ರಾಜ್ಯದಲ್ಲಿರುವ ಡೀಮ್ಡ್ ಫಾರೆಸ್ಟನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದರೆ 6 ಲಕ್ಷ ರೈತರಿಗೆ ಅನುಕೂಲ ಆಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸವಣೂರು (ಮಾ.11): ರಾಜ್ಯದಲ್ಲಿರುವ ಡೀಮ್ಡ್ ಫಾರೆಸ್ಟನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿದರೆ 6 ಲಕ್ಷ ರೈತರಿಗೆ ಅನುಕೂಲ ಆಗಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ತಾಲೂಕಿನ ಶಿರಬಡಗಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.

ಆಯುಷ್ಮಾನ್ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರು 2017ರಲ್ಲಿ ಪ್ರಾರಂಭ ಮಾಡಿದ್ದರು. ಅದರ ಅನ್ವಯ ತಾವು ಆರೋಗ್ಯ ವಿಮೆಯನ್ನು ಪಡೆಯುತ್ತಿದ್ದೀರಿ. ಇದರಿಂದ ಆರೋಗ್ಯ ಸೇವೆ ದೊರೆಯುವಂತಾಗಿದೆ. ನಮ್ಮ ಗ್ರಾಮೀಣ ಜನರಿಗೆ ಹೆಚ್ಚಿನ ಅನುಕೂಲ ನೀಡಲು ಪ್ರತಿ ಕ್ಷೇತ್ರದಲ್ಲಿ ಎಂಟರಿಂದ ಹತ್ತು ಆಯುಷ್ಮಾನ್ ಕೇಂದ್ರಗಳು ಆರಂಭವಾಗಲಿವೆ. ಇದರ ಉಪಯೋಗ ಎಲ್ಲರಿಗೂ ತಲುಪಲಿ ಎಂದರು.

ಈ ಭಾಗದಲ್ಲಿ ರಸ್ತೆಗಳ ಸಮಸ್ಯೆ ಇದೆ. ನಾನು ಸಿಎಂ ಇದ್ದಾಗ ಪ್ರತಿ ಹೋಬಳಿ ಮತ್ತು ಹಳ್ಳಿಗಳಿಗೆ ದುಡ್ಡು ಕೊಟ್ಟಿದ್ದೆ. ಆದರೂ ರಸ್ತೆ ಹೀಗೆ ಇರುವುದು ಬೇಸರ ತರಿಸಿದೆ. ನನಗೆ ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕೇಂದ್ರ ಸರ್ಕಾರದ ಸಿಆರ್‌ಎಫ್ ಫಂಡ್‌ನಲ್ಲಿ ಸವಣೂರು ಹಾಗೂ ಶಿರಹಟ್ಟಿ ತಾಲೂಕಿನ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುತ್ತೇನೆ ಎಂದರು.

ಅಭಿವೃದ್ಧಿಗೆ ಸಮಸ್ಯೆ

ಇನ್ನು ದೇಶದಲ್ಲಿ ಅರಣ್ಯ ಕಾಯ್ದೆ 1980ರಿಂದಲೇ ಜಾರಿಯಲ್ಲಿದೆ. ಹೀಗಾಗಿ ಅರಣ್ಯ ಪ್ರದೇಶದ ಹತ್ತಿರದಲ್ಲಿರುವ ಹಳ್ಳಿಗಳ ಅಭಿವೃದ್ಧಿಗೆ ಸಮಸ್ಯೆಯಾಗಿದೆ. ಅರಣ್ಯ ಇಲಾಖೆಯಲ್ಲಿ ಬಹಳ ಕಠಿಣ ನಿಯಮ ಇದೆ. ನಾನು ಸಿಎಂ ಆಗಿದ್ದಾಗ ಫಾರೆಸ್ಟ್ ಸೆಟಲ್‌ಮೆಂಟ್ ಆಕ್ಟನ್ನು ಸರಳಿಕರಣ ಮಾಡಲು ನಾವು ಪಯತ್ನ ಮಾಡಿದ್ದೇವು. ಸುಮಾರು 6 ಲಕ್ಷ ಡೀಮ್ಡ್ ಫಾರೆಸ್ಟ್ ಅನ್ನು ಕಂದಾಯ ಇಲಾಖೆಗೆ ವರ್ಗಾಯಿಸಿದ್ದೇವು. ಅದನ್ನು ಮುಂದೆ ಬಂದ ಸರ್ಕಾರಗಳು ಪಾಲನೆ ಮಾಡಲಿಲ್ಲ ಎಂದರು.

ಸವಣೂರಿನಲ್ಲಿ ಹಾದು ಹೋಗುವ ಲಕ್ಷ್ಮೇಶ್ವರ ರಸ್ತೆಯನ್ನು ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಪಯತ್ನ ಮಾಡುತ್ತೇವೆ. ನಾವೆಲ್ಲರೂ ಸೇರಿ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ. ನಾವು ಮುಕ್ತ ಮನಸ್ಸಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಬಿಜೆಪಿ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.