Asianet Suvarna News Asianet Suvarna News

Karnataka election 2023: ಕೊಪ್ಪಳದಲ್ಲಿ ಜೆಡಿಎಸ್‌ ಟಿಕೆಟ್‌ಗೆ ಎಲ್ಲಿಲ್ಲದ ಬೇಡಿಕೆ!

  • ಕೊಪ್ಪಳದಲ್ಲಿ ಜೆಡಿಎಸ್‌ ಟಿಕೆಟ್‌ಗೆ ಎಲ್ಲಿಲ್ಲದ ಬೇಡಿಕೆ!
  • ಟಿಕೆಟ್‌ ಕೈ ತಪ್ಪುವ ಭೀತಿಯಲ್ಲಿ ಟಾವೆಲ್‌ ಹಾಕುತ್ತಿದ್ದಾರೆ
  • ಜೆಡಿಎಸ್‌ನತ್ತ ಮುಖ ಮಾಡಿದ ಹೊಸಮುಖಗಳು
  • ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಕ್ಕಿಂತಲೂ ಡಿಮ್ಯಾಂಡ್‌
Demand for JDS tickets in Koppal assembly ccnstituency rav
Author
First Published Mar 19, 2023, 11:09 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಮಾ.19): ಕೊಪ್ಪಳ ವಿಧಾನಸಭಾ ಕ್ಷೇತ್ರ(Koppal assembly constituency)ದ ಟಿಕೆಟ್‌ ಕಾಂಗ್ರೆಸ್‌ ಪಕ್ಷದಿಂದ ಬಹುತೇಕ ಫೈನಲ್‌ ಆಗಿದ್ದು, ಇನ್ನೇನು ಘೋಷಣೆಯೊಂದೆ ಬಾಕಿ ಇದೆ. ಆದರೆ, ಬಿಜೆಪಿಯಲ್ಲಿ ಮಾತ್ರ ಭಾರಿ ಪೈಪೋಟಿ ನಡೆದಿದ್ದು, ಹೈಕಮಾಂಡ್‌ ಅಂಗಳದಲ್ಲಿ ತೆರೆಮರೆಯಲ್ಲಿ ಏನೆಲ್ಲ ನಡೆಯುತ್ತಿದೆ. ಯಾರಿಗೆ ದಕ್ಕುತ್ತದೆ ಎನ್ನುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಈ ನಡುವೆ ಈಗಾಗಲೇ ಜೆಡಿಎಸ್‌(JDS) ತನ್ನ ಹುರಿಯಾಳು ಎಂದು ಮೊದಲ ಪಟ್ಟಿಯಲ್ಲಿಯೇ ವೀರೇಶ ಮಹಾಂತಯ್ಯನಮಠ(Viresh mahantaiah mutt) ಅವರ ಹೆಸರನ್ನು ಘೋಷಣೆ ಮಾಡಿದ್ದರೂ ಸಹ ಇನ್ನೂ ಫೈನಲ್‌ ಆಗಿಲ್ಲ. ಆದರೆ, ಈಗ ಬಿಜೆಪಿ ಮತ್ತು ಕಾಂಗ್ರೆಸ್‌ ಟಿಕೆಟ್‌ಗಿಂತಲೂ ಕೊಪ್ಪಳದಲ್ಲಿ ಜೆಡಿಎಸ್‌ ಟಿಕೆಟ್‌ಗಾಗಿಯೇ ಫೈಟ್‌ (JDS Ticket fight)ಜೋರಾಗಿರುವುದು ಗುಟ್ಟಾಗಿ ಉಳಿದಿಲ್ಲ.

ಮಂಡ್ಯದಲ್ಲಿ ಪುತ್ಥಳಿ ಪಾಲಿಟಿಕ್ಸ್‌, ಲಿಂಗಾಯತ ಮತ ಸೆಳೆಯಲು ಬಿಜೆಪಿ-ಜೆಡಿಎಸ್‌ ಸರ್ಕಸ್‌ ..!

