ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ; ಡಿಕೆಶಿ ವಿರುದ್ಧ ಶ್ರೀರಾಮುಲು ವಾಗ್ದಾಳಿ
ಇಡೀ ಸರ್ಕಾರವನ್ನೇ ಡಿಕೆ ಶಿವಕುಮಾರ ಕೈಗೊಂಬೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ತೋರಿಸುವ ರೀತಿಯಲ್ಲಿ ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ. ಗೊಂಬೆ ಆಡುತ್ತೈತೆ ಎನ್ನುವ ಹಾಗೆ ಡಿಕೆಶಿಗಾಗಿ ಮತ್ತೊಮ್ಮೆ ಹೊಸ ಹಾಡು ಬರೆಯಬೇಕು. ಎಂದು ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯಭರಿತ ವಾಗ್ದಾಳಿ ನಡೆಸಿದರು.
![DK shivakumar CBI Case issue Sriramulu statement at bellary today rav DK shivakumar CBI Case issue Sriramulu statement at bellary today rav](https://static-ai.asianetnews.com/images/01hg2y0a3gjv1gvwyea2fzj0c9/b_363x203xt.jpg)
ಬಳ್ಳಾರಿ (ನ.25): ಇಡೀ ಸರ್ಕಾರವನ್ನೇ ಡಿಕೆ ಶಿವಕುಮಾರ ಕೈಗೊಂಬೆ ಮಾಡಿಕೊಂಡಿದ್ದಾರೆ. ಸಿನಿಮಾದಲ್ಲಿ ತೋರಿಸುವ ರೀತಿಯಲ್ಲಿ ಸರ್ಕಾರವನ್ನು ಬುಗುರಿಯಂತೆ ಆಡಿಸುತ್ತಿದ್ದಾರೆ. ಗೊಂಬೆ ಆಡುತ್ತೈತೆ ಎನ್ನುವ ಹಾಗೆ ಡಿಕೆಶಿಗಾಗಿ ಮತ್ತೊಮ್ಮೆ ಹೊಸ ಹಾಡು ಬರೆಯಬೇಕು. ಎಂದು ಮಾಜಿ ಸಚಿವ ಶ್ರೀರಾಮುಲು ವ್ಯಂಗ್ಯಭರಿತ ವಾಗ್ದಾಳಿ ನಡೆಸಿದರು.
ಇಂದು ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸರ್ಕಾರ ಮತ್ತು ಕಾನೂನಿನ ಮಧ್ಯೆ ತಿಕ್ಕಾಟ, ಭಿನ್ನಾಪ್ರಾಯ ಪ್ರಾರಂಭವಾಗಿದೆ. ಸರ್ಕಾರ ಮತ್ತು ಕಾನೂನು ಮಧ್ಯೆ ದೊಡ್ಡ ಆತಂಕ ನಿರ್ಮಾಣವಾಗಿದೆ. ಡಿಕೆ ಶಿವಕುಮಾರ್ ಮುಂದೆ ಸರ್ಕಾರ ನೇ ತಲೆ ಬಾಗುತ್ತಿದೆಯೇ ಅಥವಾ ಸರ್ಕಾರದ ಮುಂದೆ ಇವರು ತಲೆ ಬಾಗ್ತಿದ್ದಾರಾ ಗೊತ್ತಾಗ್ತಿಲ್ಲ. ಸಿಬಿಐ ತನಿಖೆ ಪ್ರಕರಣದಲ್ಲಿ ಡಿಕೆಶಿ ತಪ್ಪು ಮಾಡಿಲ್ಲ ಅಂದ್ರೆ ಹೊರಬರುವ ವಿಶ್ವಾಸ ಇರಬೇಕಿತ್ತು. ಆದರೆ ಸರ್ಕಾರವನ್ನು ದುರುಪಯೋಗಪಡಿಸಿಕೊಂಡು ಸಿಬಿಐ ಕೇಸ್ ಹಿಂಪಡೆಯುವಂತೆ ನೋಡಿಕೊಂಡಿದ್ದಾರೆ. ಒಂದು ರೀತಿ ಸರ್ಕಾರವನ್ನೇ ಡಿಕೆಶಿ ಕೆಳಗಡೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಇಷ್ಟೊಂದು ದೊಡ್ಡ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಒಬ್ಬ ಶ್ರೀರಾಮುಲು ಏನು ಮಾಡೋಕೆ ಆಗುತ್ತೆ:
ಇನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನ ಮತ್ತೆ ಬಿಜೆಪಿಗೆ ಕರೆತರುವ ವಿಚಾರ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಶ್ರೀರಾಮುಲು ಏನು ಮಾಡೊಕೆ ಆಗುತ್ತದೆ. ಏನು ಮಾಡೋಕೆ ಆಗಲ್ಲ. ಒಮ್ಮೆ ಸೋತ್ತಿದ್ದಾನೆ ಮತ್ತೊಮ್ಮೆ ಸೋಲ್ತಾನೆ ಅಷ್ಟೇ. ಎಲ್ಲರೂ ಸೇರಿದ್ರೆ ಮತ್ತೆ ಗೆಲುವು ಸಾಧ್ಯವಾಗ್ತದೆ. ಪಕ್ಷದೊಳಗಿನ ಸಣ್ಣಪುಟ್ಟ ವ್ಯತ್ಯಾಸ ಸರಿ ಮಾಡಬೇಕು. ಬಿಜೆಪಿ ಪಕ್ಷವನ್ನು ಒಬ್ಬ ರಾಮುಲು ಮಾತ್ರ ಕಟ್ಟಿಲ್ಲ. ರಾಜ್ಯದಲ್ಲಿರುವ ಕೋಟ್ಯಂತರ ಕಾರ್ಯಕರ್ತರ ಶ್ರಮದಿಂದ ಇವತ್ತು ಇಷ್ಟು ದೊಡ್ಡ ಪಾರ್ಟಿಯಾಗಿ ಬೆಳೆದಿದೆ. ಇಂತಹ ಸಂಧರ್ಭದಲ್ಲಿ ಯಾರನ್ನೂ ಸೇರಬೇಡ ಎನ್ನಲು ನನಗೆ ಅಧಿಕಾರ ಇಲ್ಲ. ನೂರು ಅಲ್ಲ ಸಾವಿರಾರು ಜನರು ಬಂದ್ರೂ ಸೇರಿಸಿಕೊಳ್ಳುವ ಬಗ್ಗೆ ವಿಜಯೇಂದ್ರ ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾವುದೇ ಕಾರಣಕ್ಕೂ ನನ್ನ ಅಭ್ಯಂತರವಿಲ್ಲ ಎಂದರು,
ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್: ಕಳ್ಳನಿಗೆ ಪಿಳ್ಳೆ ನೆವ ರಾಜ್ಯ ಸರ್ಕಾರದ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ
ನಾನು ಜೀವನದಲ್ಲಿ ಯಾವತ್ತೂ ದ್ವೇಷ, ಅಸೂಯೆ ರಾಜಕಾರಣ ಮಾಡಿಲ್ಲ. ಯಾರೇ ಬಂದ್ರೂ ಪಾರ್ಟಿಗೆ ಅನುಕೂಲ ಆಗಲಿ ಎಂದು ಬಯಸುವೆ. ಅಷ್ಟಕ್ಕೂ ಯಾರಾದ್ರು ಬರ್ತಾರೆ ಅಂದರೆ ಬೇಡ ಅನ್ನೊಕೆ ನಾನು ಯಾರು..? ಪಾರ್ಟಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ವೈಯಕ್ತಿಕ ತೀರ್ಮಾನ, ಅಭಿಪ್ರಾಯ ಇರಲ್ಲ. ಪಾರ್ಟಿ ತೀರ್ಮಾನ ಏನಿರತ್ತೆ ಅದಕ್ಕೆ ನಾವು ಬದ್ದ ಎಂದರು.