Assembly election: ಡಿಕೆಶಿ ನನ್ನ ಮನೆ ದೇವರು: ಕಾಂಗ್ರೆಸ್ನಿಂದ ತಳ್ಳಿದರೂ ಬಿಟ್ಟು ಹೋಗಲ್ಲ ಎಂದ ಕೆಜಿಎಫ್ ಬಾಬು
ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕಾಗಿ ಎಲ್ಲರ ಕ್ಷಮೆ ಕೇಳುತ್ತೇನೆ.
ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ಕೊಟ್ಟರೂ, ಕೊಡದಿದ್ದರೂ 350 ಕೋಟಿ ರೂ. ಖರ್ಚು ಮಾಡಲು ಬದ್ಧ.
ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್ ಜೊತೆಗೆ ಇರುವುದರಿಂದ ಹೊರಗೆ ತಳ್ಳಿದ್ರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ
ಬೆಂಗಳೂರು (ಜ.10): ನಾನು ಕಳೆದ ಬಾರಿ ಸುದ್ದಿಗೋಷ್ಠಿ ಮಾಡಿದಾಗ ಕಾಂಗ್ರೆಸ್ ಪಕ್ಷದ ಗೆಲುವಿನ ಬಗ್ಗೆ ತಪ್ಪಾಗಿ ಮಾತನಾಡಿದ್ದಕ್ಕಾಗಿ ಎಲ್ಲರ ಕ್ಷಮೆ ಕೇಳುತ್ತೇನೆ. ಆದರೆ, ನನ್ನ ತಾತನ ಕಾಲದಿಂದಲೂ ಕಾಂಗ್ರೆಸ್ ಜೊತೆಗಿರುವ ನಮ್ಮನ್ನು ಪಕ್ಷದಿಂದ ತಳ್ಳಿದರೂ ಹೊರಗೆ ಹೋಗುವುದಿಲ್ಲ. ಡಿ.ಕೆ. ಶಿವಕುಮಾರ್ ನನ್ನ ಮನೆದೇವರು ಇದ್ದ ಹಾಗೆ.. ಅವರು ಹೇಳಿದ ಹಾಗೆ ಕೇಳುತ್ತೇನೆ. ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನನಗೆ ಟಿಕೆಟ್ ಕೊಟ್ಟರೂ, ಕೊಡದಿದ್ದರೂ 350 ಕೋಟಿ ರೂ. ಖರ್ಚು ಮಾಡಲು ಬದ್ಧನಾಗಿದ್ದೇನೆ ಎಂದು ಕೆ.ಜಿ.ಎಫ್ ಬಾಬು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿ ಮತ್ತು ವ್ಯಕ್ತಿಗಳನ್ನು ನೋಡಿ ಟಿಕೆಟ್ ಕೊಟ್ಟರೆ ಕೇವಲ 80 ಸೀಟು ಗೆಲ್ಲುತ್ತದೆ. ಕೆಲವು ಮ್ಯಾನೇಜ್ಮೆಂಟ್ ವ್ಯಕ್ತಿಗಳನ್ನು ಬದಲಾವಣೆ ಮಾಡಿ ಎಂದು ಹೇಳಿದ್ದೆನು. ಆದರೆ, ಶುಕ್ರವಾರ ಕೆಪಿಸಿಸಿ ಕಛೇರಿಯಲ್ಲಿ ಮೀಟಿಂಗ್ ಕರೆದು, ಮಾಧ್ಯಮಗಳಿಗೆ ಹೇಳಿಕೆ ಕೊಡುವಾಗ ಒಂದು ತಪ್ಪು ಮಾಡಿದ್ದೇನೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಕಾಂಗ್ರೆಸ್ ಸಿದ್ದಾಂತ ನಿನಗೆ ಇನ್ನೂ ಗೊತ್ತಿಲ್ಲ. ಅನುಮತಿ ಪಡೆಯದೇ ಮಾಧ್ಯಮಗಳೊಂದಿಗೆ ಮಾತನಾಡಿದ್ದು ತಪ್ಪು ಎಂದು ಹೇಳಿದರು. ಇದೆಲ್ಲಾ ತಪ್ಪು ಆಗಿದ್ರೆ ದಯವಿಟ್ಟು ಕ್ಷಮಿಸಿ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ತೀನಿ. ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ. ನಾನು ಅಂತಾ ದೊಡ್ಡ ಲೀಡರ್ ಅಲ್ಲ. ನನಗೆ ಗೊತ್ತಾಗಲ್ಲ. ದಯವಿಟ್ಟು ನನ್ನ ಕ್ಷಮಿಸಿ, ಅಂತಾ ಈ ಮೂಲಕ ಕೇಳಿಕೊಳ್ತಾ ಇದ್ದೀನಿ. ಸಲೀಂ ಅಹಮದ್ ಅವರಿಗೆ ಏನಾದ್ರೂ ನನ್ನಿಂದ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.
