ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು, ಶ್ರೀಮಂತ ವರ್ಸಸ್ ಬಡವರ ಚುನಾವಣೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ಗಳನ್ನು ಹೋಲಿಸಿದರೆ, ಬಿಜೆಪಿ ಅಭ್ಯರ್ಥಿಯ ಆಸ್ತಿಯೇ ತಮಗಿಂತ ಎರಡು ಪಟ್ಟು ಹೆಚ್ಚಿದೆ ಎಂದಿದ್ದಾರೆ.

ದಾವಣಗೆರೆ (ಮಾ.29): ದಕ್ಷಿಣ ಕ್ಷೇತ್ರದಲ್ಲಿ ಶ್ರೀಮಂತ ವರ್ಸಸ್ ಬಡವರ ಚುನಾವಣೆಯೆಂದು ಹೇಳುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಅವರು ತಿರುಗೇಟು ನೀಡಿದ್ದು, ಚುನಾವಣಾ ಆಯೋಗಕ್ಕೆ ನಾನು ಸಲ್ಲಿಸಿರುವ ಅಫಿಡವಿಟ್‌ ಹಾಗೂ ಬಿಜೆಪಿ ಅಭ್ಯರ್ಥಿಯ ಅಫಿಡವಿಟ್‌ ಪರಿಶೀಲಿಸಿ. ಅವರದ್ದೇ ಡಬಲ್ ಆಸ್ತಿ ಇದೆ ಎಂದು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆನೆಕೊಂಡ ಗ್ರಾಮದಲ್ಲಿ ಮನೆ ಮನೆಗೆ ಹೋಗಿ ಮತಯಾಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಕ್ಷೇತ್ರದಲ್ಲಿ ಶ್ರೀಮಂತ ವರ್ಸಸ್ ಬಡವರ ಚುನಾವಣೆಯೆಂದು ಹೇಳುತ್ತಿದ್ದಾರೆ. ಅಫಿಡವಿಟ್‌ನಲ್ಲಿ ನಾನೇನು ದಾಖಲೆಗಳನ್ನು ಸಲ್ಲಿಸಿದ್ದೇನೆ, ಬಿಜೆಪಿ ಅಭ್ಯರ್ಥಿ ಏನು ದಾಖಲೆ ಸಲ್ಲಿಸಿದ್ದಾರೆ ನೋಡಿ. ಬಿಜೆಪಿ ಅಭ್ಯರ್ಥಿಯದ್ದು ನನಗಿಂತ ಎರಡುಪಟ್ಟು ಆಸ್ತಿ ಇದೆ. ಬಿಜೆಪಿಯವರಿಗೆ ಮಾತನಾಡಲು ಬೇರೆ ವಿಚಾರವೇ ಇಲ್ಲ ಎಂದು ಲೇವಡಿ ಮಾಡಿದರು.

ಇವತ್ತು ಶ್ರೀಮಂತ ಅಭ್ಯರ್ಥಿ ಅಂತಾ ಹೇಳುತ್ತಿದ್ದಾರೆ. ನಾಳೆ ನಿನ್ನದು ಗಿಣಿ ಮೂಗು ಇದೆ ಅನ್ನುತ್ತಾರೆ. ಅದಕ್ಕೆ ಏನು ಉತ್ತರ ಕೊಡಲಿ? ನಾನಂತೂ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು, ಜನರ ಬಳಿ ಹೋಗುತ್ತಿದ್ದೇನೆ. ಜನರ ಬೇಡಿಕೆ ಏನಿದೆ ಎಂಬುದನ್ನು ಆಲಿಸುತ್ತಿದ್ದೇನೆ. ಹೋದಲ್ಲೆಲ್ಲಾ ಮತದಾರರು, ಜನರು, ಹಿರಿಯರು, ಯುವಕರು, ವಯೋವೃದ್ಧರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಹಿರಿಯ ಮುಖಂಡರಾದ ಸಾದಿಕ್ ಪೈಲ್ವಾನರು ನಮ್ಮ ದೊಡ್ಡಪ್ಪನ ರೀತಿ ಇದ್ದಾರೆ. ನಮ್ಮ ಕಾಂಗ್ರೆಸ್‌ನಲ್ಲಿ ಎಲ್ಲರೂ ಅಣ್ಣ ತಮ್ಮಂದಿರಿದ್ದಂತೆ. ಈಗ ಚುನಾವಣೆಯಲ್ಲಿ ನಮ್ಮ ಪರ ಪ್ರಚಾರ ಕೈಗೊಳ್ಳುವುದಾಗಿ ಸಿಎಂ, ಡಿಸಿಎಂ, ಸಚಿವರಿಗೆ ಹೇಳಿದ್ದಾರೆ. ಇ‍ವತ್ತೂ ಸಹ ಸಾದಿಕ್ ಅವರ ನಿವಾಸಕ್ಕೆ ನಮ್ಮ ಪಕ್ಷದ ನಾಯಕರು ಭೇಟಿ ನೀಡಿದ್ದಾರೆ ಎಂದು ಹೇಳಿದರು.