ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಈ ಬಾರಿಯ ಚುನಾವಣೆಯನ್ನು ಶ್ರೀಮಂತರು ಮತ್ತು ಬಡವರ ನಡುವಿನ ಹೋರಾಟ ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಶ್ರೀಮಂತ ಹಿನ್ನೆಲೆಯನ್ನು ಟೀಕಿಸಿರುವ ಅವರು, ಹಮಾಲಿ ಮಾಡುವವರ ಮಗನಾದ ನನಗೆ ಜನ ಬೆಂಬಲ ಇದೆ ಎಂದಿದ್ದಾರೆ.

ದಾವಣಗೆರೆ (ಮಾ.29) ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗ ನಡೆಯುತ್ತಿರುವುದು ಶ್ರೀಮಂತರು ವರ್ಸಸ್‌ ಬಡವರ ಚುನಾವಣೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸಕರಿಯಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಟಾಂಗ್ ನೀಡಿದ್ದಾರೆ.

ದಕ್ಷಿಣ ಕ್ಷೇತ್ರದಲ್ಲಿ ಶನಿವಾರ ಮನೆ ಮನೆಗೆ ಭೇಟಿ ನೀಡುವ ಮೂಲಕ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿಯನ್ನು ಗೆಲ್ಲಿಸುವುದಾಗಿ ಜನ ಹೇಳುತ್ತಿದ್ದಾರೆ. ಮುಸ್ಲಿಂ ಬಾಂಧವರು ಸಹ ತಮ್ಮ ಮನೆಗೆ ಕರೆಸಿಕೊಂಡು, ನೀವೇ ಗೆಲ್ಲುತ್ತೀರಿ ಎಂಬುದಾಗಿ ಹೇಳಿದ್ದು, ನಮ್ಮಲ್ಲಿ ಮತ್ತಷ್ಟು ಉತ್ಸಾಹ ಮೂಡಿಸುತ್ತಿದ್ದಾರೆ ಎಂದರು.

ಕ್ಷೇತ್ರದಲ್ಲಿ ಒಟ್ಟು 2.32 ಲಕ್ಷ ಮತದಾರರಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ಪಕ್ಷದ ಶ್ರೀಮಂತನ ವಿರುದ್ಧ ದಾವಣಗೆರೆಯ ಹಮಾಲಿ ಮಾಡುವವರ ಮಗ ನಿಂತಿದ್ದಾನೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಮನೆಯಲ್ಲೇ ಮಂತ್ರಿಗಳು, ಸಂಸದರು ಇದ್ದಾರೆ. ಯುವಕರು ಅಂದರೆ ಅಭ್ಯರ್ಥಿಯ ಮನೆಯವರಷ್ಟೇ ರಾಜಕಾರಣಕ್ಕೆ ಬರಬೇಕಾ? ಇಲ್ಲಿ ನಡೆಯುತ್ತಿರುವುದು ಶ್ರೀಮಂತರು ವರ್ಸಸ್‌ ಬಡವರ ಚುನಾವಣೆ ಎಂದು ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ಮಾತನಾಡಿ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಆಸ್ತಿಯನ್ನೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಹೆಸರಿಗೆ ಬರೆದುಕೊಡೋಣ. ಕಾಂಗ್ರೆಸ್ ಅಭ್ಯರ್ಥಿಯ ಎಲ್ಲಾ ಆಸ್ತಿಯನ್ನು ಬಿಜೆಪಿ ಅಭ್ಯರ್ಥಿ ಶ್ರೀನಿವಾಸಗೆ ಬರೆದುಕೊಡಲಿ ನೋಡೋಣ. ಆಗ ಗೊತ್ತಾಗುತ್ತದೆ ಕಾಂಗ್ರೆಸ್ ಅಭ್ಯರ್ಥಿಯ ಆಸ್ತಿ ಎಷ್ಟಿದೆಯೆಂಬುದು ಎಂದು ಸವಾಲು ಹಾಕಿದರು.