ಕಾಂಗ್ರೆಸ್‌ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಗೌರವದಿಂದಲೇ ಕಾಣುತ್ತಿದೆ. ಹೀಗಾಗಿ, ನಾನು ಮರಳಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ, ಆ ಕುರಿತು ಚರ್ಚೆಯೂ ಇಲ್ಲ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ. 

ಕೊಪ್ಪಳ (ಜು.27): ಕಾಂಗ್ರೆಸ್‌ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಗೌರವದಿಂದಲೇ ಕಾಣುತ್ತಿದೆ. ಹೀಗಾಗಿ, ನಾನು ಮರಳಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ, ಆ ಕುರಿತು ಚರ್ಚೆಯೂ ಇಲ್ಲ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಆಗದ ಸ್ಥಿತಿ ಬಿಜೆಪಿಗೆ ಬಂದಿದೆ. ನಾನು ಜನಸಂಘದಿಂದಲೇ ಪಕ್ಷದಲ್ಲಿ ಇದ್ದೇನೆ. 

ಯಾವೊಬ್ಬ ಲಿಂಗಾಯತ ನಾಯಕರು ಇಲ್ಲದ ವೇಳೆಯಲ್ಲಿ ನಾನು ಅಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ, ನನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡರು. ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರು. ನನ್ನನ್ನು ಸೋಲಿಸಲು ಯತ್ನಿಸಿದ ಬಿಜೆಪಿ, ರಾಜ್ಯದಲ್ಲಿ ತಾನೇ ಅಧಿಕಾರ ಕಳೆದುಕೊಂಡಿತು. ಬಿಜೆಪಿಯಲ್ಲಿ ಯಾವುದೇ ತತ್ವ, ಸಿದ್ಧಾಂತ ಈಗ ಉಳಿದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ನಮ್ಮಂತವರಿಗೆ ಟಿಕೆಟ್‌ ನೀಡಲಿಲ್ಲ. ಆದರೆ, ಕಲಬುರಗಿಯಲ್ಲಿ ರೌಡಿಶೀಟರ್‌ಗೆ ಟಿಕೆಟ್‌ ನೀಡಿದ್ದಾರೆ ಎಂದರು. 

ವೈದ್ಯರೇ ರೋಗಿಗಳಿಗೆ ನಗುಮುಖದಿಂದ ಚಿಕಿತ್ಸೆ ನೀಡಿ: ಸಚಿವ ದಿನೇಶ್‌ ಗುಂಡೂರಾವ್‌

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕೋ, ಬೇಡವೋ ಎನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್‌ 15-20 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ. ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದೆ. ಕಾಂಗ್ರೆಸ್‌ ಸಂಘಟನೆ ಉತ್ತಮವಾಗಿದೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ 15-20 ಸ್ಥಾನಗಳಲ್ಲಿ ಗೆಲುವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ ಎಂದರು. ಈಗಂತೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಮುಂದುವರಿಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಕೆಲವರ ಕಪಿಮುಷ್ಠಿಯಲ್ಲಿ ಬಿಜೆಪಿ: ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಠಿಯಲ್ಲಿದೆ ಅನ್ನೋದು ನಾನು ಮೊದಲಿಂದ ಹೇಳುತ್ತಾ ಬಂದಿದ್ದೇನೆ. ಅದು ಈಗ ಸಾಬೀತಾಗಿದೆ. ಇದರಿಂದ ಬಿಜೆಪಿ ಇನ್ನೂ ಹೊರಬಂದಿಲ್ಲ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಎನ್ನುವುದು ಸಂಪೂರ್ಣವಾಗಿ ಹೋಗಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನಿಲ್ಲದಿರುವುದು ನಾನು ಎಂದಿಗೂ ನೋಡಿಲ್ಲ. ಇದು ಬಿಜೆಪಿ ಲೀಡರ್‌ ಲೇಸ್‌ ಕರ್ನಾಟಕ ಎನ್ನುವುದನ್ನು ತೋರಿಸಿಕೊಟ್ಟಿದೆ. ಇದರಿಂದಾಗಿ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಬಿಜೆಪಿ ಕುಸಿಯುತ್ತಿದೆ, ಕಾಂಗ್ರೆಸ್‌ ಬಲಿಷ್ಠವಾಗುತ್ತಿದೆ. ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

9 ವರ್ಷ ಏನು ಮಾಡಿದರು?: ಏಕರೂಪ ನಾಗರಿಕ ಕಾನೂನು ಚುನಾವಣೆ ಗಿಮಿಕ್‌. ಮೋದಿ ಸರ್ಕಾರ ತನ್ನ ಮೊದಲ ಪ್ರಣಾಳಿಕೆಯಲ್ಲಿಯೇ ಈ ಕಾನೂನು ಘೋಷಣೆ ಮಾಡಿತ್ತು. ಆದರೆ, 9 ವರ್ಷ ಜಾರಿ ಮಾಡದೆ ಈಗ ಚುನಾವಣೆಯ ಸಮಯದಲ್ಲಿ ಜಾರಿ ಮಾಡುತ್ತದೆ ಅಂದರೆ ಏನು ಅರ್ಥ? ಯಾವುದೇ ಚರ್ಚೆ ಆಗದೇ ತರಾತುರಿಯಲ್ಲಿ ಕಾನೂನು ಜಾರಿ ಮಾಡುತ್ತಿರುವುದು ಚುನಾವಣೆ ಉದ್ದೇಶದಿಂದ ಎಂಬುದು ಸ್ಪಷ್ಟವಾಗಿದೆ ಎಂದರು. ನಂದಿನಿ ಹಾಲಿನ ದರ ಏರಿಕೆ ಬಹಳಷ್ಟುದಿನದಿಂದ ಇತ್ತು. ಈ ಬಗ್ಗೆ ರೈತ ಮತ್ತು ಸರಬರಾಜು ಮಾಡುವವರ ಜೊತೆಗೆ ಚರ್ಚೆ ನಡೆಯುತ್ತಿದೆ. 

ಮಳೆ ಹಾಗೂ ಪ್ರವಾಹದ ಸಂದರ್ಭದಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಿ: ಸಿದ್ದರಾಮಯ್ಯ

ಎಲ್ಲ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಏನಾದರೂ ಯೋಜನೆ ಜಾರಿ ಮಾಡಬೇಕಾದರೆ ದರ ಏರಿಕೆ ಅನಿವಾರ್ಯವಾಗುತ್ತದೆ ಎಂದರು. ಬಿ.ಕೆ. ಹರಿಪ್ರಸಾದ್‌ ಅಸಮಾಧಾನ ವಿಚಾರವಾಗಿ ಮಾತನಾಡಿದ ಶೆಟ್ಟರ್‌, ಎಲ್ಲ ಆಕಾಂಕ್ಷಿತರನ್ನು ಸಮಾಧಾನ ಮಾಡಲು ಎಲ್ಲ ಸಮಯದಲ್ಲಿ ಸಾಧ್ಯವಿಲ್ಲ. ಸಣ್ಣ-ಪುಟ್ಟಅಸಮಾಧಾನಗಳಿವೆ. ಅದನ್ನು ಸರಿಪಡಿಸುವ ಶಕ್ತಿ ಕಾಂಗ್ರೆಸ್‌ ನಾಯಕರಿಗಿದ್ದು, ಎಲ್ಲ ಅಸಮಾಧಾನ ಸರಿ ಮಾಡಿಕೊಂಡು ಉತ್ತಮ ಆಡಳಿತ ನೀಡುತ್ತೇವೆ ಎಂದರು.