ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ತಳಮಳ ಹೆಚ್ಚಾಗಿದೆ. ಗುಲಾಮ್ ನಬಿ ಆಜಾದ್ ಬೆನ್ನಲ್ಲೇ ಇದೀಗ ಮತ್ತೊಬ್ಬ ಹಿರಿಯ ನಾಯಕ ಆನಂದ್ ಶರ್ಮಾ ಕಾಂಗ್ರೆಸ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಚಾಲನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ನವದೆಹಲಿ(ಆ.21): ಕಾಂಗ್ರೆಸ್ನಲ್ಲಿ ಬಂಡಾಯ ಮತ್ತೆ ಭುಗಿಲೆದ್ದಿದೆ. ಇದೀಗ ಕಾಂಗ್ರೆಸ್ನಲ್ಲಿ ಬಹುತೇಕ ರಾಜಕೀಯ ಜೀವನ ಕಳೆದಿರುವ ಹಿರಿಯ ನಾಯಕರೇ ಪಕ್ಷದ ವಿರುದ್ಧ ಗರಂ ಆಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷದ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇದೀಗ ಹಿರಿಯ ನಾಯಕ ಆನಂದ್ ಶರ್ಮಾ, ಹಿಮಾಚಲ ಪ್ರದೇಶ ಚಾಲನ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಕೆಲವೆ ದಿನಗಳ ಅಂತರದಲ್ಲಿ ಕಾಂಗ್ರೆಸ್ ಬಂಡಾಯದ ಬಿಸಿ ಜೊತೆಗೆ ಹಿರಿಯ ನಾಯಕರೇ ಪಕ್ಷದಿಂದ ದೂರ ಉಳಿಯುತ್ತಿರುವುದು ಮುಂಬರುವ ಚುನಾವಣೆಗೆ ತೀವ್ರ ಹಿನ್ನಡೆ ತಂದಿದೆ. ಗುಲಾಮ್ ನಬಿ ಆಜಾದ್, ಕಬಿಲ್ ಸಿಬಲ್ ನೇೃತ್ವದಲ್ಲಿ ಬಂಡಾಯವೆದ್ದ ಹಿರಿಯ ಕಾಂಗ್ರೆಸ್ ನಾಯಕರ ಜಿ23 ಗುಂಪಿನಲ್ಲಿ ಆನಂದ್ ಶರ್ಮಾ ಕೂಡ ಇದ್ದರು. ಇದೀಗ ಹಿಮಾಚಲ ಪ್ರದೇಶ ಕಾಂಗ್ರೆಸ್ ಚಾಲನಾ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರವಾನಿಸಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳುಗಳು ಮಾತ್ರ ಬಾಕಿ. ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯಲು ಭಾರಿ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ಗೆ ಆನಂದ್ ಶರ್ಮಾ ನಡೆ ತೀವ್ರ ಹಿನ್ನಡೆಯಾಗಿದೆ. ಪಕ್ಷದ ಪ್ರಮುಖ ನಿರ್ಧಾರಗಳಿಂದ ತನನ್ನು ಹೊರಗಿಡಲಾಗಿದೆ. ತನಗೆ ತಿಳಿಸದಂತೆ ಪಕ್ಷ ಹಲವು ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್ ತೆಗೆದುಕೊಂಡಿರುವ ಬಹುತೇಕ ನಿರ್ಧಾರಗಳು ನನಗೆ ಅರಿವಿಲ್ಲದಂತೆ ತೆಗೆದುಕೊಳ್ಳಲಾಗಿದೆ. ಸ್ವಾಭಿಮಾನಕ್ಕೆ ಧಕ್ಕೆ ತಂದು ಈ ಹುದ್ದೆಯಲ್ಲಿರುವುದಿಲ್ಲ ಎಂದು ಆನಂದ್ ಶರ್ಮಾ ಕಾಂಗ್ರೆಸ್ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ.