KPCC Suspended KGF Babu: ಕೆಪಿಸಿಸಿ ಕಚೇರಿಯಲ್ಲಿ ಗಲಾಟೆ, ಕೆಜಿಎಫ್ ಬಾಬು ಕಾಂಗ್ರೆಸ್ ನಿಂದ ಅಮಾನತು
ಕಾಂಗ್ರೆಸ್ ತಳ್ಳಿದರೂ ಬಿಟ್ಟು ಹೋಗಲ್ಲ:
ನಾನು, ನಮ್ಮ ತಾತ ಹಾಗೂ ಮುತ್ತಾತನ ಕಾಲದಿಂದಲೂ ನಾವು ಕಾಂಗ್ರೆಸ್ ಜೊತೆಗೆ ಇದ್ದೀವಿ. ಹೀಗಾಗಿ, ಅವರು ತಳ್ಳಿದ್ರೂ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ. ಆದರೆ ನನಗೆ ಬರಾಜಕೀಯ ಹೊಸದಾಗಿದ್ದು, ಗೊತ್ತಿಲ್ಲದೇ ತಪ್ಪು ಮಾಡಿದ್ದೇನೆ. ಹಾಗಾಗಿ, ಈಗ ಕ್ಷಮಿಸಿ ಅಂತಾ ಕೇಳಿ ಕೊಳ್ತಾ ಇದೀನಿ. ಡಿ.ಕೆ. ಶಿವಕುಮಾರ್ ಅವರು ನನ್ನ ಗುರುಗಳು ಇದ್ದ ಹಾಗೆ. ನನಗೆ ಅವರು ಮನೆ ದೇವರು ಇದ್ದ ಹಾಗೆ, ಅವರು ಏನು ಹೇಳ್ತಾರೋ ಅದನ್ನು ಕೇಳುತ್ತೇನೆ. ನೆನ್ನೆ ಡಿಕೆಶಿ ಮನೆಗೆ ನಾನು ಹೋಗಿದ್ದೆ,ನಿನ್ನಿಂದ ನನ್ನ ಹೆಸರ ಹಾಳಾಗ್ತಾ ಇದೆ ಎಂದರು. ಈ ವೇಳೆ ಬಹಳ ನೋವಿನಿಂದ ಮಾತನಾಡಿ, ನಿನ್ನ ತಪ್ಪು ನೀನೇ ಸರಿ ಮಾಡಿಕೋ ಅಂತಾ ಬುದ್ದಿವಾದ ಹೇಳಿದರು ಎಂದು ತಿಳಿಸಿದರು.
