ಬಿಜೆಪಿ ಮುಖಂಡರ ಸವಾಲು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ ಶಾಸಕ ಪ್ರದೀಪ್ ಈಶ್ವರ್, ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಪೊರಕೆ, ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಎರಡೂ ಪಕ್ಷಗಳ ನಡುವೆ ಘೋಷಣೆಗಳ ಸಮರ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.
ದಾವಣಗೆರೆ (ಮಾ.29): ತಾಕತ್ತಿದ್ದರೆ ದಾವಣಗೆರೆಗೆ ಬಾ ಎಂಬ ಬಿಜೆಪಿ ಮುಖಂಡ ಬಿ.ಜಿ.ಅಜಯಕುಮಾರ್ ಸವಾಲನ್ನು ಸ್ವೀಕರಿಸಿ ಶನಿವಾರ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ಪ್ರಚಾರ ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ಧ ಕಿಡಿಕಾರಿದ್ದು, ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಪೊರಕೆ ಹಿಡಿದು ಚಪ್ಪಲಿ ತೋರಿಸಿದ ಬಿಜೆಪಿ
ನಗರದ ಕೆ.ಬಿ.ಬಡಾವಣೆಯಲ್ಲಿ ಶನಿವಾರ ಬಿಎಂಡಬ್ಲ್ಯು ಕಾರಿನ ಮೇಲೆ ನಿಂತ ಪ್ರದೀಪ ಈಶ್ವರ ಕಾಂಗ್ರೆಸ್ ಬಾವುಟ ಹಿಡಿದು, ತೊಡೆತಟ್ಟುತ್ತಾ, ತಲೆಗೂದಲನ್ನು ಸವರಿಕೊಂಡು ಬಿಜೆಪಿಗರನ್ನು ಕೆಣಕಿದರು. ಈ ವೇಳೆ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಕೈಯಲ್ಲಿ ಪೊರಕೆ ಹಿಡಿದು ತೋರಿಸಿ ಆಕ್ರೋಶ ಹೊರಹಾಕಿದರು.
ಬಿಜೆಪಿ-ಕಾಂಗ್ರೆಸ್ ಮುಖಾಮುಖಿ:ರಣರಂಗ
ಬಡಾವಣೆಯ ಬಿಜೆಪಿ ಕಚೇರಿ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಗುಂಪುಗಳು ಮುಖಾಮುಖಿಯಾಗಿ, ಪರಸ್ಪರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಕಾರಿನ ಮೇಲೆ ನಿಂತಿದ್ದ ಶಾಸಕನಿಗೆ ಬಿಜೆಪಿಯವರು ನಿಂದಿಸಿದರು. ಎರಡೂ ಕಡೆಯವರು ಪರಸ್ಪರರ ಕೈ-ಕೈ ಮಿಲಾಯಿಸುವಂತೆ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹರಸಾಹಸ ಸಮಾಧಾನ ಪಡಿಸಿದರು.


