಾರೆ. ಜಗತ್ತಿನ ದೃಷ್ಟಿಯಲ್ಲಿ ಮೋದಿ ಒಬ್ಬ ಅಗ್ರಗಣ್ಯ ನಾಯಕ. ಸಿದ್ದರಾಮಯ್ಯನವರ ಸರ್ಟಿಫಿಕೆಟ್ ನಮಗೆ ಬೇಕಾಗಿಲ್ಲ. ದೇಶ-ವಿದೇಶ ಎಲ್ಲಿ ಹೋದ್ರೂ ಮೋದಿ ಮೋದಿ ಅಂತಾರೆ. ಕರ್ನಾಟಕದ ಆಚೆ ಹೋದ್ರೆ ಸಿದ್ದರಾಮಯ್ಯ ಹೆಸರು ಹೇಳಲ್ಲ. ಸಿದ್ದರಾಮಯ್ಯನ ಹೆಸರೂ ಹೇಳಲ್ಲ, ರಾಹುಲ್ ಗಾಂಧಿ ಹೆಸರು ಹೇಳಲ್ಲ. ಸಿದ್ದರಾಮಯ್ಯ ಹೆಸರು ಪಾಕಿಸ್ತಾನದಲ್ಲಿ ಮಾತ್ರ ಹೇಳಬಹುದು ಎಂದು ವ್ಯಂಗ್ಯವಾಡಿದ್ದರು.