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಫೈಟ್‌ ಮಾಡುವವರು ಹಾಗೂ ಇತರರು ಈಗಾಗಲೇ ಜೆಡಿಎಸ್‌ ಟಿಕೆಟ್‌ಗಾಗಿ ಟಾವೆಲ್‌ ಹಾಕಿ ಬಕಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಅನೇಕರು ಖುದ್ದು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ತಮ್ಮ ಪ್ರಯತ್ನ ಮಾಡಿ ಬಂದಿರುವುದು ಚರ್ಚೆಯಾಗುತ್ತಿದೆ. ಈ ಪೈಪೋಟಿ ಜೋರಾಗುತ್ತಿದ್ದಂತೆ ಮೊದಲ ಪಟ್ಟಿಯಲ್ಲಿ ಕೊಪ್ಪಳ ಅಭ್ಯರ್ಥಿ ಘೋಷಣೆ ಮಾಡಿದ್ದ ಜೆಡಿಎಸ್‌ ನಂತರ ತಡೆ ಹಿಡಿದಿದೆ.

ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ(Raghavendra Hitnal) ಅವರು ಮತ್ತೆ ಅಖಾಡಕ್ಕೆ ಇಳಿಯುವುದು ಪಕ್ಕಾ ಆಗಿದೆ. ಆದರೆ, ಬಿಜೆಪಿಯಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದಕ್ಕಿಂತ ಯಾರಿಗೆ ಟಿಕೆಟ್‌ ಸಿಗುತ್ತದೆ ಎನ್ನುವುದರ ಆಧಾರದ ಮೇಲೆಯೇ ಜೆಡಿಎಸ್‌ ಟಿಕೆಟ್‌ ನಿರ್ಧಾರವಾಗಲಿದೆ.

ಈಗ ಮೇಲ್ನೋಟಕ್ಕೆ ಬಿಜೆಪಿ ಟಿಕೆಟ್‌ಗಾಗಿ ಸಿ.ವಿ.ಚಂದ್ರಶೇಖರ(CV Chandrashekhar BJP Ticket) ಹಾಗೂ ಸಂಸದ ಸಂಗಣ್ಣ ಕರಡಿ ಅವರ ನಡುವೆಯೇ ನೇರ ಫೈಟ್‌ ಇರುವುದಂತೂ ಪಕ್ಕಾ. ಕಳೆದ ಬಾರಿಯೇ ಸಿ.ವಿ. ಚಂದ್ರಶೇಖರ ಅವರಿಗೆ ಟಿಕೆಟ್‌ ಘೋಷಣೆಯಾಗಿ ಕೊನೆ ಗಳಿಗೆಯಲ್ಲಿ ಸಂಸದರ ಪುತ್ರ ಅಮರೇಶ ಕರಡಿ ಅವರಿಗೆ ಟಿಕೆಟ್‌ ಬದಲಿಸಲಾಯಿತು. ಈ ಬಾರಿ ಸಂಸದ ಸಂಗಣ್ಣ ಕರಡಿ ಅವರೇ ಖುದ್ದು ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ. ಆದರೆ, ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಹಾಗೊಂದು ವೇಳೆ ಅವರಿಗೆ ಟಿಕೆಟ್‌ ದಕ್ಕದೆ ಇದ್ದರೆ ಅವರ ಪುತ್ರ ಅಥವಾ ಅವರ ಸೂಚಿಸಿದವರಿಗೆ ಟಿಕೆಟ್‌ ನೀಡಬೇಕು ಎನ್ನುವ ಬೇಡಿಕೆ ಇದೆ ಎನ್ನಲಾಗುತ್ತದೆ. ಇದರ ನಡುವೆ ಸಿ.ವಿ.ಚಂದ್ರಶೇಖರ ಕಳೆದ ಬಾರಿ ಟಿಕೆಟ್‌ ದಕ್ಕಿದ್ದು ತಪ್ಪಿದೆ. ಈ ಬಾರಿ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.

