ಬಿಜೆಪಿ ಇನ್ನೂ ತಿರುಕನ ಕನಸು ಕಾಣ್ತಾ ಇದೆ. ಕಾಂಗ್ರೆಸ್‌ 136 ಸ್ಥಾನಗಳನ್ನು ಗಳಿಸಿ ಭದ್ರವಾಗಿದ್ದು, ಲೋಕಸಭೆ ಚುನಾವಣೆ ಬಳಿಕ ಬೀಳುತ್ತದೆ ಎನ್ನುವುದು ಕೇವಲ ಅವರ ಭ್ರಮೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. 

ಕಾರಟಗಿ (ಅ.24): ಬಿಜೆಪಿ ಇನ್ನೂ ತಿರುಕನ ಕನಸು ಕಾಣ್ತಾ ಇದೆ. ಕಾಂಗ್ರೆಸ್‌ 136 ಸ್ಥಾನಗಳನ್ನು ಗಳಿಸಿ ಭದ್ರವಾಗಿದ್ದು, ಲೋಕಸಭೆ ಚುನಾವಣೆ ಬಳಿಕ ಬೀಳುತ್ತದೆ ಎನ್ನುವುದು ಕೇವಲ ಅವರ ಭ್ರಮೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವಾಗ ಮಾರ್ಗಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಅವರು ಮಾತನಾಡಿದರು. ಸೋಲಿನ ಹತಾಶೆ ಬಿಜೆಪಿಯನ್ನು ಇನ್ನೂ ಕಾಡುತ್ತಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದಷ್ಟು ಪಕ್ಷ ಕುಸಿದಿದೆ. ಆದರೂ ಮಾಜಿ ಡಿಸಿಎಂ ಕೆ.ಎಸ್‌. ಈಶ್ವರಪ್ಪ ಅವರಿಗೆ ಸರ್ಕಾರ ಬೀಳುತ್ತದೆ ಎನ್ನುವ ಭ್ರಮೆ ಇನ್ನೂ ಹೋಗಿಲ್ಲ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿರೋಧ ಪಕ್ಷದ ನಾಯಕನನ್ನು ಮೊದಲು ಬಿಜೆಪಿ ಆಯ್ಕೆ ಮಾಡಿಕೊಳ್ಳಲಿ. ಜತೆಗೆ ಒಬ್ಬ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳಲಿ. ಚೇತರಿಸಿಕೊಳ್ಳದ ಸ್ಥಿತಿಯಲ್ಲಿರುವ ಬಿಜೆಪಿ ಕಾರ್ಯಕರ್ತರನ್ನು ಮೇಲೇಳಿಸುವ ಕೆಲಸವನ್ನು ಈಶ್ವರಪ್ಪ ಮೊದಲು ಮಾಡಲಿ. ಅದು ಬಿಟ್ಟು ಸದೃಢವಾಗಿರುವ ಕಾಂಗ್ರೆಸ್‌ನ ಭವಿಷ್ಯದ ಮಾತನಾಡುವುದು ಬಿಡಲಿ ಎಂದು ತಾಕೀತು ಮಾಡಿದರು. ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರ ತನ್ನ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು ಲೋಕಸಭಾ ಸ್ಥಾನಗಳಲ್ಲಿ 12-15 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಒಂದು ವೇಳೆ ಬಿಜೆಪಿ ಕೇಂದ್ರ ನಾಯಕರು ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ಹಿರಿಯ ನಾಯಕರನ್ನು ತುಳಿದರೆ ಆ ಪಕ್ಷಕ್ಕೆ 5-10 ಸ್ಥಾನ ಮಾತ್ರ ಕಾಯಂ ಆಗುವ ಸಾಧ್ಯತೆ ಇದೆ ಎಂದರು. ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿಗೆ ಯಾವುದೇ ಅರ್ಥ ಕಲ್ಪಿಸಬಾರದು. ಇನ್ನು ಅವರ ಭೇಟಿಯಲ್ಲಿ ಉಭಯ ಕುಶಲೋಪರಿ ಇತ್ತೇ ಹೊರತು ರಾಜಕೀಯದ ಮಾತುಕತೆಗೆ ಅವಕಾಶ ಇದ್ದಿಲ್ಲ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ: ರಕ್ಷಾ ರಾಮಯ್ಯ

ಸನ್ಮಾನ: ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು ಗೌರವಿಸಿದರು. ವಿಶೇಷ ಎಪಿಎಂಸಿ ಮಾಜಿ ಸದಸ್ಯ ನಾಗರಾಜ ಅರಳಿ, ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಮಂಜುನಾಥ ಮೇಗೂರು, ಪ್ರಕಾಶ್ ಹಿರೇಮಠ, ಹಿಂದಪುರ ಬಸವರಾಜ್ ಯಮನಪ್ಪ ಮೂಲಿಮನಿ, ಯಂಕೋಜಿ ಆರೇರ್, ತಿಪ್ಪೇಶ ಉಪನಾಳ, ರಮೇಶ ಕೋಟ್ಯಾಳ, ಬಸವರಾಜ ತೊಂತನಾಳ, ಬಸವರಾಜ ಚಿನಿವಾಲ, ಪುರುಷೋತ್ತಮ, ರವಿರಾಜ್ ಅರಳಿ ಇದ್ದರು.