ಟಿಕೆಟ್ ಕೊಡದಿದ್ದರೂ ಚಿಕ್ಕಪೇಟೆಗೆ 350 ಕೋಟಿ ಖರ್ಚು ಮಾಡಲು ಬದ್ಧ:
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140 ರಿಂದ 150 ಸೀಟುಗಳನ್ನು ಗೆಲ್ಲಬೇಕು. ಕಾಂಗ್ರೆಸ್ ಗೆಲುವಿಗಾಗಿ ಶ್ರಮಿಸುತ್ತಿರುವ ನಾನು, 350 ಕೋಟಿ ರೂ.ಗಳನ್ನು ಚಿಕ್ಕಪೇಟೆ ಗೆ ಈಗಲೂ ಖರ್ಚು ಮಾಡಲು ಸಿದ್ದನಿದ್ದೇನೆ. ಟಿಕೆಟ್ ಕೊಟ್ಟರೂ, ಕೊಡದಿದ್ದರೂ ನಾನು ಚಿಕ್ಕಪೇಟೆಗೆ ಹಣ ಖರ್ಚು ಮಾಡುವುದಕ್ಕೆ ಬದ್ಧನಾಗಿದ್ದೇನೆ. ನಾನು ಚಿಕ್ಕಪೇಟೆಯಲ್ಲಿ ಹುಟ್ಟಿದ್ದು, ಈ ಕ್ಷೇತ್ರ ಅಭಿವೃದ್ಧಿಗಾಗಿ ಹಣವನ್ನು ಖರ್ಚು ಮಾಡಲಿದ್ದೇನೆ. ಟಿಕೆಟ್ ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ. ಟಿಕೆಟ್ ಕೊಡದಿದ್ದರೆ ನಾನು ಚುನಾವಣೆಗಾಗಿ ಖರ್ಚು ಮಾಡಿಲ್ಲ, ನನ್ನ ಅಕ್ಕ ತಂಗಿಯರಿಗಾಗಿ ನಾನು ಖರ್ಚು ಮಾಡ್ತಾ ಇದ್ದೇನೆ ಎಂದು ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಕೆಜಿಫ್ ಬಾಬು ಅಮಾನತು, ಹಿಂದೂಗಳ ಕೆರಳಿಸಿತು ಸಿದ್ದು ಮಾತು!
ಜಾತಿ ವ್ಯಕ್ತಿ ನೋಡಿ ಟಿಕೆಟ್ ಕೊಡಬೇಡಿ: ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಮುಖಂಡರಲ್ಲಿ ನಾನು ಬೇಡಿಕೊಳ್ಳೋದು ಏನೆಂದರೆ, ಜಾತಿ ನೋಡಿ ವ್ಯಕ್ತಿ ನೋಡಿ ಟಿಕೆಟ್ ಕೊಡಬೇಡಿ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಅನ್ನೋದು ನಮ್ಮ ಆಸೆಯಾಗಿದೆ. ಆದರೆ, ನಾನು ಅವತ್ತು ಮಾತನಾಡಿದ್ದು ಮತ್ತೆ ಹೇಳ್ತೀನಿ. ವ್ಯಕ್ತಿ ನೋಡಿ, ಜಾತಿ ನೋಡಿ ಟಿಕೆಟ್ ಕೊಟ್ರೆ 80 ಸ್ಥಾನ ಬರುತ್ತೆ ಅಂತಾ ಹೇಳಿದ್ದೆ. ಆದರೆ, ಒಂದು ನೋವಿನಿಂದ ನಾನು ಆ ಮಾತು ಹೇಳಿದ್ದೆನು. ಹೆಂಡತಿ, ಮಕ್ಕಳು ಮತ್ತು ಮನೆಯನ್ನು ಬಿಟ್ಟು ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್ ಅವರು ರಾಜ್ಯದಾದ್ಯಂತ ಸುತ್ತಾಡುತ್ತಿದ್ದಾರೆ. ಹೀಗಿರುವಾಗ ಜಾತಿ ನೋಡಿ, ವ್ಯಕ್ತಿ ನೋಡಿ ಟಿಕೆಟ್ ಕೊಟ್ಟರೆ ಕಡಿಮೆ ಸ್ಥಾನ ಬರುತ್ತೆ ಅಂತಾ ನೋವಿನಿಂದ ಹೇಳಿದ್ದೇನೆ ಎಂದರು.