Asianet Suvarna News Asianet Suvarna News

ರಾತ್ರೋರಾತ್ರಿ ಲಕ್ಷ್ಮಣ ಸವದಿ ಮನೆಗೆ ಡಿಸಿಎಂ ಶಿವಕುಮಾರ್‌ ಭೇಟಿ: ಒಂದು ಗಂಟೆ ಕಾಲ ಮಾತುಕತೆ

ಬೆಳಗಾವಿಯ ಸದಾಶಿವ ನಗರದಲ್ಲಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಿವಾಸಕ್ಕೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗಮಿಸಿ ಗೌಪ್ಯಸಭೆ ನಡೆಸಿ, ಮಾತುಕತೆ ನಡೆಸಿದರು. 

DCM DK Shivakumar visited Laxman Savadi house At Belagavi gvd
Author
First Published Jun 1, 2023, 2:40 AM IST

ಬೆಳಗಾವಿ (ಜೂ.01): ಬೆಳಗಾವಿಯ ಸದಾಶಿವ ನಗರದಲ್ಲಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಿವಾಸಕ್ಕೆ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗಮಿಸಿ ಗೌಪ್ಯಸಭೆ ನಡೆಸಿ, ಮಾತುಕತೆ ನಡೆಸಿದರು. ಸಚಿವ ಸ್ಥಾನ ಸಿಗದಿದ್ದಕ್ಕೆ ಸವದಿ ಅಸಮಾಧಾನಗೊಂಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರೋರಾತ್ರಿ ಸವದಿ ನಿವಾಸಕ್ಕೆ ಆಗಮಿಸಿದ ಶಿವಕುಮಾರ, ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು. ಸ್ಥಳೀಯ ಶಾಸಕರನ್ನು ಹೊರಗಿಟ್ಟು ಗೌಪ್ಯಸಭೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೇ ಹೆಬ್ಬಾಳಕರ ಅಷ್ಟೇ ಉಪಸ್ಥಿತರಿದ್ದರು. ಡಿ.ಕೆ.ಶಿವಕುಮಾರ ಅವರು ಲಕ್ಷ್ಮಣ ಸವದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಜಿಲ್ಲಾ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಕಷ್ಟಕಾಲದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ-ಡಿಕೆಶಿ: ಚುನಾವಣೆ ಸಮಯದಲ್ಲಿ ಹಾಗೂ ಚುನಾವಣೆ ನಡೆದ ನಂತರ ನಾನು ಸಾಕಷ್ಟುಬ್ಯುಸಿಯಾಗಿದ್ದೆ. ಹೀಗಾಗಿ ನಮಗೆ ಶಕ್ತಿ ತುಂಬಿದ ನಾಯಕರನ್ನು ಭೇಟಿ ಮಾಡಲು ಈಗ ಪ್ರವಾಸ ಕೈಗೊಂಡಿದ್ದೇನೆ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ನಗರದಲ್ಲಿ ಬುಧವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚನೆ, ಸಚಿವ ಸಂಪುಟ, ಖಾತೆ ಹಂಚಿಕೆ, ಇಲಾಖಾವಾರು ಸಭೆಗಳು, ಗ್ಯಾರಂಟಿ ಯೋಜನೆಗಳ ಜಾರಿ ಕುರಿತಂತೆ ಸಾಕಷ್ಟುಕೆಲಸಗಳಲ್ಲಿ ನಿರತನಾಗಿದ್ದೆ. ಈಗ ಸಮಯ ಮಾಡಿಕೊಂಡು ನಮ್ಮ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ, ಗುಬ್ಬಿ ವಾಸು, ಶಿವಲಿಂಗೇಗೌಡರು, ಪುಟ್ಟಣ್ಣ, ಬಾಬುರಾವ್‌ ಚಿಂಚನಸೂರು ಅವರನ್ನು ಭೇಟಿ ಮಾಡಲು ಬಂದಿದ್ದೇನೆ ಎಂದರು.