ಬಿಜೆಪಿ ಟಿಕೆಟ್‌ ಯಾರಿಗೆ ಸಿಗುತ್ತದೆ ಎನ್ನುವುದನ್ನು ಜೆಡಿಎಸ್‌ ಪಕ್ಷವೂ ಕಾದು ನೋಡುತ್ತಿದೆ. ಇಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎನ್ನುವ ಆಧಾರದಲ್ಲಿ ಜೆಡಿಎಸ್‌ ಅಖಾಡಕ್ಕೆ ಇಳಿಯುವವರು ಯಾರು ಎಂದು ಗೊತ್ತಾಗುತ್ತದೆ. ಈ ನಡುವೆ ಸಾದಿಕ್‌ ಅತ್ತಾರ ಕ್ಷೇತ್ರದಲ್ಲಿ ಸುತ್ತಾಡುತ್ತಿರುವುದು ಅಲ್ಲದೆ ಖುದ್ದು ಕುಮಾರಸ್ವಾಮಿ ಅವರನ್ನೇ ಭೇಟಿಯಾಗಿ ಟಿಕೆಟ್‌ ಖಚಿತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ ಮಾವ ಸಿ.ವಿ. ಚಂದ್ರಶೇಖರ ಅವರಿಗೆ ಟಿಕೆಟ್‌ ತಪ್ಪಿದರೆ ಜೆಡಿಎಸ್‌ದಿಂದ ಅಖಾಡಕ್ಕೆ ಇಳಿಯಲು ಸುರೇಶ ಭೂಮರಡ್ಡಿ ಸಿದ್ಧತೆ ನಡೆಸಿದ್ದಾರೆ. ವಿಧಾನಪರಿಷತ್‌ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಅವರು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದು, ಯಾವ ಕಾರಣಕ್ಕಾಗಿ ಮತ್ತು ಯಾರ ಬೆಂಬಲಕ್ಕಾಗಿ ಎನ್ನುವುದನ್ನು ಬಿಡಿಸಿ ಹೇಳುವಂತಿಲ್ಲ. ಇವರು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದರೂ ಜೆಡಿಎಸ್‌ ಟಿಕೆಟ್‌ ಯಾರಿಗೆ ನೀಡಲಾಗುತ್ತದೆ ಎನ್ನುವುದನ್ನು ಆಧರಿಸಿ ಹೆಜ್ಜೆ ಇಡಲಿದ್ದಾರೆ.

ಆರ್ ಅಶೋಕ್‌ ಕಾಲಜ್ಞಾನಿ ಎಂಬುದು ನನಗೆ ಗೊತ್ತಿರಲಿಲ್ಲ: ಎಚ್‌ಡಿಕೆ ವ್ಯಂಗ್ಯ

ಇದಲ್ಲದೆ ಇನ್ನೂ ಅನೇಕರು ಜೆಡಿಎಸ್‌ ಟಿಕೆಟ್‌ಗಾಗಿ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹೀಗಾಗಿ, ಈ ಬಾರಿ ಮತದಾರರು ಹೊಸಮುಖಕ್ಕೆ ಮಣೆ ಹಾಕುತ್ತಾರೆ ಎನ್ನುವ ಲೆಕ್ಕಚಾರದಲ್ಲಿ ಅನೇಕರು ಶಕ್ತಿಮೀರಿ ಜೆಡಿಎಸ್‌ ಟಿಕೆಟ್‌ಗೆ ಶ್ರಮಿಸುತ್ತಿದ್ದಾರೆ. ಇದು ಭಾರಿ ಸಂಚಲ ಮೂಡಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ ಟಿಕೆಟ್‌ಗಿಂತ ಈ ಬಾರಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟಿನದೇ ಸದ್ದು ಜೋರಾಗಿದೆ.

Follow Us:
Download App:
  • android
  • ios