ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು (ಮಾ.29): ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟಿತರಾಗಿ ಕೆಲಸ ಮಾಡುತ್ತಿದ್ದೇವೆ. ಉಭಯ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ. ದಾವಣಗೆರೆಯಲ್ಲಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿ ಹಿಂದೆ ಸರಿಯುವಂತೆ ಮಾಡಿರುವುದು ಅನಿರೀಕ್ಷಿತವಲ್ಲ.

ಬಿಜೆಪಿಗೂ ಅಲ್ಲಿ ಸಾಂಪ್ರದಾಯಿಕ ಮತ ಬ್ಯಾಂಕ್‌ ಇದೆ. ಉಪ ಚುನಾವಣೆಗಳಲ್ಲಿ ಸರ್ಕಾರವೇ ಬಂದು ಕುಳಿತು ಪ್ರಚಾರ ಮಾಡುವುದು, ಇಲ್ಲದ ಆಶ್ವಾಸನೆಗಳನ್ನು ನೀಡುವುದು ಸಾಮಾನ್ಯ ಎಂದರು. ಜನಾಕ್ರೋಶ ಬಿಜೆಪಿಗೆ ಮತವಾಗಿ ಪರಿವರ್ತಿತವಾಗುವ ನಿರೀಕ್ಷೆಯಿದೆ. ಉಪಚುನಾವಣೆ ಫಲಿತಾಂಶದಿಂದ ಸರ್ಕಾರದ ಮೇಲೆ ತಕ್ಷಣದ ಪರಿಣಾಮ ಉಂಟಾಗುವುದಿಲ್ಲ. ಆದರೆ, ಜನಾಕ್ರೋಶ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.

ಜನರು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ, ಅಕ್ರಮಗಳಿಂದ ಬೇಸತ್ತಿದ್ದಾರೆ. ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹತ್ತು ರು. ಕಡಿಮೆಗೊಳಿಸಿದೆ. ಅದನ್ನು ಜನ ಸಂತೋಷ ಪಟ್ಟರೆ, ಕಾಂಗ್ರೆಸ್ ಸಂಕಟ ಪಡುತ್ತಿದೆ. ಭಾರತದ ಶೇ.90 ರಷ್ಟು ಪೆಟ್ರೋಲ್ ವಿದೇಶಗಳಿಂದಲೇ ಬರಬೇಕು. ಎಲ್ಲ ದೇಶಗಳಿಗೂ ಯುದ್ಧದ ಬಿಸಿ ತಟ್ಟಿದೆ, ಪೆಟ್ರೋಲ್ ಬೆಲೆ ಏರುತ್ತಿದೆ. ಆದರೆ, ನಮ್ಮ ಜನರಿಗೆ ಸಮಸ್ಯೆಉಂಟಾಗಬಾರದು ಎಂದು ಮೋದಿ ಸರ್ಕಾರೇತರಿಗೆ ಇಳಿಸಿದೆ.

ದಿವಾಳಿತನಕ್ಕೆ ಸಾಕ್ಷಿ

ಸರ್ಕಾರಕ್ಕೆ ಕೊರತೆಯಾದರೂ ಪರವಾಗಿಲ್ಲ ಎನ್ನುವುದು ಬಿಜೆಪಿಯ ಧೋರಣೆ. ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳು ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಹೇಳಿದರು. ಇನ್ನೂ ಐದು ರಾಜ್ಯಗಳ ಚುನಾವಣೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ದಕ್ಷಿಣ ಚೌಬೀಸ್ ಪರಗಣದ ಚುನಾವಣಾ ಜವಾಬ್ದಾರಿಯನ್ನೂ ಪಕ್ಷ ನೀಡಿದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ಡಾ. ರವಿ ಸಿ.ಟಿ ಹೇಳಿದರು.