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ಶಾಸಕ ಕೆ.ಎಂ.ಉದಯ್‌ ಸೂಚನೆ

ಈ ನಾಯಕರು ತಮ್ಮ ಅಧಿಕಾರವನ್ನು ತ್ಯಜಿಸಿ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಈಗ ಅವರಿಗೆ ಶಕ್ತಿ ತುಂಬಬೇಕಾದ ಕರ್ತವ್ಯ ನಮ್ಮದು. ಹೀಗಾಗಿ ಪಕ್ಷದ ಆಂತರಿಕ ವಿಚಾರಗಳನ್ನು ಚರ್ಚೆ ಮಾಡಲು, ಸಲಹೆ ನೀಡಲು ಸೌಹಾರ್ದಯುತ ಭೇಟಿಗೆ ಬಂದಿದ್ದೇನೆ. ಉಳಿದಂತೆ ಯಾವುದೇ ರಾಜಕೀಯ ಕಾರಣಗಳಿಂದ ಭೇಟಿ ಮಾಡುತ್ತಿಲ್ಲ ಎಂದರು. ಲಕ್ಷ್ಮಣ ಸವದಿ ನಮ್ಮ ನಾಯಕರು. ಕಷ್ಟಕಾಲದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ನಮ್ಮ ಪಕ್ಷದಲ್ಲಿ ಯಾರಿಗೂ ಬೇಸರವಾಗಿಲ್ಲ. ಪಕ್ಷದ ಅಧ್ಯಕ್ಷನಾಗಿ, ಹಿರಿಯ ನಾಯಕರಾದ ಸವದಿ ಹಾಗೂ ಶೆಟ್ಟರ್‌ ಅವರನ್ನು ಭೇಟಿ ಮಾಡುತ್ತಿದ್ದೇನೆ. ಕಾಂಗ್ರೆಸ್‌ ಪಕ್ಷ ಯಾವುದೇ ನಾಯಕರನ್ನು ಕೈ ಬಿಡುವುದಿಲ್ಲ. ನಮಗೆ ಕಷ್ಟಕಾಲದಲ್ಲಿ ಕೈ ಹಿಡಿದವರನ್ನು ಕಾಂಗ್ರೆಸ್‌ ಪಕ್ಷ ಕೂಡ ಕೈ ಹಿಡಿಯಲಿದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಎಲ್ಲಾ ಸಚಿವರ ಸಭೆ ಮಾಡಲಿದ್ದಾರೆ. ಈಗಾಗಲೇ ಎಲ್ಲಾ ಸಚಿವಾಲಯಗಳ ಜೊತೆ ಚರ್ಚೆ ಮಾಡಿದ್ದು, ನಾಳೆ ಸಚಿವ ಸಂಪುಟ ಸಭೆಯನ್ನೂ ಕರೆದಿದ್ದಾರೆ ಎಂದರು. ಲಕ್ಷ್ಮಣ ಸವದಿ ಅವರಿಗೆ ಯಾವ ಸ್ಥಾನಮಾನ ನೀಡಲಾಗುವುದು? ಎಂಬ ಪ್ರಶ್ನೆಗೆ, ಯಾವ ನಾಯಕರಿಗೆ ಯಾವ ಸ್ಥಾನ ನೀಡಬೇಕು ಎಂಬುದು ಪಕ್ಷಕ್ಕೆ ತಿಳಿದಿದೆ. ನಾವು ಹಾಗೂ ಇಡೀ ಪಕ್ಷ ಅವರ ಜೊತೆ ಇರಲಿದೆ ಎಂದಷ್ಟೇ ಈ ಸಮಯದಲ್ಲಿ ಹೇಳಲು ಬಯಸುತ್ತೇನೆ. ಅವರು ನಮ್ಮ ಪಕ್ಷದ ನಾಯಕರು. ಇಲ್ಲಿ ಚೌಕಸಿ ಮಾಡುವಂಥದ್ದು ಏನೂ ಇಲ್ಲ. ಕಷ್ಟಕಾಲದಲ್ಲಿ ನಮ್ಮ ಜೊತೆ ಕೈಜೋಡಿಸಿದವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದರು.

ರಾಜಕೀಯ ಚರ್ಚೆ ನಡೆದಿಲ್ಲ- ಸವದಿ ಸ್ಪಷ್ಟನೆ: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಅವರು ಸೌಜನ್ಯಯುತವಾಗಿ ಭೇಟಿಗೆಂದು ಮನೆಗೆ ಆಗಮಿಸಿದ್ದರು. ರಾಜಕೀಯ ಕುರಿತು ಯಾವುದೇ ಚರ್ಚೆ ಆಗಿಲ್ಲ. ನನಗೆ ಸ್ಥಾನ ಮಾನ ನೀಡುವ ಕುರಿತು ಕೂಡ ಚರ್ಚೆ ನಡೆದಿಲ್ಲ. ಇದೊಂದು ಸೌಜನ್ಯಯುತ ಭೇಟಿ ಅಷ್ಟೇ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಐದು ವರ್ಷ ಇದೆ. ಇದೇ ಅಂತ್ಯವಲ್ಲ; ಆರಂಭ. ರಾಜಕಾರಣದಲ್ಲಿ ತಾಳ್ಮೆ ಹಾಗೂ ದೂರದೃಷ್ಟಿಇರಬೇಕು. ಅವರೆಡೂ ನನಗಿದೆ ಎಂದರು.

ಒಂದು ವರ್ಷದೊಳಗೆ ಶಾಶ್ವತ ಪರಿಹಾರ: ಶಾಸಕ ಪಿ.ರವಿಕುಮಾರ್‌

ನನಗೆ ಮಂತ್ರಿ ಸ್ಥಾನ ಕೊಡಬೇಕೆಂದು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ಹೈಕಮಾಂಡ್‌ಗೂ, ರಾಜ್ಯದ ಮುಖಂಡರಿಗೂ ಅನಿವಾರ್ಯ ಸಂದರ್ಭವಿದು. ಬಹಳಷ್ಟುಜನ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ಬಂದಿರುವುದರಿಂದ ಎಲ್ಲರಿಗೂ ಪ್ರಾತಿನಿಧ್ಯ ನೀಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

Follow Us:
Download App:
  • android
  • ios