ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದಕ್ಕೆ ಅಜೆಂಡಾ ಸಿದ್ಧಪಡಿಸಲು ಹಾಗೂ ಈ ಸಂಬಂಧ ರೋಡ್ ಮ್ಯಾಪ್ ಸಿದ್ಧಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ಸಚಿವರೊಂದಿಗೆ ಬುಧವಾರ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಬೆಂಗಳೂರು (ಆ.02): ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದಕ್ಕೆ ಅಜೆಂಡಾ ಸಿದ್ಧಪಡಿಸಲು ಹಾಗೂ ಈ ಸಂಬಂಧ ರೋಡ್ ಮ್ಯಾಪ್ ಸಿದ್ಧಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ಸಚಿವರೊಂದಿಗೆ ಬುಧವಾರ ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಲೋಕಸಭೆ ಚುನಾವಣೆಯನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಎರಡು ಹಂತಗಳಲ್ಲಿ ಸಭೆ ನಡೆಯಲಿದ್ದು, ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಪ್ರಮುಖ ಸಚಿವರು ಸೇರಿ ಸುಮಾರು 37 ಮಂದಿಯನ್ನು ಉದ್ದೇಶಿಸಿ ರಾಹುಲ್ಗಾಂಧಿ ಅವರು ಮಾತನಾಡಲಿದ್ದಾರೆ. ಈ ವೇಳೆ ಮುಖ್ಯವಾಗಿ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕ್ಷೇತ್ರವಾರು ಮಾಹಿತಿ ಪಡೆಯಲಿದ್ದಾರೆ.
ಟೋಲ್ ಸಂಗ್ರಹಿಸುವವರು ನಾವಲ್ಲ, ಹೆದ್ದಾರಿ ಪ್ರಾಧಿಕಾರದವರು: ಸಿದ್ದರಾಮಯ್ಯ
ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಪ್ರಾಥಮಿಕ ಚರ್ಚೆ ನಡೆಯಲಿದೆ. ಗೆಲ್ಲುವ ಅಭ್ಯರ್ಥಿಗಳು ಕಣಕ್ಕಿಳಿಸಲು ಈ ಕ್ಷಣದಿಂದಲೇ ಕೆಲಸ ಮಾಡುವಂತೆ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಲಿದ್ದಾರೆ. ಎಲ್ಲಾ ಸಮೀಕರಣಗಳನ್ನೂ ಕ್ರೋಢೀಕರಿಸಲು ಚುನಾವಣೆ ಗೆಲ್ಲಲು ಯಾವ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಹೋಗಬೇಕು ಎಂಬ ಬಗ್ಗೆ ರೋಡ್ ಮ್ಯಾಪ್ ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ ಮುಖ್ಯವಾಗಿ ನಿಗದಿತ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಶಾಸಕರು ಹಾಗೂ ಸಚಿವರನ್ನೇ ಲೋಕಸಭೆಗೆ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಯಾಗಲಿದೆ. ಗೆಲ್ಲುವ ಸಾಧ್ಯತೆ ಹೆಚ್ಚಿದ್ದರೆ ಅವರನ್ನೇ ಮನವೊಲಿಸಲು ಸೂಚಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಸಚಿವರಿಗೆ ರಾಗಾ ಪಾಠ: ಬಳಿಕ ಎಲ್ಲಾ ಸಚಿವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಈ ವೇಳೆ ಎಲ್ಲಾ ಸಚಿವರಿಗೂ ಎಚ್ಚರಿಕೆಯ ಪಾಠ ಮಾಡಲಿದ್ದಾರೆ. ಜತೆಗೆ ಇಲಾಖಾವಾರು ಪ್ರಗತಿ ಬಗ್ಗೆ ಮೌಲ್ಯಮಾಪನ ನಡೆಯಲಿದೆ. ಇದೇ ವೇಳೆ ಶಾಸಕರ ಅಸಮಾಧಾನದ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಸಚಿವರೂ ಎಲ್ಲಾ ರೀತಿಯಲ್ಲೂ ಬದ್ಧತೆಯಿಂದ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಜನರಲ್ಲಿ ಭರವಸೆ ಮೂಡಿಸಬೇಕು. ಗ್ಯಾರಂಟಿ ಯೋಜನೆಗಳ ಲಾಭ ಮತದ ರೂಪ ಪಡೆಯುವಂತೆ ಕೆಲಸ ಮಾಡಬೇಕು. ಅಗತ್ಯವಾದರೆ ಪಕ್ಷಕ್ಕಾಗಿ ಸ್ಪರ್ಧೆಗೂ ಸಿದ್ಧವಿರಬೇಕು ಎಂದು ಸಲಹೆ ನೀಡುವ ಸಾಧ್ಯತೆಯಿದೆ.
ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆ: ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿರೋಧಪಕ್ಷಗಳು ಷಡ್ಯಂತ್ರ ನಡೆಸಿ ಭ್ರಷ್ಟಾಚಾರದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಿವೆ. ಈ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಲಿವೆ ಎಂಬ ಮಾಹಿತಿಗಳು ಬಂದಿವೆ. ಹೀಗಾಗಿ ಕಟ್ಟೆಚ್ಚರದಿಂದ ಕೆಲಸ ಮಾಡಬೇಕು ಎಂದು ರಾಹುಲ್ಗಾಂಧಿ ಎಚ್ಚರಿಸುವ ಸಾಧ್ಯತೆಯಿದೆ.
ಸಭೆ ಮುಂದೂಡಿಕೆ: ಈ ಮೊದಲು ವಿರೋಧಪಕ್ಷಗಳ ನಾಯಕರ ಸಭೆಗೆ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ರಾಹುಲ್ಗಾಂಧಿ ಅವರು ಜು.17 ರಂದೇ ರಾಜ್ಯ ಸಚಿವರೊಂದಿಗೆ ಸಭೆ ನಡೆಸುವ ನಿರೀಕ್ಷೆಯಿತ್ತು. ಕೇರಳ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ನಿಧನದಿಂದ ಸಭೆ ಮುಂದೂಡಲಾಗಿತ್ತು.
ಸಿದ್ದುಗೆ ಪತ್ರ ಬರೆದಿದ್ದಕ್ಕೆ ಕ್ಷಮೆ ಕೇಳಿಲ್ಲ: ಶಾಸಕ ಬಿ.ಆರ್.ಪಾಟೀಲ್
ಸಭೆಯಲ್ಲಿ ಏನು ಚರ್ಚೆ?
- 2024ರಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳ ಕಣಕ್ಕಿಳಿಸುವ ಕುರಿತು ಚರ್ಚೆ
- ಯಾವ ಅಜೆಂಡಾ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕೆಂಬುದರ ಬಗ್ಗೆ ಮಾತುಕತೆ
- ಗೆಲ್ಲುವ ಸಾಮರ್ಥ್ಯವಿರುವ ಹಾಲಿ ಶಾಸಕ, ಸಚಿವರನ್ನು ಸಂಸತ್ ಕಣಕ್ಕಿಳಿಸುವ ಕುರಿತು ಚರ್ಚೆ
- ಗೆಲ್ಲುವ ಸಾಧ್ಯತೆಯಿದ್ದರೆ ಈಗಿನಿಂದಲೇ ಅವರ ಮನವೊಲಿಸಿ ಸ್ಪರ್ಧೆಗೆ ಸಿದ್ಧಪಡಿಸಲು ಸೂಚನೆ
- ಸಚಿವರ ಸಾಧನೆ ಪರಿಶೀಲನೆ ನಡೆಸಿ, ಶಾಸಕರ ಅಸಮಾಧಾನದ ಕುರಿತೂ ಚರ್ಚಿಸುವ ಸಾಧ್ಯತೆ
- ಗ್ಯಾರಂಟಿ ಯೋಜನೆಗಳನ್ನು ಮತವಾಗಿ ಪರಿವರ್ತಿಸಲು ಕೆಲಸ ಮಾಡುವಂತೆ ಸೂಚನೆ ಸಂಭವ
- ವಿರೋಧ ಪಕ್ಷಗಳು ಭ್ರಷ್ಟಾಚಾರ ಕೇಸಲ್ಲಿ ಸಿಲುಕಿಸಬಹುದು, ಎಚ್ಚರವಾಗಿರಿ ಎಂಬ ಸೂಚನೆ?