Jammu Kashmir Politics: ಬಂಡೆದ್ದ ಗುಲಾಂ ನಬಿ ಆಜಾದ್ ಶೀಘ್ರ ಹೊಸ ಪಕ್ಷ ಸ್ಥಾಪನೆ ಸುಳಿವು!
ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆ ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಎರಡೂವರೆ ತಿಂಗಳು ಇರುವಾಗಲೇ ಹಿಮಾಚಲ ಪ್ರದೇಶದಲ್ಲಿ ಬಂಡಾಯದ ಬಿಸಿ ಹೆಚ್ಚಾಗಿದೆ. ಇದೇ ವರ್ಷದ ಎಪ್ರಿಲ್ 26ಕ್ಕೆ ಆನಂದ್ ಶರ್ಮಾ ಅವರನ್ನು ಹಿಮಾಚಲ ಪ್ರದೇಶ ಕಾಂಗ್ರೆಸ್ ಚಾಲನಾ ಸಮಿತಿ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಕೆಲ ತಿಂಗಳಲ್ಲೇ ಆನಂದ್ ಶರ್ಮಾ ಹುದ್ದೆ ತೊರದಿದ್ದಾರೆ. ಇಷ್ಟೇ ಅಲ್ಲ ಇತ್ತೀಚಗೆ ಆನಂದ್ ಶರ್ಮಾ ಕಾಂಗ್ರೆಸ್ನಿಂದ ದೂರ ಉಳಿದುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಮುಖ್ಯಸ್ಥ ಸ್ಥಾನದಿಂದ ಗುಲಾಮ್ ನಬಿ ಆಜಾದ್ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಬಂಡಾಯ ಬಿಸಿ ಎದುರಿಸುತ್ತಿದೆ. ಅತ್ತ ಹಿರಿಯರಾದ ಅಜಾದ್ ಕೂಡ ದೂರ ಉಳಿದಿರುವುದು ತೀವ್ರ ಹಿನ್ನಡೆ ತಂದಿದೆ.
ಅಧಿಕಾರಕ್ಕಾಗಿ ಸೈದ್ದಾಂತಿಕ ವಿರೋಧಿ ನಿಲುವು; ಕಾಂಗ್ರೆಸ್ ವಿರುದ್ಧ ಪಕ್ಷದ ನಾಯಕರೇ ಗರಂ!
ಕಾಶ್ಮೀರ ಕಾಂಗ್ರೆಸ್ ಪ್ರಚಾರ ಸಮಿತಿಗೆ ಗುಲಾಂ ಗುಡ್ಬೈ
ಕಾಂಗ್ರೆಸ್ಸಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಗುಸುಗುಸು ನಡುವೆಯೇ ಜಮ್ಮು-ಕಾಶ್ಮೀರ ಕಾಂಗ್ರೆಸ್ನ ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆಗೆ ಮಂಗಳವಾರ ಸಂಜೆಯಷ್ಟೇ ನೇಮಕವಾಗಿದ್ದ ಗುಲಾಂ ನಬಿ ಆಜಾದ್ ರಾತ್ರಿ, ಆ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಾಶ್ಮೀರ ಕಾಂಗ್ರೆಸ್ ರಾಜಕೀಯ ಸಮಿತಿಗೂ ಅವರು ರಾಜೀನಾಮೆ ಕೊಟ್ಟಿದ್ದಾರೆ. ತಮ್ಮ ಸಲಹೆಗಳು ಪಾಲನೆ ಆಗುತ್ತಿಲ್ಲ ಎಂಬುದು ಅವರ ಅಸಮಾಧಾನ ಎನ್ನಲಾಗಿದೆ. ಈ ಹಿಂದೆ ಕೂಡ ‘ಜಿ-23’ ಬಂಡಾಯ ನಾಯಕರ ಸಾಲಿಗೆ ಆಜಾದ್ ಸೇರಿ ಸೋನಿಯಾ ಗಾಂಧಿ ವಿರುದ್ಧ ಬಂಡೆದ್ದಿದ್ದರು.
